
ಬೆಂಗಳೂರು (ಜು.08): ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಗಳನ್ನು ಅಧಿಕಾರಕ್ಕೆ ಬಂದ 45 ದಿನಗಳ ಒಳಗೇ ಜಾರಿ ಮಾಡಿದ್ದೇವೆ. ಇದನ್ನು ಪ್ರತಿಯೊಬ್ಬ ಮತದಾರರಿಗೆ ಅರ್ಥ ಮಾಡಿಸಿ, ವಿಧಾನಸಭೆ ಅಧಿವೇಶನದಲ್ಲಿ ಎದೆ ಎತ್ತಿ ಹೆಮ್ಮೆಯಿಂದ ಮಾತನಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಶಾಸಕರನ್ನು ಹುರಿದುಂಬಿಸಿದ್ದಾರೆ.
ಸಂಪುಟ ಸಭೆಗೂ ಮುನ್ನ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು. ನಾವು 2013 ಚುನಾವಣೆ ವೇಳೆ ನೋಡಿದ್ದ ಭರವಸೆಗಳನ್ನು ಸರ್ಕಾರ ನಡೆಸಿದ ಐದು ವರ್ಷಗಳಲ್ಲಿ ಈಡೇರಿಸಿ ನುಡಿದಂತೆ ನಡೆದ ಸರ್ಕಾರ ಎನ್ನುವ ಹೆಗ್ಗಳಿಕೆ ಗಳಿಸಿದ್ದೇವೆ. ಬಿಜೆಪಿ 2018ರ ಚುನಾವಣೆ ವೇಳೆ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 608 ಭರವಸೆಗಳಲ್ಲಿ ಶೇ.95ರಷ್ಟನ್ನು ಈಡೇರಿಸಲೇ ಇಲ್ಲ. ಹೀಗಾಗಿ ಬಿಜೆಪಿಗೆ ನಮ್ಮ ಕಡೆ ಬೊಟ್ಟು ಮಾಡುವ ನೈತಿಕತೆಯೇ ಇಲ್ಲ. ಹೀಗಾಗಿ ಅಧಿವೇಶನದಲ್ಲಿ ಸುಳ್ಳುಗಳಿಗೆ ಅವರು ಜೋತು ಬೀಳುತ್ತಾರೆ. ನೀವು ಖಚಿತವಾದ ಧ್ವನಿಯಲ್ಲಿ ಸತ್ಯವನ್ನು ಮಾತನಾಡಿ ಎಂದು ತಿಳಿಸಿದರು.
ನನ್ನ ಪುತ್ರನ ಭ್ರಷ್ಟಾಚಾರ ಎಚ್ಡಿಕೆ ಕಲ್ಪನಾ ವಿಲಾಸ: ಸಿಎಂ ಸಿದ್ದರಾಮಯ್ಯ
2023ರ ಚುನಾವಣೆ ವೇಳೆ ನಾವು ನೀಡಿದ್ದ ಐದು ಗ್ಯಾರಂಟಿಗಳನ್ನೂ ಈಡೇರಿಸಲು ಶುರು ಮಾಡಿದ್ದೇವೆ. ಕೋಟಿಗಟ್ಟಲೆ ಕನ್ನಡಿಗರು ಈಗಾಗಲೇ ನಮ್ಮ ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ. ಬಿಜೆಪಿ ಕಾರ್ಯಕರ್ತರು, ಬೆಂಬಲಿಗರೂ ಅರ್ಜಿ ಸಲ್ಲಿಸಿ ಫಲಾನುಭವಿಗಳಾಗುತ್ತಿದ್ದಾರೆ. ಇದನ್ನು ನಾವು ಸ್ವಾಗತಿಸಬೇಕು. ಕಾಂಗ್ರೆಸ್ ಶಾಸಕರು, ಕಾರ್ಯಕರ್ತರು, ಅಭಿಮಾನಿಗಳು ಮತ್ತು ಮತದಾರರು ತಲೆ ಎತ್ತಿ ಹೆಮ್ಮೆ ಪಡುವ ಸಂದರ್ಭವನ್ನು ನಮ್ಮ ಸರ್ಕಾರ ಸೃಷ್ಟಿಸಿದೆ ಎಂದರು. ಐದು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಮತ್ತು ಆಯವ್ಯಯ ಮಂಡಿಸುವುದು ಈ ಬಾರಿ ಸವಾಲಾಗಿತ್ತು.
6 ತಿಂಗಳಲ್ಲಿ ಸರ್ಕಾರಕ್ಕೆ ಏನು ಮಾಡ್ತೇನೆ ನೋಡಿ: ಎಚ್ಡಿಕೆ ಸವಾಲು
ಹೀಗಾಗಿ ನಾನು ಸರಣಿ ಸಭೆಗಳನ್ನು ಅಧಿಕಾರಿಗಳ ಜತೆ ನಡೆಸುತ್ತಿದ್ದೆ. ಈ ಸಂದರ್ಭದಲ್ಲಿ ಶಾಸಕರಿಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು. ಈ ಅಧಿವೇಶನವನ್ನು ಹಳಬರು ಮತ್ತು ನೂತನ ಶಾಸಕರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ವಿಷಯ ತಜ್ಞರಾಗಿ, ಅಧ್ಯಯನಶೀಲರಾಗಿ ಸಕಲ ಸಿದ್ಧತೆಗಳೊಂದಿಗೆ ಬಂದು ಬಿಜೆಪಿಯವರ ಸುಳ್ಳುಗಳಿಗೆ, ಜೆಡಿಎಸ್ನವರ ಡ್ರಾಮಾಗಳಿಗೆ ಅರ್ಥಪೂರ್ಣವಾಗಿ ಉತ್ತರಿಸಿ ಎಂದು ಸಲಹೆ ನೀಡಿದರು. ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಎಲ್ಲಾ ಸಚಿವರು ಮತ್ತು ಶಾಸಕರು, ವಿಧಾನ ಪರಿಷತ್ ಸದಸ್ಯರು ಸಭೆಯಲ್ಲಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.