ರಾಜಕೀಯ ಗುರು ಸಿದ್ದರಾಮಯ್ಯ ವಿರುದ್ಧವೇ ತೊಡೆ ತಟ್ಟಿದ ಮಾಜಿ ಶಿಷ್ಯ ವರ್ತೂರು ಪ್ರಕಾಶ್..!

By Girish GoudarFirst Published Dec 20, 2022, 11:16 PM IST
Highlights

ಮಾಜಿ ಸಚಿವ ವರ್ತೂರ್ ಪ್ರಕಾಶ್ ತಮ್ಮ 56 ನೇ ಹುಟ್ಟುಹಬ್ಬವನ್ನು ಕೋಲಾರದ ಹೊರವಲಯದ ಬೈರೇಗೌಡ ಬಡಾವಣೆಯಲ್ಲಿ ಭರ್ಜರಿಯಾಗಿ ಆಚರಣೆ ಮಾಡಿಕೊಂಡರು. ಹುಟ್ಟುಹಬ್ಬವನ್ನೇ ನೆಪವಾಗಿಟ್ಟುಕೊಂಡು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ವರ್ತೂರ್ ಪ್ರಕಾಶ್ ಇವತ್ತು ಸಾವಿರಾರು ಜನರನ್ನು ಸೇರಿಸಿದ್ರು. 

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ 

ಕೋಲಾರ(ಡಿ.20): ಸಿದ್ದರಾಮಯ್ಯ ಕೋಲಾರಕ್ಕೆ ಬರ್ತಾರೆ ಅನ್ನೋ ಕಾರಣಕ್ಕೆ ಕೋಲಾರ ಕ್ಷೇತ್ರ ಸದ್ಯ ರಾಜ್ಯ ರಾಜಕಾರಣದ ಕೇಂದ್ರ ಬಿಂದು. ಹೀಗಿರುವಾಗಲೇ ಬಿಜೆಪಿ ಸಂಭವನೀಯ ಅಭ್ಯರ್ಥಿ ವರ್ತೂರ್ ಪ್ರಕಾಶ ತಮ್ಮ ಹುಟ್ಟುಹಬ್ಬದ ಮೂಲಕವೇ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಆದರೆ ಅಲ್ಲಿ ಬಿರಿಯಾನಿಗಾಗಿ ಜನರು ಮುಗಿಬಿದ್ದರು. ಬರ್ತ್‌ಡೇ ಬಿರಿಯಾನಿ ಪಾಲಿಟಿಕ್ಸ್ ಕುರಿತ ಸ್ಟೋರಿ ಇಲ್ಲಿದೆ ನೋಡಿ.

Latest Videos

ಇಲ್ಲೊಂದು ಪೀಸ್ ಹಾಕಣ್ಣೋ, ನನಗೆ ಎರಡು ಪೀಸ್ ಜಾಸ್ತಿ ಹಾಕಣ್ಣ ಎಂದು ಬಿರಿಯಾಗಿನಿಗಾಗಿ ನಡೆಯುತ್ತಿರುವ ಹೋರಾಟ, ಕಿಕ್ಕಿರಿದು ಸೇರಿರುವ ಜನರನ್ನು ನಿಯಂತ್ರಿಸಲು ಲಾಠಿ ಚಾರ್ಜ್ ಮಾಡುತ್ತಿರುವ ಪೊಲೀಸರು, ಪೊಲೀಸರ ಲಾಠಿ ಏಟಿಗೆ ತಲೆ ಒಡೆದುಕೊಂಡು ರಕ್ತ ಒರೆಸಿ ಕೊಳ್ಳುತ್ತಿರುವ ವೃದ್ದ ಇದೆಲ್ಲಾ ದೃಷ್ಯಗಳು ಕಂಡು ಬಂದಿದ್ದು ಕೋಲಾರದಲ್ಲಿ.ಇವತ್ತು ಮಾಜಿ ಸಚಿವ ವರ್ತೂರ್ ಪ್ರಕಾಶ್ ತಮ್ಮ 56 ನೇ ಹುಟ್ಟುಹಬ್ಬವನ್ನು ಕೋಲಾರದ ಹೊರವಲಯದ ಬೈರೇಗೌಡ ಬಡಾವಣೆಯಲ್ಲಿ ಭರ್ಜರಿಯಾಗಿ ಆಚರಣೆ ಮಾಡಿಕೊಂಡರು. ಹುಟ್ಟುಹಬ್ಬವನ್ನೇ ನೆಪವಾಗಿಟ್ಟುಕೊಂಡು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದ ವರ್ತೂರ್ ಪ್ರಕಾಶ್ ಇವತ್ತು ಸಾವಿರಾರು ಜನರನ್ನು ಸೇರಿಸಿದ್ರು. ಕೋಲಾರ ಕ್ಷೇತ್ರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪರ್ಧೆ ಕೇಳಿ ಬರುತ್ತಿದ್ದಂತೆ ಈಗಾಗಲೇ  ರಾಜಕೀಯ ಸಂಚಲನ ಮೂಡಿದೆ. ಜೊತೆಗೆ ಬಿಜೆಪಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಸಚಿವ ವರ್ತೂರು ಪ್ರಕಾಶ್ ಹುಟ್ಟುಹಬ್ಬದ ನೆಪದಲ್ಲಿ ಚುನವಣೆಗೆ ಭರ್ಜರಿ ತಯಾರಿ ಮಾಡಿಕೊಂಡಿದ್ದು. ಸುಮಾರು 20 ಸಾವಿರ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿ 50 ಕ್ಕೂ ಹೆಚ್ಚು ಬಾಣಸಿಗರಿಂದ 6 ಟನ್ ನಷ್ಟು ಚಿಕನ್ ಬಿರಿಯಾನಿ ಹಾಗೂ 1 ಟನ್ ಚಿಕನ್ ಗ್ರೇವಿ ತಯಾರು ಮಾಡಲಾಗಿತ್ತು.

ticket fight: ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸ್ತಾರಾ?

ಇನ್ನೂ ಭರ್ಜರಿ ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಬೃಹತ್ ವೇದಿಕೆಯಲ್ಲಿ 56 ಕೆಜಿಯ ಕೇಕ್ ಕತ್ತರಿಸಿದ ವರ್ತರ್ ಪ್ರಕಾಶ್ ಅವರಿಗೆ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಲು ಆರೋಗ್ಯ ಸಚಿವರಾದ ಸುಧಾಕರ್ ಮತ್ತು ಉಸ್ತುವಾರಿ ಸಚಿವ ಮುನಿರತ್ನ ಅವರು ಆಗಮಿಸಿ ಶುಭ ಕೋರಿದರು. ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿದ್ವಯರು ಮುಂದಿನ 2023 ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ವರ್ತೂರ್ ಪ್ರಕಾಶ್ ಕೋಲಾರ ಶಾಸಕರಾಗವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡಲು ನಾವು ಇಬ್ಬರು ಸಿದ್ದವೆಂದರು.ಅಲ್ಲದೆ ಸಚಿವ ಸುಧಾಕರ್ ಸಿನಿಮಾ ಡೈಲಾಗ್ ಹೇಳುವ ಮೂಲಕ ವರ್ತೂರ್ ಪ್ರಕಾಶ್ ಅವರನ್ನು ಹಾಡಿ ಹೊಗಳಿದರು.

ಇನ್ನು ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಬರುವ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಮುಖಂಡರಿಗಾಗಿ ಭರ್ಜರಿ ಬಿರಿಯಾನಿ ಬಾಡೂಟ ತಯಾರಿ ಮಾಡಲಾಗಿತ್ತು. ಸುಮಾರು 20 ಸಾವಿರ ಜನರಿಗಾಗಿ ಬಿರಿಯಾನಿ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಬಿರಿಯಾನಿಗಾಗಿ ಮುಗಿಬಿದ್ದರು. ಬಿರಿಯಾನಿ ವಿತರಣೆ ಮಾಡಲು ಸುಮಾರು 50 ಕೌಂಟರ್‌ಗಳನ್ನು ಮಾಡಲಾಗಿತ್ತಾದರೂ ಬಿರಿಯಾನಿ ಹಾಕುವ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ತಳ್ಳಾಟ ನೂಕಾಟ ಉಂಟಾಯಿತು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು,ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲಾಗದೆ ಪೊಲೀಸರು ಲಾಠಿ ಬೀಸಿದರು. ಈ ವೇಳೆ ಒರ್ವ ವೃದ್ದನಿಗೆ ಲಾಠಿ ಏಟು ಬಿದ್ದು ತಲೆಯಲ್ಲಿ ರಕ್ತ ಸುರಿಯುತ್ತಿತ್ತು.ಈ ನಡುವೆಯೇ ಆತನನ್ನು ಕಾರ್ಯಕರ್ತರು ಆಸ್ಪತ್ರೆಗೆ ಕಳುಹಿಸಿದರು. ಅಷ್ಟಾದರೂ ಸುಮ್ಮನಾಗದ ಕಾರ್ಯಕರ್ತರು ಬಿರಿಯಾನಿಗಾಗಿ ನೂಕುನುಗ್ಗಲು ಉಂಟಾದ ಪರಿಣಾಮ ಬಿರಿಯಾನಿ ಪಾತ್ರೆಗೆ ಜನರು ಕೈ ಹಾಕಿದರು. ಜೊತೆಗೆ ಕೆಲವರು ಗೋಣಿ ಚೀಲ, ಕವರ್, ಟವಲ್ ಸಿಕ್ಕಿದ್ದರಲ್ಲಿ ತುಂಬಿಕೊಂಡು ಹೊರಟರು.ಸುಮಾರು 6 ಸಾವಿರ ಕೆ.ಜಿ ಚಿಕನ್ ಬಿರಿಯಾನಿ ಸಿದ್ದ ಮಾಡಿದರೂ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ನೂಕುನುಗ್ಗಲು ಏರ್ಪಟ್ಟಿತು. ಆದರೂ ವರ್ತೂರ್ ಪ್ರಕಾಶ್ ಮುಖಂಡರುಗಳು ಸಂಜೆ ವರೆಗೂ ಬರುವ ಜನರಿಗೆ ಬಿರಿಯಾನಿ ಹಂಚಿಕೆ ಮಾಡಿದರು.
ಈ ವೇಳೆ ಮಾತನಾಡಿದ ವರ್ತೂರ್ ಪ್ರಕಾಶ್ ಹಾಗೂ ಬೆಂಬಲಿಗ ಜನ ನಮ್ಮ ನಿರೀಕ್ಷೆಗೂ ಹೆಚ್ಚಿನ ಸಂಖ್ಯೆಯಲ್ಲಿ ಬಂದ್ದಿದ್ದಾರೆ, ಅವರಿಗೆಲ್ಲರಿಗೂ ಬಿರಿಯಾನಿ ಮಾಡಲಾಗಿದೆ. ಇನ್ನೂ ಇದೆ ವೇಳೆ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನ ಕಿಡಿಗೇಡಿಗಳು ಹರಿದು ಹಾಕಿದ್ದಾರೆ ಎಂದು ಅವರ ಬೆಂಬಲಿಗ ಆಕ್ರೋಶ ಹೊರಹಾಕಿದ್ರು.

ಒಟ್ನಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಒಂದಿಲ್ಲೊಂದು ರೀತಿಯಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಮಾಜಿ ಸಚಿವ ವರ್ತೂರ್ ಪ್ರಕಾಶ್ ಭರ್ಜರಿ ಶಕ್ತಿ ಪ್ರದರ್ಶನ ಮಾಡಿದ್ರು. ಆದ್ರೆ ನಿರೀಕ್ಷೆಯಂತೆ ಎಲ್ಲವೂ ನಡೆಯಿತ್ತಾದರೂ ಕೊನೆಗೆ ಬಿರಿಯಾನಿ ಹಂಚಿಕೆ ಮಾಡುವ ವೇಳೆ ಉಂಟಾದ ಗೊಂದಲದಿಂದ ಕಾರ್ಯಕರ್ತರು ಲಾಠಿ ಏಟು ತಿನ್ನುವ ಸ್ಥಿತಿ ನಿರ್ಮಾಣವಾಯ್ತು. ಒಂದೂ ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶಿಷ್ಯ ಜೊತೆಗೆ ಕುರುಬ ಸಮಾಜದ ಮುಖಂಡರು ಆಗಿರುವ ಮಾಜಿ ಸಚಿವ ವರ್ತೂರು ಪ್ರಕಾಶ್ ರವರು ತಮ್ಮ ರಾಜಕೀಯ ಗುರು ಸಿದ್ದರಾಮಯ್ಯ ವಿರುದ್ಧವೇ ತೊಡೆ ತಟ್ಟಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಏನಾದ್ರು ಸ್ಪರ್ಧೆ ಮಾಡಿದ್ರೆ ನಾನು 50 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತೇನೆ ಎಂದು ತಮ್ಮ ಹುಟ್ಟು ಹಬ್ಬದ ಆಚರಣೆಯ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದಾರೆ.
 

click me!