
ನಾಗರಾಜ್ ನ್ಯಾಮತಿ
ಸುರಪುರ(ಏ.07): ಚುನಾವಣೆ ರಂಗೇರುತ್ತಿರುವ ಹೊತ್ತಿನಲ್ಲಿ ಸುರಪುರ ಮತಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ತೀವ್ರಗತಿಯಲ್ಲಿ ನಡೆಯುತ್ತಿದೆ. ಇದರಿಂದಾಗಿ ವಿಜಯಲಕ್ಷ್ಮೀ ಒಲಿಸಿಕೊಳ್ಳಲು ಮತದಾರರನ್ನು ಸೆಳೆಯುವ ಯತ್ನ ಭರದಿಂದ ಸಾಗಿದೆ. ಸುರಪುರ ಮತ್ತು ಹುಣಸಗಿ ಅವಳಿ ತಾಲೂಕಿನಲ್ಲಿ ಗ್ರಾಮೀಣ, ಹೋಬಳಿ, ಜಿಪಂ, ತಾಪಂ ಹಾಗೂ ಗ್ರಾಪಂ ಮಾಜಿ ಸದಸ್ಯರು, ಮುಖಂಡರು, ಕಾರ್ಯಕರ್ತರು ಒಂದು ಪಕ್ಷ ತೊರೆದು ಮತ್ತೊಂದು ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ. ಒಂದು ಪಕ್ಷವನ್ನು ತೊರೆದು ಮತ್ತೊಂದು ಪಕ್ಷಕ್ಕೆ ಹೋಗುತ್ತಿರುವ ಹಲವು ಗುಂಪುಗಳನ್ನು ಪ್ರಸಕ್ತ ಬಾರಿ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಈ ಬಾರಿ ಪಕ್ಷಾಂತರ ನೋಡುತ್ತಿದ್ದರೆ ತಮ್ಮ ನಾಯಕರು ವಿಶ್ವಾಸ ಉಳಿಸಿಕೊಳ್ಳುವಲ್ಲಿ ವಿಫಲವಾಗಿದ್ದಾರೆ. ನಾಯಕರ ನಡೆ, ನುಡಿ, ಅಸಂತುಷ್ಟಿ, ಅಸಮಾಧಾನ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಪ್ರತಿದಿನ ಒಂದಲ್ಲಾ ಒಂದು ಕಡೆ ತಾಲೂಕಿನಲ್ಲಿರುವ ಕೆಲವು ಮುಖಂಡರು ತಮಗೆ ಅನ್ಯಾಯವಾಗಿದೆ. ಅಭಿವೃದ್ಧಿ ಕೆಲಸಗಳು ಆಗಬೇಕಿದೆ ಎಂದು ಹೇಳಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಹಲವಾರು ವರ್ಷ ದುಡಿದರೂ ಮಾನ್ಯತೆ ದೊರೆಯುತ್ತಿಲ್ಲ, ಅಭಿವೃದ್ಧಿ ಕಾರ್ಯ ಮೆಚ್ಚಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಈ ಎಲ್ಲವು ಮುಖಂಡರು ಮಾತ್ರ ಸೇರ್ಪಡೆಯಾಗುತ್ತಿಲ್ಲ. ಅವರ ಜತೆಗೆ ಹೆಚ್ಚಿನ ಕಾರ್ಯಕರ್ತರನ್ನು ತೆಗೆದುಕೊಂಡು ಪಕ್ಷ ಸೇರುತ್ತಿದ್ದಾರೆ.
ಯಾದಗಿರಿ: ಮಾಲಕರೆಡ್ಡಿಗೆ ಕೈ ಕೊಟ್ಟ ಕಾಂಗ್ರೆಸ್..!
ಚುನಾವಣೆ ಘೋಷಣೆಯಾದ ನಂತರವಂತು ವಿಪರೀತವಾಗಿ ಪಕ್ಷಾಂತರ ನಡೆಯುತ್ತಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಒಂದೆಡೆ ಚುನಾವಣಾ ಪ್ರಚಾರ ಮಾಡಬೇಕು. ಇನ್ನೊಂದೆಡೆ ಪಕ್ಷ ಸೇರ್ಪಡೆ ಹಮ್ಮಿಕೊಂಡರೆ ಸಮಯ ಅಲ್ಲಿಯೇ ವ್ಯರ್ಥವಾಗುತ್ತಿದೆ. ಅಲ್ಲದೆ ನಾಯಕರಿಗೆ ತಾವು ಅಂದುಕೊಂಡಂತೆ ಹಳ್ಳಿಗಳಿಗೆ ಹೋಗಿ ಪ್ರಚಾರ ಮಾಡಲು ಆಗುತ್ತಿಲ್ಲ. ಅನ್ನುವ ನೋವು ಪಕ್ಷದ ನಾಯಕರನ್ನು ಕಾಡುತ್ತಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಿಸಿದ್ದರೆ ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಇದರ ಮಧ್ಯದಲ್ಲಿ ಜೆಡಿಎಸ್, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಆಮ್ ಆದ್ಮಿ ಪಕ್ಷಕ್ಕೂ ಕಾರ್ಯಕರ್ತರು ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಪಕ್ಷಗಳಿಂದ ಅಭ್ಯರ್ಥಿಗಳನ್ನು ಫೈನಲ್ ಮಾಡಿಲ್ಲ.
ತಾಲೂಕಿನಲ್ಲಿ ಕಾಂಗ್ರೆಸ್, ಬಿಜೆಪಿಯಿಂದ ಪಕ್ಷದಿಂದ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಅಷ್ಟೇ ಭರದಿಂದ ಅವರನ್ನು ಆಯಾ ಆಯಾ ಪಕ್ಷದ ಮುಖಂಡರು ಬರಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಸೇರು ಸವಾ ಸೇರಿನಂತೆ ಜಿದ್ದಾಜಿದ್ದಿ ನಡೆಸುತ್ತಿವೆ. ಜೆಡಿಎಸ್, ಕೆಆರ್ಪಿಪಿ, ಎಎಪಿ ಪಕ್ಷಗಳು ಕಾರ್ಯಕರ್ತರನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ.
ಯಾದಗಿರಿ: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗಲಾಟೆ, ಕಲ್ಲು ತೂರಾಟ, ಉದ್ವಿಗ್ನ ವಾತಾವರಣ
ಅಸಮಾಧಾನದ ಲಾಭ ಪಡೆಯಲು ರಾಜಕೀಯ ಪಕ್ಷಗಳು ಟೊಂಕಕಟ್ಟಿನಿಂತಿವೆ. ಚುನಾವಣೆ ಸಂದರ್ಭದಲ್ಲಿ ಸಿಗುವ ಸಣ್ಣ ಅವಕಾಶವನ್ನು ಬಿಡಲು ಪಕ್ಷದ ನಾಯಕರು ಸಿದ್ಧರಿಲ್ಲ. ಸಿಗುವ ಎಲ್ಲ ಅವಕಾಶಗಳನ್ನು ಎರಡು ಕೈಗಳಿಂದ ಬಾಚಿ ತಬ್ಬಿಕೊಳ್ಳುತ್ತಿವೆ. ಪಕ್ಷ ಬದಲಾವಣೆ ಮಾಡುವುದು ಪ್ರಜಾಪ್ರಭುತ್ವ ದೇಶಕ್ಕೆ ಮಾರಕ ಅಂತ ಸುರಪುರದ ಭೀಮರಾಯ ಹುಲಿಕಲ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.