ಗೃಹ ಇಲಾಖೆ ಕಡ್ಲೆ ಮಿಠಾಯಿ ತಿನ್ನುತ್ತಿತ್ತಾ: ಆರಗ ಜ್ಞಾನೇಂದ್ರ ವಿರುದ್ಧ ಕಾಂಗ್ರೆಸ್‌ ಆಕ್ರೋಶ

By Kannadaprabha NewsFirst Published Jan 23, 2023, 11:57 AM IST
Highlights

‘ರಾಜ್ಯದಲ್ಲಿ ಕೋಮು ಕಲಹಕ್ಕಾಗಿ ಕೊಲೆಗಳನ್ನು ನಡೆಸುವ ಸಂಚು ರೂಪಿಸಲಾಗಿತ್ತು ಎಂಬ ಸಂಗತಿಯನ್ನು ಎನ್‌ಐಎ ಬಹಿರಂಗಪಡಿಸಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ, ನಿಮ್ಮ ಗುಪ್ತಚರ ಇಲಾಖೆ ಕಡಲೆ ಮಿಠಾಯಿ ತಿನ್ನುತ್ತಿತ್ತೇ? ಅಥವಾ ಗುಪ್ತಚರ ಇಲಾಖೆ ಕೇವಲ ಕಾಂಗ್ರೆಸ್‌ ಚಲನವಲನ ಗಮನಿಸುವುದಕ್ಕೆ ಮಾತ್ರ ಸೀಮಿತವೇ’ ಎಂದು ರಾಜ್ಯ ಕಾಂಗ್ರೆಸ್‌ ಪ್ರಶ್ನಿಸಿದೆ. 

ಬೆಂಗಳೂರು (ಜ.23): ‘ರಾಜ್ಯದಲ್ಲಿ ಕೋಮು ಕಲಹಕ್ಕಾಗಿ ಕೊಲೆಗಳನ್ನು ನಡೆಸುವ ಸಂಚು ರೂಪಿಸಲಾಗಿತ್ತು ಎಂಬ ಸಂಗತಿಯನ್ನು ಎನ್‌ಐಎ ಬಹಿರಂಗಪಡಿಸಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ, ನಿಮ್ಮ ಗುಪ್ತಚರ ಇಲಾಖೆ ಕಡಲೆ ಮಿಠಾಯಿ ತಿನ್ನುತ್ತಿತ್ತೇ? ಅಥವಾ ಗುಪ್ತಚರ ಇಲಾಖೆ ಕೇವಲ ಕಾಂಗ್ರೆಸ್‌ ಚಲನವಲನ ಗಮನಿಸುವುದಕ್ಕೆ ಮಾತ್ರ ಸೀಮಿತವೇ’ ಎಂದು ರಾಜ್ಯ ಕಾಂಗ್ರೆಸ್‌ ಪ್ರಶ್ನಿಸಿದೆ. ಈ ಬಗ್ಗೆ ಭಾನುವಾರ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ಕೋಮು ಕಲಹಕ್ಕಾಗಿ ಕೊಲೆಗಳನ್ನು ನಡೆಸುವ ಸಂಚು ರೂಪಿಸಲಾಗಿತ್ತು ಎಂಬ ಸಂಗತಿಯನ್ನು ಎನ್‌ಐಎ ಹೇಳಿದೆ. 

ಇದು ರಾಜ್ಯ ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆ ವೈಫಲ್ಯವಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ ಕೋಮು ಗಲಭೆ ಸೃಷ್ಟಿಸುವುದರಲ್ಲಿ ಹಾಗೂ 40 ಪರ್ಸೆಂಟ್‌ ಕಮಿಷನ್‌ ಲೂಟಿ ಹೊಡೆಯುವುದರಲ್ಲಿ ಬ್ಯುಸಿಯಾಗಿದೆ. ಬಿಜೆಪಿಯ ಭ್ರಷ್ಟಾಚಾರಕ್ಕೆ ಭೂಮಿಯೇ ಬಾಯ್ತೆರೆಯುತ್ತಿದೆ. ಇಟ್ಟಮಡು ಮತ್ತಿತರ ಕಡೆ ರಸ್ತೆಗಳು ಬಾಯಿ ತೆಗೆದಿವೆ. ಭ್ರಷ್ಟ ಸರ್ಕಾರದ ಆಡಳಿತದಲ್ಲಿ ಎಲ್ಲೆಲ್ಲಿ ಏನೇನು ಆಗುತ್ತದೆಯೋ ಎಂದು ಜನ ಭೀತಿಯಲ್ಲಿ ಜೀವನ ನಡೆಸುವಂತಾಗಿದೆ ಎಂದು ಕಿಡಿಕಾರಿದೆ.

ಒಂದು ಪೈಸೆ ಲಂಚ ಪಡೆದಿದ್ದರೆ ರಾಜಕೀಯ ನಿವೃತ್ತಿ: ಸಿದ್ದು ಸವಾಲು

ಗೃಹ ಇಲಾಖೆ ಮಾನ ಹರಾಜು ಸಿಎಂ, ಆರಗ ಸಾಧನೆ: ‘ರಾಜ್ಯದ ಅತಿದೊಡ್ಡ ಹಗರಣದ ಕಿಂಗ್‌ಪಿನ್‌ ಪೊಲೀಸರನ್ನು ತಳ್ಳಿ ಪರಾರಿಯಾಗಿರುವುದು ಗೃಹ ಇಲಾಖೆ ನಿಷ್ಕಿ್ರಯತೆಗೆ ಹಿಡಿದ ಕೈಗನ್ನಡಿ. ಒಟ್ಟಿನಲ್ಲಿ ಗೃಹ ಇಲಾಖೆ ಮಾನವನ್ನು ಬೀದಿಯಲ್ಲಿ ಹರಾಜು ಹಾಕಿದ್ದೇ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಪೇಸಿಎಂ ಬಸವರಾಜ ಬೊಮ್ಮಾಯಿ ಸಾಧನೆ’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲಾ ಕಿಡಿ ಕಾರಿದ್ದಾರೆ.

ಪಿಎಸ್‌ಐ ಹಗರಣದ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ್‌ ತಪ್ಪಿಸಿಕೊಂಡಿರುವ ಬಗ್ಗೆ ಕನ್ನಡಪ್ರಭ ಪ್ರಕಟಿಸಿರುವ ವರದಿಯನ್ನು ಟ್ವೀಟ್‌ ಮಾಡಿರುವ ಅವರು, ಇದೇನು ಸರ್ಕಾರವೇ ರಚಿಸಿದ ಷಡ್ಯಂತ್ರವೇ? ಪಿಎಸ್‌ಐ ಅಕ್ರಮದ ಕ್ರಿಮಿನಲ್‌ಗಳ ರಕ್ಷಣೆಗೆ ಸರ್ಕಾರವೇ ನಿಂತಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೊಡ್ಡ ಸ್ಥಾನಕ್ಕೇರಿದವರು ಸಣ್ಣ ಮಾತನಾಡಬಾರದು: ಸಿದ್ದರಾಮಯ್ಯ ಹೇಳಿಕೆಗೆ ಸಂಸ್ಕಾರಯುತ ಪೆಟ್ಟು ನೀಡಿದ ಸಿಎಂ

ಇದೇ ವಿಷಯದ ಕುರಿತು ಕಾಂಗ್ರೆಸ್‌ ತನ್ನ ಅಧಿಕೃತ ಖಾತೆಯಲ್ಲೂ ಟ್ವೀಟ್‌ ಮಾಡಿದ್ದು, ಪಿಎಸ್‌ಐ ಹಗರಣದ ಆರೋಪಿ ಸಿಐಡಿ ಅಧಿಕಾರಿಗಳನ್ನೇ ತಳ್ಳಿ ಪರಾರಿಯಾಗುತ್ತಾನೆ. ಜತೆಗೆ ಫೇಸ್‌ಬುಕ್‌ ಲೈವ್‌ ಕೂಡ ಮಾಡುತ್ತಾನೆ. ಆದರೂ ಆತನನ್ನು ಪತ್ತೆ ಮಾಡಲು ಆಗಲಿಲ್ಲ ಯಾಕೆ? ಆರಗ ಜ್ಞಾನೇಂದ್ರ ಅವರೇ ಆರೋಪಿಯೊಬ್ಬ ಸರ್ಕಾರಕ್ಕೆ ಸವಾಲು ಹಾಕುತ್ತಿರುವುದು ನಾಚಿಕೆಗೇಡಲ್ಲವೇ? ಪೊಲೀಸರು ಈತನನ್ನು ಪತ್ತೆ ಮಾಡದಷ್ಟುಅಸಮರ್ಥರೇ ಅಥವಾ ಸರ್ಕಾರ ಆಡುತ್ತಿರುವ ನಾಟಕವೇ ಎಂದು ಸರಣಿ ಪ್ರಶ್ನೆಗಳನ್ನು ಎಸೆದಿದೆ.

click me!