ಡಿಸಿಎಂಗೆ ಡೆಡ್‍ಲೈನ್: ಲಕ್ಷ್ಮಣ ಸವದಿಗೆ ಶುರುವಾಯ್ತು ಅವಧಿ ಸಂಕಟ

By Suvarna NewsFirst Published Jan 1, 2020, 4:44 PM IST
Highlights

ಯಾವುದೇ ಸದನದ ಸದಸ್ಯರಾಗದ  ಲಕ್ಷ್ಮಣ ಸವದಿಗೆ ಬಯಸದೇ ಬಂದ ಡಿಸಿಎಂ ಭಾಗ್ಯ ಸಿಕ್ಕಿದೆ. ಆದ್ರೆ, ಇದೀಗ  ಬಿಜೆಪಿಯಲ್ಲಿ ಸವದಿ ಸಸ್ಪೆನ್ಸ್ ಜೋರಾಗಿದೆ. ಅದೃಷ್ಟದಿಂದ ಡಿಸಿಎಂ ಆಗಿರುವ  ಲಕ್ಷ್ಮಣ ಸವದಿಗೆ ಡೆಡ್‍ಲೈನ್ ಸಂಕಟ ಶುರುವಾಗಿದೆ. 

ಬೆಂಗಳೂರು, (ಜ.01): ಅದೃಷ್ಟದ ಮೇಲೆ ಉಪಮುಖ್ಯಮಂತ್ರಿಯಾಗಿರುವ ಲಕ್ಷ್ಮಣ ಸವದಿ ರಾಜಕೀಯ ಭವಿಷ್ಯ ಅಡ್ಡ ಕತ್ತರಿಯಲ್ಲಿ ಸಿಲುಕಿದೆ. ಇದ್ರಿಂದ ಪಾರಾಗಲು ಸವದಿ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. 

ಡಿಸಿಎಂಗೆ ಡೆಡ್‍ಲೈನ್ ಹತ್ತಿರವಾಗುತ್ತಿದ್ದಂತೆಯೇ ಮತ್ತೊಂದೆಡೆ ಸವದಿ, ಸಿಎಂ ಬಿ.ಎಸ್.ಯಡಿಯೂರಪ್ಪನವರ ದುಂಬಾಲು ಬಿದ್ದಿದ್ದಾರೆ.

ಬೈ ಎಲೆಕ್ಷನ್: ಕಾಂಗ್ರೆಸ್ ಅಭ್ಯರ್ಥಿ ಗೆಲುವಿನೊಂದಿಗೆ ಸವದಿ ರಾಜಕೀಯ ಹಾದಿ ಸುಗಮ..?

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿಧಾನ ಪರಿಷತ್ ಸದಸ್ಯ ರಿಜ್ವಾನ್‌ ಅರ್ಷದ್‌ ಗೆದ್ದು, ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.  ಈ ಹಿನ್ನೆಲೆಯಲ್ಲಿ ಅವರ ರಾಜೀನಾಮೆಯಿಂದ ತೆರವಾಗಲಿರುವ ಮೇಲ್ಮನೆ ಸ್ಥಾನಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಣ್ಣಿದೆ. ಆದ್ರೆ, ಇದಕ್ಕೆ ಮಾಜಿ ಸಚಿವ ಆರ್‌.ಶಂಕರ್‌ ಪೈಪೋಟಿ ನಡೆಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಬಿಎಸ್‌ವೈ ದೊಡ್ಡ ತಲೆನೋವಾಗಿ ಪರಣಿಸಿದೆ. ಯಾಕಂದ್ರೆ ಶಂಕರ್‌ಗೆ ಎಂಎಲ್‌ಸಿ ಮಾಡಿ ಮಂತ್ರಿ ಮಾಡುತ್ತೇನೆಂದು ಕಡ್ಡಿ ಮುರಿದಂತೆ ಬಹಿರಂಗವಾಗಿಯೇ ಹೇಳಿದ್ದಾರೆ. 

'ಕೊಟ್ಟ ಮಾತು ಉಳಿಸಲು ಪ್ರಾಣ ಕೊಡಲೂ ಸಿದ್ಧ: ಕುಮಟಳ್ಳಿ, ಸವದಿ ಸಂಪುಟದಲ್ಲಿರುತ್ತಾರೆ'

ಇದ್ರಿಂದ ರಿಜ್ವಾನ್‌ ಅರ್ಷದ್‌ ಅವರಿಂದ ತೆರವಾಗುವ ಪರಿಷತ್ ಸ್ಥಾನಕ್ಕೆ ಶಂಕರ್ ಅವರನ್ನು ಆಯ್ಕೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ಯಡಿಯೂರಪ್ಪ ಕ್ಯಾಬಿನೆಟ್‍ನಲ್ಲಿ ಸವದಿ ಇರ್ತಾರಾ ಅಥವಾ ಔಟ್ ಆಗ್ತಾರಾ ಅನ್ನೋ ಕುತೂಹಲ ಮೂಡಿಸಿದೆ.

ಫೆಬ್ರವರಿ 20ಕ್ಕೆ ಸವದಿ ಡೆಡ್‌ಲೈನ್
ಅಂದಹಾಗೆ ಲಕ್ಷ್ಮಣ ಸವದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ  ಫೆಬ್ರವರಿ 20ಕ್ಕೆ  6 ತಿಂಗಳಾಗುತ್ತದೆ. ಸಚಿವರಾದವರು 6 ತಿಂಗಳೊಳಗೆ ಪರಿಷತ್‍ಗೆ ಆಯ್ಕೆಯಾಗಬೇಕು. 

 ಫೆಬ್ರವರಿ 26ರ ಒಳಗೆ ಮೇಲ್ಮನೆ ಸದಸ್ಯರಾದರೆ ಮಾತ್ರ ಸಚಿವ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯ. ಹೀಗಾಗಿ ರಿಜ್ವಾನ್‌ ಆಯ್ಕೆಯಾದ ಬಳಿಕ ಲಕ್ಷ್ಮಣ ಸವದಿ ಹಾದಿ ಸುಗಮವೆಂದೇ ಹೇಳಲಾಗುತ್ತಿತ್ತು.

ಈ ಮಧ್ಯೆ ಕಂಡೀಷನ್ ಮೇಲೆ  ಮಾಜಿ ಸಚಿವ ಆರ್‌. ಶಂಕರ್‌  ಅವರು ರಾಣೆಬೆನ್ನೂರು ಕ್ಷೇತ್ರದ ಉಪಚುನಾವಣೆ ಟಿಕೆಟ್‌ ಬಿಟ್ಟುಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಮೇಲ್ಮನೆ ಸದಸ್ಯರನ್ನಾಗಿ ಮಾಡಿ ಸಚಿವ ಸ್ಥಾನ ನೀಡಲಾಗುವುದು ಎಂದು ಸ್ವತಃ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಇನ್ನು ಸವದಿ ಕೂಡ ನಾಯಕರ ಭರವಸೆ ಮೇರೆಗೆ ತಮ್ಮ ಸ್ವಕ್ಷೇತ್ರವಾದ ಬೆಳಗಾವಿಯ ಅಥಣಿ ಕ್ಷೇತ್ರವನ್ನು ಕಾಂಗ್ರೆಸ್‌ನಿಂದ ವಲಸೆ ಬಂದ ಮಹೇಶ್ ಕುಮಟ್ಟಳ್ಳಿಗೆ ಧಾರೆ ಎರೆದುಕೊಟ್ಟಿದ್ದಾರೆ. ಇದು ಅವರ ಕೈ ಹಿಡಿದರೂ ಅಚ್ಚರಿ ಪಡಬೇಕಿಲ್ಲ.

ಕೆಲವೇ ದಿನಗಳಲ್ಲಿ ರಿಜ್ವಾನ್‌ ಮೇಲ್ಮನೆ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಆ ನಂತರ ಅಧಿಕೃತವಾಗಿ ವಿಧಾನ ಪರಿಷತ್ತಿನಿಂದ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಕೆಯಾಗಲಿದೆ. ಆ ಬಳಿಕವೇ ಆಯೋಗ ಚುನಾವಣೆ ನಡೆಯಲಿದೆ. ಈ ಅವಧಿ 2022ರ ಜೂನ್‌ವರೆಗಿದೆ.

ಒಟ್ಟಿನಲ್ಲಿ ಒಂದು ಕಡೆ ಲಕ್ಷ್ಮಣ ಸವದಿಗೆ ಶಂಕರ್ ಅಡ್ಡಿಯಾಗಿದ್ರೆ, ಮತ್ತೊಂದೆಡೆ ಡೆಡ್‌ಲೈನ್ ಹತ್ತಿರವಾಗುತ್ತಿದೆ. ಇದ್ರಿಂದ ಸವದಿಗೆ ಆತಂಕ ಶುರುವಾಗಿದೆ. 

click me!