'ಜೆಡಿಎಸ್‌ ಮುಗಿಸೋದೇ ಕಾಂಗ್ರೆಸ್‌ ಲೀಡರ್‌ಗಳ ಅಜೆಂಡಾ'

By Kannadaprabha NewsFirst Published Oct 19, 2020, 9:30 AM IST
Highlights

ಕಾಂಗ್ರೆಸ್‌ ಲೀಡರ್‌ಗಳಿಗೆ ಬಿಜೆಪಿಗಿಂತ ಜೆಡಿಎಸ್‌ ಮೇಲೆ ಹೆಚ್ಚು ಆಕ್ರೋಶ: ಎಚ್‌ಡಿಕೆ| ಬಿಜೆಪಿ ಹಾಗೂ ಆ ಪಕ್ಷದ ಅಭ್ಯರ್ಥಿ ಬಗ್ಗೆ ಕುಮಾರಸ್ವಾಮಿ ಸಾಫ್ಟ್‌ ಕಾರ್ನರ್‌ ಹೊಂದಿದ್ದಾರೆ ಎಂಬ ಅಪಪ್ರಚಾರ| ಜನರ ಹಣ ಲೂಟಿ ಹೊಡೆಯುವವರ ಬಗ್ಗೆ ನಾನು ಮಾತಾಡಲ್ಲ| 

ಬೆಂಗಳೂರು(ಅ.19):  ಜೆಡಿಎಸ್‌ ಮುಗಿಸಬೇಕು ಎಂಬುದೇ ಕಾಂಗ್ರೆಸ್‌ ಲೀಡರ್‌ಗಳ ಅಜೆಂಡಾ ಆಗಿದೆ. ಅದು ಆಕ್ರೋಶವೋ, ಭಯವೋ ಗೊತ್ತಿಲ್ಲ. ಬಿಜೆಪಿಗಿಂತ ಜೆಡಿಎಸ್‌ ಮೇಲೆಯೇ ಅವರಿಗೆ ಹೆಚ್ಚು ಆಕ್ರೋಶವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಭಾನುವಾರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಗ್ಗೆರೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರ ಕುಟುಂಬವನ್ನು ದುಡ್ಡು ಕೊಟ್ಟು ಖರೀದಿಸಲು ಆಗುವುದಿಲ್ಲ. ಇಡೀ ದೇಶದಲ್ಲಿ ಸಾರ್ವಜನಿಕವಾಗಿ ಒಬ್ಬ ಮುಖ್ಯಮಂತ್ರಿ ದೇಶದಲ್ಲಿ ಕಣ್ಣೀರು ಹಾಕಿದ್ದಾರೆ ಅಂದರೆ ಅದು ನಾನು ಮಾತ್ರ. ಅಂತಹ ವಾತಾವರಣದಲ್ಲಿ ನಾನಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು.

'ದಿನಕ್ಕೆ 3 ಸಲ ಪ್ರಧಾನಿ ಮೋದಿ ಡ್ರೆಸ್‌ ಚೇಂಜ್‌, ದೇವೇಗೌಡ್ರು ಒಂದೇ ಸಲ'

ಬಿಜೆಪಿ ಹಾಗೂ ಆ ಪಕ್ಷದ ಅಭ್ಯರ್ಥಿ ಬಗ್ಗೆ ಕುಮಾರಸ್ವಾಮಿ ಸಾಫ್ಟ್‌ ಕಾರ್ನರ್‌ ಹೊಂದಿದ್ದಾರೆ ಎಂಬ ಅಪಪ್ರಚಾರ ನಡೆಸಲಾಗುತ್ತಿದೆ. ಆದರೆ, ಜನರ ಹಣ ಲೂಟಿ ಹೊಡೆಯುವವರ ಬಗ್ಗೆ ನಾನು ಮಾತಾಡಲ್ಲ. ಬೆವರು ಸುರಿಸಿ ದುಡಿದ ಹಣದಲ್ಲಿ ನಮ್ಮ ಅಭ್ಯರ್ಥಿ ಕೃಷ್ಣಮೂರ್ತಿ ಕೊರೋನಾ ಸಮಯದಲ್ಲಿ ಜನಕ್ಕೆ ಸಹಾಯ ಮಾಡಿದ್ದಾರೆ ಎಂದರು.

ನನ್ನ ಸರಕಾರವನ್ನು ಯಾರೂ 10 ಪರ್ಸೆಂಟ್‌ ಸರಕಾರ ಎಂದು ಯಾರೂ ಹೇಳಲಿಲ್ಲ. ನಾನು ಅಧಿಕಾರದಲ್ಲಿದ್ದಾಗ ಜನರಿಗೆ ಶಾಶ್ವತ ಕಾರ್ಯಕ್ರಮಗಳನ್ನು ನೀಡಿದ್ದೇನೆ. ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಅವಮಾನ ಮಾಡುತ್ತಿವೆ. ಕನ್ನಡಿಗರ ಸ್ವಾಭಿಮಾನ, ಗೌರವ ಉಳಿಸಲು ಈ ಚುನಾವಣೆ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಉತ್ತರ ನೀಡಿ ಎಂದು ಕುಮಾರಸ್ವಾಮಿ ತಿಳಿಸಿದರು. ಇಲ್ಲಿ ಕೃಷ್ಣಮೂರ್ತಿ ಅಭ್ಯರ್ಥಿಯಲ್ಲ. ಕಾರ್ಯಕರ್ತರೇ ಅಭ್ಯರ್ಥಿಗಳು ಎಂದು ತಿಳಿದು ಜೆಡಿಎಸ್‌ ಸಮಾಧಿ ಮಾಡುತ್ತೇವೆ ಎಂದವರಿಗೆ ಉತ್ತರ ನೀಡಿ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.
 

click me!