
ಬೆಂಗಳೂರು (ಜು.13): ಗಣಿಗಾರಿಕೆ ವಿಚಾರದಲ್ಲಿ ಸಂಸದೆ ಸುಮಲತಾ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವೆ ನಡೆದಿರುವ ಕಿತ್ತಾಟದ ವಿಚಾರದಲ್ಲಿ ಕಾಂಗ್ರೆಸ್ ಬಣ ರಾಜಕಾರಣವೂ ಇಬ್ಭಾಗವಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈ ವಿಚಾರದಲ್ಲಿ ಜಾಣ ಮೌನ ವಹಿಸುವ ಮೂಲಕ ಕುಮಾರಸ್ವಾಮಿ ಬಗ್ಗೆ ತುಸು ಮೃದು ಧೋರಣೆ ತೋರಿದರೆ, ಸಿದ್ದರಾಮಯ್ಯ ಬಣದ ನಾಯಕರು ನೇರವಾಗಿ ಸುಮಲತಾ ಪರ ವಕಾಲತ್ತು ಆರಂಭಿಸಿದ್ದಾರೆ.
ಸುಮಲತಾ-JDS ನಾಯಕರ ರಣಭಯಂಕರ ಯುದ್ಧ : ಸವಾಲ್ ಹಾಕಿ ಅಖಾಡಕ್ಕೆ ಸಂಸದೆ ..
ಡಿ.ಕೆ.ಶಿವಕುಮಾರ್ ಅವರು ಮಂಡ್ಯದ ಈ ಗದ್ದಲದ ವಿಚಾರದಲ್ಲಿ ಯಾವುದೇ ಬಹಿರಂಗ ಹೇಳಿಕೆ ನೀಡಲು ಹಿಂಜರಿಕೆ ತೋರುತ್ತಿರುವುದು ಹಲವು ಬಾರಿ ವ್ಯಕ್ತವಾಗಿದೆ. ಸೋಮವಾರವಂತೂ ಈ ಬಗೆಗಿನ ಪ್ರಶ್ನೆ ತೂರಿ ಬಂದ ಕೂಡಲೇ ಪತ್ರಿಕಾಗೋಷ್ಠಿಯನ್ನು ಅಷ್ಟಕ್ಕೆ ನಿಲ್ಲಿಸಿ ಅವರು ಹೊರ ನಡೆದರು. ಈ ವಿವಾದ ಆರಂಭವಾದಾಗಿನಿಂದ ಶಿವಕುಮಾರ್ ತಮ್ಮ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿಲ್ಲ. ಇನ್ನು ಸಿದ್ದರಾಮಯ್ಯ ಸಹ ನೇರವಾಗಿ ಈ ವಿಚಾರದಲ್ಲಿ ವಾಗ್ದಾಳಿ ನಡೆಸದೆ ಇದ್ದರೂ ಅವರ ಪರ ನಾಯಕರು ಬಹಿರಂಗವಾಗಿ ಸುಮಲತಾ ಪರ ನಿಲುವು ವ್ಯಕ್ತಪಡಿಸಲು ಆರಂಭಿಸಿದ್ದಾರೆ.
ಸಿದ್ದರಾಮಯ್ಯ ಅವರ ಆಪ್ತರೆನಿಸಿದ ಮಾಜಿ ಸಚಿವೆ ಉಮಾಶ್ರೀ ಅವರು ಸೋಮವಾರ ಬಹಿರಂಗವಾಗಿ ಈ ಬಗ್ಗೆ ಹೇಳಿಕೆ ನೀಡಿ, ಕುಮಾರಸ್ವಾಮಿ ಧೋರಣೆಯನ್ನು ಖಂಡಿಸಿದ್ದಾರೆ. ಇನ್ನು ಕಾಂಗ್ರೆಸ್ನ ಮಂಡ್ಯ ನಾಯಕರಾದ ಹಾಗೂ ಸಿದ್ದರಾಮಯ್ಯ ಅವರ ಆಪ್ತರಾದ ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ ಮೊದಲಾದವರು ಪರೋಕ್ಷವಾಗಿ ಸುಮಲತಾ ಪರ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.