
ಬೆಂಗಳೂರು/ಶಿವಮೊಗ್ಗ, (ಮಾ.09): ಶಿವಮೊಗ್ಗದಲ್ಲಿ (Shivamogga) ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯಾದ (Harsha Murder) ಹಿನ್ನೆಲೆಯಲ್ಲಿ ಆತನ ಕುಟುಂಬಕ್ಕೆ ಕರ್ನಾಟಕ ಸರ್ಕಾರ 25 ಲಕ್ಷ ರೂ ಕೊಟ್ಟಿರುವುದಕ್ಕೆ ಕಾಂಗ್ರೆಸ್ ಶಾಸಕ ಪ್ರಶ್ನಿಸಿದ್ದಾರೆ.
ಹೌದು..ಗಾಂಧಿಯ ಕೊಲೆಗಾರ ಗೋಡ್ಸೆಯಲ್ಲಿ ದೇಶಭಕ್ತಿ ಕಾಣುವ ವ್ಯಕ್ತಿಯ ಸಾವಿಗೆ 25 ಲಕ್ಷ ನೀಡಿದ ಸರ್ಕಾರ, ದೇಶದ ಗಡಿ ಕಾಯುತ್ತಾ ಮೃತನಾದ ಯೋಧ ಅಲ್ತಾಫ್ಗೆ ಎಷ್ಟು ನೀಡಿದೆ? ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge)ಪ್ರಶ್ನಿಸಿದ್ದಾರೆ.
ಹತ್ಯೆಯಾದ ಹರ್ಷ ಮನೆಗೆ ಬಿಎಸ್ವೈ ಭೇಟಿ: 25 ಲಕ್ಷ ರೂ. ಪರಿಹಾರ ವಿತರಣೆ
ಶಿವಮೊಗ್ಗದಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ನಡೆದ ನಂತರ, ಆತನ ಕುಟುಂಬಕ್ಕೆ ಸರಕಾರದ ವತಿಯಿಂದ 25ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗಿತ್ತು. ಖುದ್ದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಈಶ್ವರಪ್ಪ ಅವರು ಮನೆಗೆ ಹೋಗಿ ಹರ್ಷನ ಕುಟುಂಬಕ್ಕೆ ಚೆಕ್ ನೀಡಿ ಬಂದಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಪ್ರಿಯಾಂಕ್ ಖರ್ಗೆ, ಹಲವು ಪ್ರಶ್ನೆಗಳನ್ನ ಹಾಕುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅವರ ಬರೆದುಕೊಂಡಿರುವ ಪೋಸ್ಟ್ ಈ ಕೆಳಗಿನಂತಿದೆ.
ಶಿವಮೊಗ್ಗದಲ್ಲಿ ಹತ್ಯೆಗೀಡಾದ ಯುವಕ ಹರ್ಷನ ಕುಟುಂಬಕ್ಕೆ ಸರ್ಕಾರ 25 ಲಕ್ಷ ಪರಿಹಾರ ನೀಡಿರುವುದರ ಹಿಂದೆ ಯಾವ ಅಜೆಂಡಾ ಅಡಗಿದೆ? ಯಾವ ನಿಯಮಗಳ ಅಡಿಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ನೀಡಲಾಗಿದೆ? ರಾಜ್ಯದಲ್ಲಿ ವೈಯುಕ್ತಿಕ ದ್ವೇಷಗಳಿಗೆ ಮೃತಪಟ್ಟವರೆಲ್ಲರಿಗೂ ಇದೇ ರೀತಿ ಪರಿಹಾರ ನೀಡುತ್ತದೆಯೇ ಈ ಸರ್ಕಾರ?
ಮೃತ ಹರ್ಷನ ಮೇಲೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿದ್ದವು ಎಂಬ ವಿಷಯ ತಿಳಿದುಬಂದಿದೆ. 2020ರಲ್ಲಿ ಇವರದ್ದೇ ಸರ್ಕಾರ ಆತನನ್ನು ಜೈಲಿಗಟ್ಟಿತ್ತು, ಶಿವಮೊಗ್ಗದ ಉಸ್ತುವಾರಿ ಸಚಿವ ನಾರಾಯನಗೌಡರೇ ವೈಯುಕ್ತಿಕ ಕಾರಣಗಳಿಗೆ ನಡೆದ ಕೊಲೆ ಎಂದಿದ್ದಾರೆ.
ಪೊಲೀಸರ ತನಿಖಾ ವರದಿಯೂ ಬಂದಿಲ್ಲ. ಹೀಗಿರುವಾಗ ಈ ಪರಿಹಾರ ಹಣ ಕೊಟ್ಟಿದ್ದು ಏಕೆ? ಹೇಗೆ?
ನೆರೆ ಸಂತ್ರಸ್ತರಿಗೆ, ಕೋವಿಡ್ ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಸತಾಯಿಸುವ ಈ ಸರ್ಕಾರ ತಮ್ಮ ಪಕ್ಷದ ಕಾರ್ಯಕರ್ತನ ಕುಟುಂಬಕ್ಕೆ 25 ಲಕ್ಷ ಹಣ ನೀಡಿರುವುದು ಆಶ್ಚರ್ಯಕರ! ಇಂತಹ ಉದಾರ ಮನಸಿದ್ದರೆ ಧರ್ಮಸ್ಥಳದಲ್ಲಿ ಬಿಜೆಪಿ ಮುಖಂಡನಿಂದ ಹತ್ಯೆಯಾದ ದಲಿತ ಯುವಕ ದಿನೇಶ್ ಕುಟುಂಬಕ್ಕೆ ಏಕೆ ಕೊಡಲಿಲ್ಲ, ಬಜರಂಗದಳದವರಿಗೆ ಹತ್ಯೆಯಾದ ಸಮೀರ್ ಕುಟುಂಬಕ್ಕೆ ಏಕೆ ಕೊಡಲಿಲ್ಲ?ಮೃತರಾದ ಕೊಡಗಿನ ಯೋಧ ಕುಟುಂಬಕ್ಕೆ ಏಕೆ ಕೊಡಲಿಲ್ಲ? ಕನಿಷ್ಠ ಸಾಂತ್ವನವೂ ಹೇಳಲಿಲ್ಲವೇಕೆ?
ಅನಾರೋಗ್ಯ ಪೀಡಿತರಿಗೆ, ಬಡವರ ನೆರವಿಗೆ, ಯೋಧರ ಕುಟುಂಬಗಳಿಗೆ ಬಳಸಬಹುದಾದ 'ವಿವೇಚನೆ'ಯನ್ನು ತಮ್ಮ ಪಕ್ಷದ ಕೆಡರ್ ಒಬ್ಬನಿಗೆ ಬಳಸಿದ್ದು ಮುಖ್ಯಮಂತ್ರಿಗಳ ಯೋಚನೆ, ವಿವೇಚನೆ ಎಂತದ್ದು ಎಂದು ತಿಳಿಸುತ್ತದೆ.
ಬಿಜೆಪಿ ಪಕ್ಷದ ಮೂಲಕ 25 ಲಕ್ಷವಲ್ಲ 25 ಕೋಟಿಯಾದರೂ ಕೊಡಲಿ, ಆದರೆ ಸರ್ಕಾರದ ಹಣ ದುರ್ಬಳಕೆಗೆ ಅಧಿಕಾರ ಕೊಟ್ಟವರು ಯಾರು? ಗಾಂಧಿಯ ಕೊಲೆಗಾರ ಗೋಡ್ಸೆಯಲ್ಲಿ ದೇಶಭಕ್ತಿ ಕಾಣುವ ವ್ಯಕ್ತಿಯ ಸಾವಿಗೆ 25 ಲಕ್ಷ ನೀಡಿದ ಸರ್ಕಾರ, ದೇಶದ ಗಡಿ ಕಾಯುತ್ತಾ ಮೃತನಾದ ಯೋಧ ಅಲ್ತಾಫ್ಗೆ ಎಷ್ಟು ನೀಡಿದೆ? ದೇಶಭಕ್ತಿಯ ವ್ಯಾಖ್ಯಾನ ಬದಲಿಸಿದೆಯೇ ಬಿಜೆಪಿ ಸರ್ಕಾರ? ಗೋಡ್ಸೆ ಆರಾಧಕನಿಗೆ ಹಣ ನೀಡುವ ಮೂಲಕ ಗಾಂಧಿ ಹತ್ಯೆಯನ್ನು ಅನುಮೋದಿಸುತ್ತದೆಯೇ ಬಿಜೆಪಿ? ಸಿಎಂ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.