ರಾಜಕೀಯದಲ್ಲಿ ಏರು-ಪೇರು ಸಾಮಾ​ನ್ಯ: ಬಂಡೆಪ್ಪ ಖಾಶೆಂಪೂರ

By Kannadaprabha NewsFirst Published Jun 7, 2023, 11:04 PM IST
Highlights

ಮುಂಬರುವ ಸ್ಥಳೀಯ ಚುನಾವಣೆಗೆ ಸಿದ್ಧರಾಗೋಣ, ಎಚ್‌.​ಡಿ.ದೇವೇಗೌಡರು ನಮಗೆ ಧೈರ್ಯ ಹೇಳಿದ್ದಾರೆ: ಮಾಜಿ ಶಾಸ​ಕ ಬಂಡೆಪ್ಪ ಖಾಶೆಂಪೂರ 

ಬೀದರ್‌(ಜೂ.07):  ಜನರಿಗೋಸ್ಕರ ನಾವು ಕೆಲಸ ಮಾಡುತ್ತೇವೆ. ರಾಜಕೀಯ ಉಲ್ಟಾ-ಪಲ್ಟಾಆಗುತ್ತಿರುತ್ತದೆ. ನಾವೆಲ್ಲರೂ ಸೇರಿ ಜನರಿಗಾಗಿ ಕೆಲಸ ಮಾಡೋಣ ಎಂದು ಮಾಜಿ ಶಾಸಕ ಬಂಡೆಪ್ಪ ಖಾಶೆಂಪೂರ ತಿಳಿಸಿದರು. ಬೀದರ್‌ ದಕ್ಷಿಣ ಕ್ಷೇತ್ರದ ಖಾಶೆಂಪುರ್‌ (ಪಿ) ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದ ಆವರಣದಲ್ಲಿ ಮಂಗಳವಾರ ಜೆಡಿಎಸ್‌ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ಬಂಡೆಪ್ಪ ಅವರದ್ದು ರಾಜಕೀಯ ಮುಗಿತು ಎಂದುಕೊಳ್ಳಬೇಡಿ. ಈಗ ಹೊಸ ಅಧ್ಯಾಯ ಆರಂಭವಾಗಿದೆ ಎಂದರು.

ನಮಗೆ ದೇವೇಗೌಡರು ಸ್ಫೂರ್ತಿಯಾಗಿದ್ದಾರೆ. ಅವರ 91ನೇ ವಯಸ್ಸಿನಲ್ಲೂ ಕೂಡ ನೀವು ಯಾರು ಹೆದರಬೇಡಿ ಎಂದು ನಮಗೆ ಧೈರ್ಯ ಹೇಳಿದ್ದಾರೆ. ಅವರ ಮಾರ್ಗದರ್ಶನ ದಲ್ಲಿ ನಾವೆಲ್ಲರೂ ಸಾಗಬೇಕಾಗಿದೆ. ನಮ್ಮದು ರಾಜಕೀಯ ಹಿನ್ನೆಲೆಯ ಕುಟುಂಬವಲ್ಲ. ನಮ್ಮ ತಂದೆಯವರ ಕಾಲದಿಂದಲೂ ದಾನ, ಧರ್ಮ ಮಾಡಿಕೊಂಡು ಬಂದಿರುವ ಕುಟುಂಬವಾಗಿದೆ ಎಂದ​ರು.

ರಾತ್ರಿ ಪಾಳಿ ಮಾಡದ ವೈದ್ಯರನ್ನು ಶಾಶ್ವತ ಮನೆಗೆ ಕಳಿಸ್ತೀನೆಂದ ಶಾಸಕ ಪ್ರಭು ಚವ್ಹಾಣ್‌

ಚುನಾವಣೆಗೆ ನಿಲ್ಲಬೇಕು, ಶಾಸಕ ಆಗಬೇಕು ಎಂಬ ಆಸೆಯಂತೂ ಅಂದು ನನಗೆ ಇರಲಿಲ್ಲ. ಜನರ ಪ್ರೀತಿ ವಿಶ್ವಾಸದಿಂದಾಗಿ ರಾಜಕೀಯಕ್ಕೆ ಬಂದಿದ್ದೇನೆ. ಜನರಿಗೆ ಒಳಿತು ಮಾಡುವ ಉದ್ದೇಶದಿಂದ ರಾಜಕೀಯದಲ್ಲಿ ಇದ್ದೇನೆ. ನಾನು ಸೋಲು-ಗೆಲುವು ಎರಡನ್ನೂ ಕಂಡಿದ್ದೀನಿ. ರಾಜಕೀಯ ನದಿ ಇದ್ದಂತೆ ಹರಿದುಕೊಂಡು ಸಾಗುತ್ತಿರುತ್ತದೆ. ನನ್ನ ಐದು ಚುನಾವಣೆಗಿಂತ ಹೆಚ್ಚಿನ ಬೆಂಬಲ ಈ ಚುನಾವಣೆಯಲ್ಲಿ ನನಗೆ ಸಿಕ್ಕಿತ್ತು, ಆದ್ರು ಸೋಲಾಗಿದೆ ಎಂದು ಹೇಳಿ​ದ​ರು.
ಈಗ ಚುನಾವಣೆ ಮುಗಿದಿದೆ. ನಾನು ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಜನರ ಸೇವೆ ಮಾಡಿದ್ದೇನೆ. ಅಧಿಕಾರದಲ್ಲಿ ಇದ್ದಾಗಲೂ ಜನಪರ ಕೆಲಸ ಮಾಡಿದ್ದೇನೆ. ಪಕ್ಷ ಬದಲಾವಣೆ ಮಾಡುವುದಿಲ್ಲ. ಈ ಹಿಂದೆ ಸೋತ ಸಂದರ್ಭದಲ್ಲಿ ಕೂಡ ತಾಪಂ, ಜಿಪಂ, ನಗರ ಸಭೆ ಚುನಾವಣೆಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಿದ್ದೇನೆ. ಈಗಲೂ ಮಾಡುತ್ತೇನೆ ಎಂದು ಖಾಶೆಂಪೂರ್‌ ಹೇಳಿದರು.

ಸ್ಥಳೀಯ ಚುನಾವಣೆಗೆ ಸಿದ್ಧರಾಗೋಣ:

ಕೆಲವೇ ತಿಂಗಳಲ್ಲಿ ತಾಪಂ ಹಾಗೂ ಜಿಪಂ ಚುನಾವಣೆಗಳು ನಡೆಯಲಿವೆ. ನಾವೆಲ್ಲರೂ ಸೇರಿ ಜೆಡಿಎಸ್‌ನ್ನು ಅಧಿಕಾರಕ್ಕೆ ತರುವ ಕೆಲಸ ಮಾಡಬೇಕಾಗಿದೆ. ತಳಮಟ್ಟದಿಂದ ಪಕ್ಷ ಸಂಘಟಿಸುವ ಕೆಲಸ ಪಕ್ಷದ ಮುಖಂಡರು, ಕಾರ್ಯಕರ್ತರು ಮಾಡಬೇಕಾಗಿದೆ. ಎಲ್ಲರೂ ಸೇರಿ ಪಕ್ಷ ಸಂಘಟನೆ, ಬಲವರ್ಧನೆ ಮಾಡೋಣವೆಂದು ಜೆಡಿಎಸ್‌ ಮುಖಂಡರು, ಕಾರ್ಯಕರ್ತರಿಗೆ ಬಂಡೆಪ್ಪ ಖಾಶೆಂಪೂರ್‌ ಕರೆ ನೀಡಿದರು.

ಈ ವೇಳೆ ಪಕ್ಷದ ಪ್ರಮುಖರಾದ ಮಾರುತಿ ಖಾಶೆಂಪೂರ್‌, ಸಂಜುರೆಡ್ಡಿ ನಿರ್ಣಾ, ವಿಜಯಕುಮಾರ್‌ ಖಾಶೆಂಪೂರ್‌, ಶಾಂತಲಿಂಗ ಸಾವಳಗಿ, ದೇವೇಂದ್ರ ಸೋನಿ, ರಾಜು ಕಡ್ಯಾಳ, ಸಂತೋಷÜ ರಾಸೂರು, ಶಿವರಾಜ್‌ ಹುಲಿ, ಸಜ್ಜಾದ್‌ ಸಾಹೇಬ್‌, ಇಸ್ಮಾಯಿಲ್‌ ಕಮಠಾಣಾ, ರಾಜಶೇಖರ ಜವಳೆ, ಮನು ನಾಯ್‌್ಕ, ಪುಂಡಲೀಕ ಸೇರಿದಂತೆ ಅನೇಕರಿದ್ದರು.

click me!