ನಾಮಧಾರಿ ಸಮಾಜ ಕಡೆಗಣಿಸಿದರೆ ಸ್ವತಂತ್ರ ಪಕ್ಷ ಸ್ಥಾಪನೆ: ಪ್ರಣವಾನಂದ ಸ್ವಾಮೀಜಿ

By Kannadaprabha NewsFirst Published Jun 5, 2023, 11:06 AM IST
Highlights

ಈಡಿಗ, ಬಿಲ್ಲವ, ನಾಮಧಾರಿ ಸಮಾಜವನ್ನು ರಾಜಕೀಯವಾಗಿ ಕಡೆಗಣಿಸಿದರೆ ಸ್ವತಂತ್ರ ಪಕ್ಷ ಸ್ಥಾಪನೆ ಮಾಡಬೇಕಾಗುತ್ತದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.

ಕಾರವಾರ (ಜೂ.5) ಈಡಿಗ, ಬಿಲ್ಲವ, ನಾಮಧಾರಿ ಸಮಾಜವನ್ನು ರಾಜಕೀಯವಾಗಿ ಕಡೆಗಣಿಸಿದರೆ ಸ್ವತಂತ್ರ ಪಕ್ಷ ಸ್ಥಾಪನೆ ಮಾಡಬೇಕಾಗುತ್ತದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.

ಕುಮಟಾದ ನಾಮಧಾರಿ ಸಭಾಭವನದಲ್ಲಿ ಭಾನುವಾರ ನಡೆದ ಈಡಿಗ, ಬಿಲ್ಲವ, ನಾಮಧಾರಿ ಸಮುದಾಯದ ಚಿಂತನ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಸಮಾಜದ ಹೆಚ್ಚಿನ ಜನರು ಇರುವ ಉಡುಪಿ, ಶಿವಮೊಗ್ಗ, ಮಂಗಳೂರು ಉತ್ತರ ಕನ್ನಡ ಜಿಲ್ಲೆಯಲ್ಲಾಗಿದೆ. ರಾಜಕೀಯವಾಗಿ, ಸಾಮಾಜಿಕವಾಗಿ ಈ ಸಮಾಜವನ್ನು ಕಡೆಗಣಿಸಲಾಗುತ್ತಿದೆ. ರಾಜಕೀಯ ಪಕ್ಷಗಳು ಸಮಾಜವನ್ನು ಕಡೆಗಣಿಸಿದರೆ ಈಡಿಗ, ಬಿಲ್ಲವ, ನಾಮಧಾರಿ ಸಮಾಜವು ಮುಂದೆ ನಿಂತು ಉಳಿದ ಹಿಂದುಳಿದ ವರ್ಗವನ್ನು ಸೇರಿಸಿಕೊಂಡು ನೂತನ ಸ್ವತಂತ್ರ ಪಕ್ಷವನ್ನು ಸ್ಥಾಪಿಸುವುದಕ್ಕೆ ಚಿಂತನೆ ಮಾಡಬೇಕಾದ ಅಗತ್ಯ ಇದೆ ಎಂದು ಅಭಿಪ್ರಾಯಿಸಿದರು.

ಬಿಲ್ಲವರಿಗೆ ಕನಿಷ್ಠ 10 ಸೀಟ್‌ ಕೊಡಲೇಬೇಕು: ಪ್ರಣವಾನಂದ ಸ್ವಾಮೀಜಿ

ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿಯೂ ಚಿಂತನ ಶಿಬಿರವನ್ನು ಪ್ರಾರಂಭ ಮಾಡಬೇಕು. 2024ರ ಫೆಬ್ರವರಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಅಡಿಯಲ್ಲಿ ಸ್ವಾಭಿಮಾನದ ಬೃಹತ್‌ ಸಮಾವೇಶ ಉಡುಪಿಯಲ್ಲಿ ಮಾಡಬೇಕು. ಜಿಪಂ, ತಾಪಂ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಸಮುದಾಯದ ಶೇ. 30 ಮತ ಇರುವ ಕ್ಷೇತ್ರಗಳಲ್ಲಿ ಸಮುದಾಯದ ನಾಯಕರಿಗೆ ಟಿಕೆಟ್‌ ನೀಡುವುದಕ್ಕೆ ರಾಜಕೀಯ ಪಕ್ಷಗಳು ನಿರ್ಣಯ ತೆಗೆದುಕೊಳ್ಳಬೇಕು. ಸಮುದಾಯ ಪರವಾಗಿ ಧ್ವನಿ ಎತ್ತದ ಸಮಾಜದ ಜನಪ್ರತಿನಿಧಿಗಳಿಗೆ, ಸಮಾಜದ ಹೋರಾಟಕ್ಕೆ ಕೈಜೋಡಿಸದ ಸಮಾಜದ ಪ್ರತಿನಿಧಿಗಳಿಗೆ ಯಾವುದೇ ರೀತಿಯಲ್ಲಿ ಸಹಕಾರ ನೀಡುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಎರಡು ಸೀಟು ನಾಮಧಾರಿ, ಬಿಲ್ಲವ ಸಮುದಾಯಕ್ಕೆ ನೀಡಬೇಕು ಎಂದು ಆಗ್ರಹಿಸಿದರು.

ಸಮಾಜದ ಮುಖಂಡರಾದ ರವೀಂದ್ರ, ನಾಗೇಶ ನಾಯ್ಕ, ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಜ್ಯಾಧ್ಯಕ್ಷ ಸಂತೋಷಕುಮಾರ್‌ ಜಿ.ಎನ್‌., ಮಂಚೇಗೌಡ, ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಕಾರ್ಯದರ್ಶಿ ವೆಂಕಟೇಶ ಗುಂಡನೂರ್‌, ಜನಾರ್ದನ್‌ ಬಿ.ಕೆ., ರಾಘವೇಂದ್ರ ನಾಯ್ಕ ಮೊದಲಾದವರು ಇದ್ದರು.

ಸ್ಥಾನಮಾನಕ್ಕಾಗಿ ಕೋಟ ಹಾಗೂ ಸುನೀಲ್ ಸಮುದಾಯವನ್ನು ಬಲಿ ಕೊಟ್ಟಿದ್ದಾರೆ: ಪ್ರಣವಾನಂದ ಸ್ವಾಮೀಜಿ

ನಿರ್ಣಯಗಳು:

ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಕೂಡಲೇ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ, .250 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ಕುಲಕಸುಬಾದ ಸೇಂದಿ, ನೀರಾ ಇಳಿಸಿ ಮಾರಾಟ ಮಾಡುವುದಕ್ಕೆ ರಾಜ್ಯಾದ್ಯಂತ ಅನುಮತಿ ನೀಡಬೇಕು. ಬೆಂಗಳೂರಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ಥಳಿ ಸ್ಥಾಪಿಸಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಸಮುದಾಯದ ಮಕ್ಕಳ ಉನ್ನತ ಶಿಕ್ಷಣಕ್ಕೋಸ್ಕರ ಸ್ಪರ್ಧಾತ್ಮಕ ತರಬೇತಿ ಕೇಂದ್ರ, ಪೊಲೀಸ್‌ ತರಬೇತಿ ಕೇಂದ್ರ ಸರ್ಕಾರದಿಂದ ಪ್ರಾರಂಭಿಸಬೇಕು. 12ನೇ ಶತಮಾನದ ಅನುಭವ ಮಂಟಪದಲ್ಲಿ ಈಡಿಗ ಸಮುದಾಯವನ್ನು ಗುರುತಿಸಿರುವ ಶರಣ ದುರುಣ ಹೆಂಡದ ಮಾರಾಯ ಅವರ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಬೇಕು.

click me!