ಕರ್ನಾಟಕದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ 2 ಲಕ್ಷ ರೈತರ ಸಾಲಮನ್ನಾ ಹಣ ಬಿಡುಗಡೆ: ಎಚ್‌ಡಿಕೆ

By Kannadaprabha NewsFirst Published Jan 20, 2023, 10:00 PM IST
Highlights

ಮುಖ್ಯಮಂತ್ರಿ ಇದ್ದಾಗ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರೈತರ ಸಾಲಮನ್ನಾ ಮಾಡಿದ್ದೇನೆ. ಇದರಿಂದ ಸುಮಾರು 26 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ. ಬಿಜೆಪಿ ಸರ್ಕಾರ ಬಂದ ಮೇಲೆ ಸುಮಾರು 2 ಲಕ್ಷ ರೈತರಿಗೆ ಸಾಲಮನ್ನಾ ಯೋಜನೆಯ ಹಣ ನೀಡದೇ ದ್ರೋಹ ಎಸಗಿದೆ: ಕುಮಾರಸ್ವಾಮಿ. 

ದೇವರಹಿಪ್ಪರಗಿ(ಜ.20): ಜನತೆಯ ಆಶೀರ್ವಾದದಿಂದ ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ಸಾಲಮನ್ನಾ ಸೌಲಭ್ಯ ಪಡೆಯದ 2 ಲಕ್ಷ ರೈತರಿಗೆ ಹಣ ಬಿಡುಗಡೆ ಮಾಡಿ ಪಂಚರತ್ನ ಯೋಜನೆಗಳು ಜಾರಿ ತರುವ ಮೂಲಕ ರೈತರ, ದೀನದಲಿತರ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಪಟ್ಟಣದ ಅಂಬೇಡ್ಕರ್‌ ವೃತ್ತದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗುರುವಾರ ಪಂಚರತ್ನ ರಥಯಾತ್ರೆ ಅಂಗವಾಗಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಇದ್ದಾಗ ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರೈತರ ಸಾಲಮನ್ನಾ ಮಾಡಿದ್ದೇನೆ. ಇದರಿಂದ ಸುಮಾರು 26 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ. ಬಿಜೆಪಿ ಸರ್ಕಾರ ಬಂದ ಮೇಲೆ ಸುಮಾರು 2 ಲಕ್ಷ ರೈತರಿಗೆ ಸಾಲಮನ್ನಾ ಯೋಜನೆಯ ಹಣ ನೀಡದೇ ದ್ರೋಹ ಎಸಗಿದೆ ಎಂದು ದೂರಿದರು.

ನಿರಂತರ ವಿದ್ಯುತ್‌, ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲಮನ್ನಾ, 65 ವರ್ಷ ಮೇಲ್ಪಟ್ಟಎಲ್ಲ ಹಿರಿಯರಿಗೆ ಪ್ರತಿ ತಿಂಗಳು .5 ಸಾವಿರ, ವಿಧವಾ ವೇತನ ಹಾಗೂ ಅಂಗವಿಕಲರಿಗೆ ಪ್ರತಿ ತಿಂಗಳ .2.5 ಸಾವಿರ, ಸರ್ಕಾರಿ ನೌಕರರಿಗೆ ಎನ್‌ಪಿಎಸ್‌ ತೆಗೆದು ಒಪಿಎಸ್‌ ನೀಡಲಾಗುವುದು ಎಂದು ತಿಳಿಸಿದರು.

ದೊಡ್ಡಗೌಡರ ಕ್ಷಮೆ ಕೇಳದಿದ್ರೆ ಕಟೀಲ್ ವಿರುದ್ಧ ಕಪ್ಪು ಬಾವುಟ ಪ್ರದರ್ಶನ: ಸಿಎಂ ಇಬ್ರಾಹಿಂ

ಈ ಭಾಗದಲ್ಲಿ ದ್ರಾಕ್ಷಿ ಬೆಳೆಗಾರರು ಇರುವುದರಿಂದ ಪ್ರತಿ ಗ್ರಾಪಂಗೆ ಒಂದರಂತೆ ಕೋಲ್ಡ… ಸ್ಟೋರೇಜ್‌ ಹಾಗೂ ಗೋದಾಮು ನಿರ್ಮಾಣ ಮಾಡಿ ದ್ರಾಕ್ಷಿ ಬೆಳೆಗಾರರಿಗೆ ಅನುಕೂಲ ಕಲ್ಪಿಸಲಾಗುವುದು. ಮಳೆಗಾಲದಲ್ಲಿ ರೈತರಿಗೆ ಉಚಿತ ಬಿತ್ತನೆ ಬೀಜ ರಸಗೊಬ್ಬರ ಸೇರಿದಂತೆ ಆರ್ಥಿಕ ನೆರವು ನೀಡಿ ರೈತರ ಬದುಕು ಹಸನಾಗಲು ದಿನದ 24 ಗಂಟೆ ನಿರಂತರ ವಿದ್ಯುತ್‌ ನೀಡಲಾಗುವುದು. ಎರಡು ರಾಷ್ಟ್ರೀಯ ಪಕ್ಷಗಳಿಂದ ಸರ್ಕಾರಿ ನೌಕರರಿಗೆ ನ್ಯಾಯ ಒದಗಿಸದೇ ಕಾಲಹರಣ ಮಾಡಿದ್ದಾರೆ ಎಂದು ದೂರಿದರು.

ಮಾಜಿ ಸಚಿವ ವೆಂಕಟರಾವ ನಾಡಗೌಡ ಮಾತನಾಡಿ, ಈಗಾಗಲೇ ಸಾರ್ವಜನಿಕರು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಆಡಳಿತ ನೀಡಿದ್ದೀರಿ. ಅವರ ಆಡಳಿತ ಅನುಭವ ಕೂಡ ಪಡೆದುಕೊಂಡಿದ್ದೀರಿ. ಒಮ್ಮೆ ನಮ್ಮನ್ನು ಜೆಡಿಎಸ್‌ ಪಕ್ಷಕ್ಕೆ ಅಧಿಕಾರ ಕೊಡಿ. ಸರ್ವ ಜನಾಂಗ ಶಾಂತಿಯ ತೋಟದಂತೆ ಆಡಳಿತ ನೀಡಿ ಪಂಚರತ್ನ ಯೋಜನೆಗಳು ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದರು.

ಕ್ಷೇತ್ರದ ಜೆಡಿಎಸ್‌ ಪಕ್ಷದ ಘೋಷಿತ ಅಭ್ಯರ್ಥಿಯಾದ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಮಾತನಾಡಿ, ನಾನು ಬಡತನದಲ್ಲಿ ಹುಟ್ಟಿಬಡತನದಲ್ಲಿ ಬೆಳೆದವನು. ಕಳೆದ ಬಾರಿ ಸ್ವಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದೆ. ಈ ಬಾರಿ ಕ್ಷೇತ್ರದ ಜನರು ನನಗೆ ಆಶೀರ್ವದಿಸಿ ಅವಕಾಶ ನೀಡಿದರೆ ನಿಮ್ಮ ಮನೆಯ ಮಗನಾಗಿ ಜನ ಸೇವೆ ಮಾಡುತ್ತೇನೆ. ಪಂಚರತ್ನ ರಥಯಾತ್ರೆಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳು ಸಚಿವರು ಜಿಲ್ಲೆಯ ಮುಖಂಡರು ಕ್ಷೇತ್ರದ ಕಾರ್ಯಕರ್ತರಿಗೆ ಸ್ವಾಗತಿಸಿದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಜಿಲ್ಲಾ ಘಟಕದ ಅಧ್ಯಕ್ಷ ಬಸನಗೌಡ ಮಾಡಗಿ, ಜೆಡಿಎಸ್‌ ಮುಖಂಡರಾದ ಬಿ.ಜಿ.ಪಾಟೀಲ ಹಲಸಂಗಿ, ವೈ.ಕೆ.ಪಾಟೀಲ, ಜೆಡಿಎಸ್‌ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರೀಯಾಜ್‌ ಯಲಗಾರ, ಜೆಡಿಎಸ್‌ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಸಾಯಿಬಣ್ಣ ಬಾಗೇವಾಡಿ, ಪ್ರ ಕಾ ವೀರೇಶ ಕುದುರಿ, ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಭಾಸ್ಕರ ಗುಡಿಮನಿ, ಯುವ ಘಟಕದ ಅಧ್ಯಕ್ಷ ಮುನ್ನಾ ಮಳಖೇಡ, ಜೆಡಿಎಸ್‌ ಪಕ್ಷದ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಪಟ್ಟಣ ಪಂಚಾಯತಿ ಸದಸ್ಯರು, ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಬೈಕ್‌ ರಾರ‍ಯಲಿ ಮೂಲಕ ಭರ್ಜರಿ ರೋಡ್‌ ಶೋ

ಮತಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸುವ ಮೂಲಕ ಪಟ್ಟಣದಲ್ಲಿ ಸಾವಿರಾರು ಯುವಕರು ಬೈಕ್‌ ರಾರ‍ಯಲಿ ಮೂಲಕ ಭರ್ಜರಿ ರೋಡ್‌ ಶೋ ಮೂಲಕ ಪಟ್ಟಣದಿಂದ ಟಿಪು ಸುಲ್ತಾನ್‌ ವೃತ್ತದ ಮೂಲಕ ದೇವೂರ, ಜಾಲವಾದ, ಕೋರುವಾರ, ಕೊಂಡಗೂಳಿ, ಹಂಚಲಿ, ಬಿ.ಬಿ.ಇಂಗಳಗಿ, ಕಲಕೇರಿ, ಆಸ್ಕಿ, ಪತ್ತೆಪೂರ ಮೂಲಕ ಹೂವಿನ ಹಿಪ್ಪರಗಿಯಲ್ಲಿ ಪಂಚರತ್ನ ರಥಯಾತ್ರೆ ಸುಮಾರು 124 ಕಿಮೀ ಸಾಗುವ ಮೂಲಕ ಸಮಾರೋಪಗೊಳ್ಳುವುದು.

ಐತಿಹಾಸಿಕ ಮಲ್ಲಯ್ಯನ ದರ್ಶನ ಪಡೆದ ಮಾಜಿ ಸಿಎಂ

ಪಟ್ಟಣದ ಐತಿಹಾಸಿಕ ರಾವುತರಾಯ ಮಲ್ಲಯ್ಯನ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್‌ ಪಕ್ಷದ ಮುಖಂಡರು ನಂತರ ಪಂಚರತ್ನ ರಥಯಾತ್ರೆಯ ಮೂಲಕ ಬೈಕ್‌ ರಾರ‍ಯಲಿಗೆ ಚಾಲನೆ ನೀಡಿದರು.

ಜೋಳದ ತೆನೆಯ ಬೃಹತ್‌ ಹಾರ ಹಾಕಿ ಸ್ವಾಗತ

ಪಟ್ಟಣಕ್ಕೆ ಜೆಡಿಎಸ್‌ ಪಂಚರತ್ನ ರಥಯಾತ್ರೆ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಬರುತ್ತಿದ್ದಂತೆ ಪಟ್ಟಣದ ಮೊಹರೆ ವೃತ್ತದಲ್ಲಿ ಜೆಡಿಎಸ್‌ ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ರೈತರು ಸೇರಿ ಉತ್ತರ ಕರ್ನಾಟಕದ ಜೋಳದ ತೆನೆ ಬೃಹತ್‌ ಹಾರ ಹಾಕಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ನಂತರ ಮಹಿಳೆಯರಿಂದ ಕುಂಭಮೇಳ, ನಾಸಿಕ್‌ ಡೋಲ್‌ ಸಹಿತ ವಿವಿಧ ವಾದ್ಯಗಳು ಭಾರಿ ಜನೋಸ್ತೋಮದ ಮಧ್ಯ, ಎಲ್ಲೆಂದರಲ್ಲಿ ನಾಯಕರ ಕಟೌಟ್‌ ಜೆಡಿಎಸ್‌ ಧ್ವಜ ಮೂಲಕ ಭರ್ಜರಿಯಾಗಿ ಬೈಕ್‌ ರಾರ‍ಯಲಿ ಮೂಲಕ ಯುವಕರು ಸ್ವಾಗತಿಸಿದರು.

ಜೆ.ಪಿ.ನಡ್ಡಾ ವಿಜಯಪುರ ಜಿಲ್ಲಾ ಪ್ರವಾಸ, ರಾಜ್ಯವ್ಯಾಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ

ಭಾವೈಕ್ಯತೆಯ ಸಂಕೇತವಾದ ಕೋರವಾರ ಗ್ರಾಮ

ದೇವರಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮಕ್ಕೆ ಮಧ್ಯಾಹ್ನ ಪಂಚ ರತ್ನ ರಥಯಾತ್ರೆಯ ಮೂಲಕ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಐತಿಹಾಸಿಕ ಕೋರುವಾರೇಶನ ದರ್ಶನ ಪಡೆದ ಬಳಿಕ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ಕಡೆ ಮಸೀದಿ ಇನ್ನೊಂದು ಕಡೆ ಮಂದಿರ ಇದು ಭಾವೈಕ್ಯತೆಯ ಸಂಕೇತವಾಗಿದೆ ಈ ಗ್ರಾಮ, ಈ ಗ್ರಾಮದಲ್ಲಿ ಸರ್ವ ಜನರು ಶಾಂತಿ ಸಹ ಬಾಳ್ವೆಯಿಂದ ಎಲ್ಲ ಧರ್ಮಿಯರು ವಾಸವಾಗಿದ್ದ ಮಾದರಿಯಾಗಿದ್ದಾರೆ ಎಂದರು.

ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸದ ಬಿಜೆಪಿ

ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯದ ಸಮಸ್ಯೆಗೆ ಸ್ಪಂದಿಸಿಲ್ಲ. ನದಿ ನೀರು ಹಂಚಿಕೆಗೆ ನಿರ್ಲಕ್ಷ್ಯ ಮಾಡಿ ಏತಕ್ಕೆ ಮತ ಕೇಳಕ್ಕೆ ಬರುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದ ನದಿ ನೀರು ಬಳಕೆ ಮಾಡೋಕೆ ಅವಕಾಶ ಕೊಡುತ್ತಿಲ್ಲ. ಇದು ಬಿಜೆಪಿ ಸರ್ಕಾರದ ಆಡಳಿತ ಆಗಿದೆ. ವಿಜಯಪುರದಲ್ಲಿ ನೀರಿದೆ, ಒಣ ಭೂಮಿ ಪ್ರದೇಶವಿದೆ. ಕೆಲಸ ಮಾಡುವ ಕೈಗಳಿಗೆ ಉದ್ಯೋಗ ಇಲ್ಲ. ಕರ್ನಾಟಕ ಜನತೆ ಬಹಳ ಬುದ್ಧಿವಂತರಿದ್ದಾರೆ. ಜನ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಜನರು ಬೇಸತ್ತು ಹೋಗಿದ್ದಾರೆ. ಈ ಬಾರಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ತರಬೇಕೆಂದು ಜನರಲ್ಲಿ ಅಂಡರ್‌ ಕರೆಂಟ್‌ ಪಾಸ್‌ ಆಗುತ್ತಿದ್ದಾರೆ. ಆದಕಾರಣ ಪಂಚರತ್ನ ರಥಯಾತ್ರೆಯ ಮೂಲ ಉದ್ದೇಶ ಆಗಿದೆ ಎಂದು ತಿಳಿಸಿದರು.

click me!