ಕಳ್ಳರು, ಸುಳ್ಳರು ಒಂದಾಗಿದ್ದಾರೆ, ಡಿಕೆಶಿ ಜೀವನ ಏನೆಂಬುದು ತಿಳಿದಿದೆ: ಕುಮಾರಸ್ವಾಮಿ

By Kannadaprabha NewsFirst Published Nov 22, 2023, 2:30 AM IST
Highlights

ಸರ್ಕಾರದ ತಪ್ಪುಗಳನ್ನು ಏಕಾಂಗಿಯಾಗಿ ಪ್ರಶ್ನೆ ಮಾಡುವುದು ಕುಮಾರಸ್ವಾಮಿ ಒಬ್ಬನೇ. ಎಲ್ಲರೂ ಮೌನಕ್ಕೆ ಶರಣಾಗಿದ್ದಾಗ ಅಕ್ರಮ ಸಂಪತ್ತು, ವರ್ಗಾವಣೆ ದಂಧೆ ವಿರುದ್ಧ ನಾನು ಧ್ವನಿ ಎತ್ತಿದೆ. ಇಲ್ಲಿವರೆಗೆ ನಾನು ಏನು ಹೇಳಿದ್ದೇನೋ ಅದರಲ್ಲಿ ಒಂದಕ್ಕೂ ಸರ್ಕಾರ ಉತ್ತರ ಕೊಟ್ಟಿಲ್ಲ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ 

ರಾಮನಗರ(ನ.22): ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೀವನ ಏನೆಂಬುದು ತಿಳಿದಿದೆ. ದೇಶದ ವ್ಯವಸ್ಥೆಯಲ್ಲಿ ಕಳ್ಳರು ಹಾಗೂ ಸುಳ್ಳರು ಒಂದಾಗಿದ್ದಾರೆ. ಮೇಲೊಬ್ಬ ಭಗವಂತ ಎಂಬುವವನಿದ್ದಾನೆ. ಅವನೇ ಅಂತಿಮವಾಗಿ ಎಲ್ಲಾ ತೀರ್ಮಾನ ತೆಗೆದುಕೊಳ್ಳುತ್ತಾನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದರು.

ತಾಲೂಕಿನ ದಾಸೇಗೌಡನದೊಡ್ಡಿ ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜದಲ್ಲಿ ಹಣದ ಮದ ಹತ್ತಿಸಿಕೊಂಡವರು ಎಲ್ಲವನ್ನೂ ಕೊಂಡುಕೊಳ್ಳುತ್ತೇನೆ ಎಂದುಕೊಂಡಿದ್ದಾರೆ. ಆದರೆ ಎಲ್ಲದಕ್ಕೂ ಒಂದು ಅಂತ್ಯವೆಂಬುದು ಇದ್ದೇ ಇರುತ್ತದೆ ಎಂದು ತಿರುಗೇಟು ನೀಡಿದರು.

ಲೋಕಸಭೆ ಚುನಾವಣೆ 2024: ಕಮಲ ಪಾಳಯದಲ್ಲಿ ಆಕಾಂಕ್ಷಿಗಳ ಪೈಪೋಟಿ..!

ನನ್ನ ವಿರುದ್ಧ ಯಾರು ಬೇಕಾದರೂ ಪೋಸ್ಟರ್ ಅಂಟಿಸಿಕೊಳ್ಳಲಿ, ಬೇಡ ಎನ್ನುವುದಿಲ್ಲ. ನನಗೆ ಯಾರು ಏನೂ ಮಾಡಲು ಸಾಧ್ಯವಾಗುವುದಿಲ್ಲವೆಂದು ತಮ್ಮ ವಿರುದ್ಧದ ಪೋಸ್ಟರ್ ವಾರ್ ವಿಚಾರವಾಗಿ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

ಸರ್ಕಾರದ ತಪ್ಪುಗಳನ್ನು ಏಕಾಂಗಿಯಾಗಿ ಪ್ರಶ್ನೆ ಮಾಡುವುದು ಕುಮಾರಸ್ವಾಮಿ ಒಬ್ಬನೇ. ಎಲ್ಲರೂ ಮೌನಕ್ಕೆ ಶರಣಾಗಿದ್ದಾಗ ಅಕ್ರಮ ಸಂಪತ್ತು, ವರ್ಗಾವಣೆ ದಂಧೆ ವಿರುದ್ಧ ನಾನು ಧ್ವನಿ ಎತ್ತಿದೆ. ಇಲ್ಲಿವರೆಗೆ ನಾನು ಏನು ಹೇಳಿದ್ದೇನೋ ಅದರಲ್ಲಿ ಒಂದಕ್ಕೂ ಸರ್ಕಾರ ಉತ್ತರ ಕೊಟ್ಟಿಲ್ಲ ಎಂದರು.

ನಿಲುವು ಬದಲಾಯಿಸಿಕೊಳ್ಳಿ ಎಂಬ ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರು ಮಾತನಾಡಲಿ, ತಲೆ ಏಕೆ ಕೆಡಿಸಿಕೊಳ್ಳಬೇಕು. ಅದರ ಅವಶ್ಯಕತೆಯೂ ಇಲ್ಲ ಎಂದು ಹೇಳಿದರು

ರೈತರಿಗೆ ಬರ ಪರಿಹಾರ ವಿತರಣೆ ಮಾಡಿಲ್ಲ. ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ 800ಕೋಟಿ ಇಟ್ಟಿದ್ದೇವೆ ಎನ್ನುತ್ತಾರೆ. ರೈತರಿಗೆ ಪರಿಹಾರ ನೀಡದೇ ಯಾವ ಉದ್ದೇಶಕ್ಕೆ ಆ ಹಣ ಇಟ್ಟಿದ್ದೀರಿ. ಇಲ್ಲಿವರೆಗೂ ಬೆಳೆ ಪರಿಹಾರದ ನಷ್ಟವನ್ನು ಸರ್ಕಾರ ಕೊಟ್ಟಿಲ್ಲ. ಅದೇನೋ ನುಡಿದಂತೆ ನಡೆದಿದ್ದೇವೆ ಅಂತಾರೆ ಇದೇನಾ ಎಂದು ಪ್ರಶ್ನಿಸಿದರು.

ಸರ್ಕಾರದ ಮಾಹಿತಿ ಪ್ರಕಾರ 33ಸಾವಿರ ಕೋಟಿ ರೈತರ ಬೆಳೆ ನಷ್ಟ ಆಗಿದೆ. ಬಹುತೇಕ ಕಡೆ ಮೇವಿನ ಕೊರತೆ ಇದೆ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಫಸಲು ಹಾಳಾಗಿದೆ. ಹಿಂದೆ ಬೇರೆ ದೇಶಗಳಿಗೆ ಆಹಾರ ಪದಾರ್ಥ ರಫ್ತು ಮಾಡುತ್ತಿದ್ದ ನಮ್ಮಲ್ಲೇ ಆಹಾರದ ಕೊರತೆ ಉಂಟಾಗುತ್ತಿದೆ. ಫಸಲು ಭೀಮಾ ಯೋಜನೆಯಡಿ ರೈತರಿಗೆ ಪರಿಹಾರ ಕೊಡುವುದಕ್ಕಿಂತ ಖಾಸಗಿ ಕಂಪೆನಿಗಳಿಗೆ ಹೆಚ್ಚಿನ ಲಾಭವಾಗುತ್ತಿದೆ ಎಂದು ಹೇಳಿದರು.

ನಾಡಿನ ಜನರ ಕಷ್ಟ ಸುಖ ಕೇಳಿ ಪರಿಹರಿಸಲು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ರಾಜ್ಯಕ್ಕೆ ಬರುತ್ತಿಲ್ಲ. ಈಗ ಜನರ ಹಣ ಲೂಟಿ ಮಾಡುವ ಸಲುವಾಗಿ ನಿಗಮ ಮಂಡಳಿ ನೇಮಕ ಮಾಡಲು ಬರುತ್ತಿದ್ದಾರೆ. ನಿಗಮ ಮಂಡಳಿ ರಚನೆ ಮಾಡಿ ಜನರ ಕಷ್ಟ ಕೇಳುತ್ತಾರಾ ಎಂದು ಪ್ರಶ್ನಿಸಿದರು.

ನಾನು ಬಿಜೆಪಿಯಿಂದ ದೂರ ಉಳಿಯುತ್ತಿಲ್ಲ: ಎಸ್.ಟಿ.ಸೋಮಶೇಖರ್

ಇಲ್ಲಿ ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆಯೇ ಇಲ್ಲ. ಮಕ್ಕಳ ಭವಿಷ್ಯದ ಬಸ್ಸು ಎಲ್ಲಿದೆ. ಇದು ಈ ಸರ್ಕಾರ ನುಡಿದಂತೆ ನಡೆದಿರೋದಾ.? ಮಕ್ಕಳು ಜೆಸಿಬಿಯಲ್ಲಿ ಶಾಲೆಗೆ ಹೋಗುತ್ತಿದ್ದಾರೆ. ನಿತ್ಯ ಕಲರ್ ಫುಲ್ ಫೋಟೊ ಹಾಕೊಂಡು ಫೋಸ್ ಕೊಡುತ್ತಾರೆ. ಸರ್ಕಾರದ ಅಕ್ರಮಗಳ ಪ್ರಶ್ನೆ ಮಾಡಿದರೆ ನನ್ನ ವಿರುದ್ಧ ಪೋಸ್ಟರ್ ಹಾಕುತ್ತಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಮುಖ್ಯಮಂತ್ರಿಗಳ ಮನೆ ನವೀಕರಣ ಮಾಡಲು ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಾರೆ. ಅದೇ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಶಾಲಾ ಕಟ್ಟಡ ನಿರ್ಮಿಸಲು ಹಣ ಇಲ್ಲವೆಂದು ಸಿಎಸ್ ಆರ್ ಫಂಡ್ ಕೇಳುತ್ತಿದ್ದಾರೆ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ 2.5ಲಕ್ಷಕ್ಕೆ ಯಾವುದೋ ಖಾಸಗಿ ಕಂಪನಿ ವಿರುದ್ಧ ಅರ್ಜಿ ಇಟ್ಟುಕೊಂಡು ನಿಂತಿದ್ದಾರೆ ಎಂದು ಕಿಡಿಕಾರಿದರು.

click me!