ಕರ್ನಾಟಕವನ್ನು ಕಾಂಗ್ರೆಸ್‌ ಭಿಕ್ಷಾ ರಾಜ್ಯವನ್ನಾಗಿ ಮಾಡುತ್ತಿದೆ: ಸಂಸದ ಪ್ರತಾಪ್‌ ಸಿಂಹ

By Kannadaprabha NewsFirst Published Jun 5, 2023, 1:00 AM IST
Highlights

ಸುಭಿಕ್ಷ ರಾಜ್ಯ ಕರ್ನಾಟಕವನ್ನು ಕಾಂಗ್ರೆಸ್‌ ಭಿಕ್ಷಾ ರಾಜ್ಯ ಮಾಡುತ್ತಿದೆ ಎಂದು ಸಂಸದ ಪ್ರತಾಪ್‌ ಸಿಂಹ ಆರೋಪಿಸಿದರು. ಜಿಪಂ ಆವರಣದಲ್ಲಿ ದಿಶಾ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೈಸೂರು (ಜೂ.05): ಸುಭಿಕ್ಷ ರಾಜ್ಯ ಕರ್ನಾಟಕವನ್ನು ಕಾಂಗ್ರೆಸ್‌ ಭಿಕ್ಷಾ ರಾಜ್ಯ ಮಾಡುತ್ತಿದೆ ಎಂದು ಸಂಸದ ಪ್ರತಾಪ್‌ ಸಿಂಹ ಆರೋಪಿಸಿದರು. ಜಿಪಂ ಆವರಣದಲ್ಲಿ ದಿಶಾ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ನೀತಿಯಿಂದಾಗಿ ರಾಜ್ಯ ದಿವಾಳಿ ಆಗುತ್ತಿದೆ. ಸದ್ಯದಲ್ಲಿಯೇ ಎಲ್ಲಾ ರೀತಿಯ ತೆರಿಗೆ ಹೆಚ್ಚು ಮಾಡುತ್ತಾರೆ. ಆಸ್ತಿ ನೋಂದಣಿ ಶುಲ್ಕ ಮತ್ತು ಮದ್ಯದ ತೆರಿಗೆ ಹೀಗೆ ಎಲ್ಲವೂ ಹೆಚ್ಚಾಗುತ್ತದೆ ಎಂದು ಹೇಳಿದರು. ಕರ್ನಾಟಕಕ್ಕೆ ಶ್ರೀಲಂಕಾ, ಬಾಂಗ್ಲಾದೇಶದ ಸ್ಥಿತಿ ಬರುವ ಕಾಲ ದೂರವಿಲ್ಲ. ಅರವಿಂದ ಕೇಜ್ರಿವಾಲ್‌ 2013 ರಲ್ಲಿ ಕಳಪೆ ಮತ್ತು ಫ್ರೀ ಯೋಜನೆ ಜಾರಿಗೆ ತಂದಿದ್ದರು. ಈಗ ಅದನೇ ಕಾಂಗ್ರೆಸ್‌ ಸರ್ಕಾರ ಮಾಡುತ್ತಿದೆ ಎಂದರು.

ಇದು ಕರ್ನಾಟಕ ಮಾದರಿ ಅಲ್ಲ. ಇದನ್ನು ಹಲವು ರಾಜ್ಯದಲ್ಲಿ ಮಾಡಿ ಜನರನ್ನು ಮಂಗ್ಯಾ ಮಾಡಲಾಗುತ್ತಿದೆ. ಕಾಂಗ್ರೆಸ್‌ನ ಪ್ರಣಾಳಿಕೆ ಈಡೇರಿಸಲು ಕೇಂದ್ರ ಬಜೆಟ್‌ ಹಣ ತಂದರೂ ಆಗಲ್ಲ. ಲೋಕಸಭಾ ಚುನಾವಣೆವರೆಗೂ ಜನರನ್ನು ಗ್ಯಾರಂಟಿ ಜಾರಿ ಹೆಸರಿನಲ್ಲಿ ಮಂಗ್ಯಾ ಮಾಡುತ್ತಾರೆ ಎಂದು ಕಿಡಿಕಾರಿದರು. ಚುನಾವಣೆ ಮುನ್ನ ಸಿದ್ದರಾಮಯ್ಯ ಮತ್ತು ಶಿವಕುಮಾರಣ್ಣ ಅವರು ಎದೆ ಹೊಡೆದುಕೊಂಡು ಹೇಳಿದ್ದರು. ಊರೂರ ಮೇಲೆ, ತಮಟೆ ಬಾರಿಸಿದ್ದೇ ಬಾರಿಸಿದ್ದು, ನಂಗೂ ಫ್ರೀ, ಮಹದೇವಪ್ಪ ನಿಂಗೂ ಫ್ರೀ ಎಂದು ಹೇಳಿ ಆದ ಮೇಲೆ ಹೀಗೆ ಷರತ್ತು ವಿಧಿಸುವುದು ಸರಿಯೇ? ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಜಾರಿಗೊಳಿಸುವುದಾಗಿ ಹೇಳಿದ್ದರು. ಆದರೆ ನಮ್ಮ ಗ್ಯಾರೆಂಟಿ ಜಾರಿಗೆ ಬದ್ಧ ಎಂದು ಒಂದು ಸಾಲಿನ ಆದೇಶ ಹೊರಡಿಸಿದರು.

ಗುಂಡ್ಲುಪೇಟೆಯನ್ನು ಮಾದರಿ ಕ್ಷೇತ್ರ ಮಾಡುವುದೇ ಗುರಿ: ಶಾಸಕ ಎಚ್‌.ಎಂ.ಗಣೇಶ್‌ಪ್ರಸಾದ್‌

ಜೂ. 1 ರಿಂದ ಎಲ್ಲಾ ಗ್ಯಾರೆಂಟಿ ಅನುಷ್ಠಾನ ಖಚಿತ ಎಂದರಿ ಎಲ್ಲಿ ಹೋಯಿತು ಸಮಯ. ಸ್ವಾತಂತ್ರ ಪೂರ್ವದಲ್ಲಿ ಟೋಪಿ ಹಾಕಿಕೊಂಡಿದ್ದರೆ ಕಾಂಗ್ರೆಸ್‌ನವರು ಎನ್ನುತ್ತಿದ್ದರು. ಆದರೆ ಈಗ ಕಾಂಗ್ರೆಸಿನವರನ್ನು ಕಂಡರೆ ಟೋಪಿ ಹಾಕುವವರು ಎಂಬ ಭಾವನೆ ಬಂದಿದೆ. 13 ಬಜೆಟ್‌ ಮಂಡಿಸಿದವರು, 2 ಬಾರಿ ಡಿಸಿಎಂ, ಸಿಎಂ ಆದವರು 13 ದಿನವಾಯಿತು ಅಧಿಕಾರಕ್ಕೆ ಬಂದು, ಎಷ್ಟುದುಡ್ಡು ಖರ್ಚಾಗಿದೆ. ಇದಕ್ಕೆ ಇಂತಿಂತ ಮೂಲದಿಂದ ಅನುದಾನ ತರುತ್ತೇನೆ ಎಂದು ಹೇಳುವುದಕ್ಕೆಯಾಕೆ ಇಷ್ಟುದಿನ ಎಂದು ಅವರು ಪ್ರಶ್ನಿಸಿದರು. ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಜೂ. 11 ರಿಂದ ಕಾರ್ಯಗತ ಎಂದಿದ್ದೀರಿ. ಉಳಿದ ಯೋಜನೆ ಕಥೆ ಏನು? 15 ರಿಂದ ಗೃಹಲಕ್ಷ್ಮೀ ನೋಂದಣಿ ಎನ್ನುತ್ತಿದ್ದಾರೆ. ಮಹದೇವಪ್ಪ, ಕಾಕಾಪಾಟೀಲ್‌ ಮನೆಯಲ್ಲಿ 200 ಯೂನಿಟ್‌ಗಿಂತ ಹೆಚ್ಚು ಖರ್ಚಾಗುವುದಿಲ್ಲವೋ? 

ಈಗ ನಿಮ್ಮ ಮಾತು ಬದಲಿಸಿ ಒಂದು ವರ್ಷದ ಸರಾಸರಿಯಲ್ಲಿ 10 ಯೂನಿಟ್‌ ಹೆಚ್ಚುಗೊಳಿಸುತ್ತೇವೆ, ಅದಕ್ಕಿಂತ ಹೆಚ್ಚು ಆದರೆ ಬಿಲ್‌ ಎನ್ನುತ್ತೀರಿ. ನೀವು ಮಾತಿಗೆ ತಪ್ಪದೆ ಕೊಡಲೇ ಬೇಕು ಮಾತಿಗೆ ತಕ್ಕಂತೆ ನಡೆದುಕೊಳ್ಳಿ, ಕಂಡಿಷನ್‌ ಏಕೆ ಎಂದರು. ಗೃಹಲಕ್ಷ್ಮೀ ಯೋಜನೆಗೆ ಮಹಿಳೆಯರು ಸಾಲಾಗಿ ನಿಂತುಕೊಂಡು ಅರ್ಜಿ ಹಾಕಬೇಕಾ? 2014ರಲ್ಲಿ ಮೋದಿ ಪ್ರಧಾನಿಯಾದ ಮೇಲೆ 47 ಕೋಟಿ ಜನಧನ್‌ ಖಾತೆ ತೆರೆಸಿದ್ದಾರೆ. ಅದಕ್ಕೂ ಆಧಾರ್‌ ಲಿಂಕ್‌ ಆಗಿದೆ. ಉಜ್ವಲ ಯೋಜನೆಯಡಿ ಮಹಿಳೆಯ ಹೆಸರಿನಲ್ಲಿ ಗ್ಯಾಸ್‌ ನೀಡಲಾಗಿದೆ. ಆವಾಸ್‌ ಯೋಜನೆಗೂ ಲಿಂಕ್‌ ಆಗಿದೆ. ಈ ಯೋಜನೆ ಮುಂದಕ್ಕೆ ತಳ್ಳಲು ಕುಂಟು ನೆಪ ಹೇಳಲಾಗುತ್ತಿದೆ. ಹೀಗೆಯೇ ಮಾಡಿ ಇನ್ನೊಂದು ಚುನಾವಣೆ ಮುಗಿಸೋಣ ಎಂಬುದು ನಿಮ್ಮ ತಂತ್ರಗಾರಿಕೆ ಎಂದು ಅವರು ದೂರಿದರು.

ಹೋಟೆಲ್‌, ಕ್ಲಬ್‌ಗಳಲ್ಲಿ ರಾಜಕೀಯ ಮಾಡಿದರೆ ಮತ ಬರಲ್ಲ: ಸಂಸದ ಡಿ.ಕೆ.ಸುರೇಶ್‌

ಮನೆ ಯಜಮಾನಿ ಯಾರು ಎಂದು ನಿರ್ಧರಿಸಬೇಕಂತೆ. ಅತ್ತೆ- ಸೊಸೆ ಜಗಳ ಗೊತ್ತೇ ಇದೆ. ಅವರು ಕುಳಿತುಕೊಂಡು ಯಜಮಾನಿ ಯಾರು ಎಂದು ತೀರ್ಮಾನಿಸಲು ಸಾಧ್ಯವೇ? ಸಾಬರ ಮನೆಯಲ್ಲಿ ಎರಡು, ಮೂರು ಹೆಂಡತಿ ಇದ್ದರೆ ಅವರ ಮನೆಗೆ ಬೆಂಕಿ ಬೀಳುತ್ತದೆ. ಅವರು ಪ್ರೀತಿಯಿಂದ ನಿಮಗೆ ಓಟು ಹಾಕಿದ್ದಾರೆ. ಕೊಡುತ್ತೇವೆ ಎಂದರೆ ಧಾರಾಳವಾಗಿ ಕೊಟ್ಟುಬಿಡಿ. ಆಗದಿದ್ದರೆ ಚುನಾವಣೆಗಾಗಿ ಹೇಳಿದ್ದು ಎಂದು ಒಪ್ಪಿಕೊಂಡು ಬಿಡಿ. ಆದರೆ ಕುಟುಂಬ ಒಡೆಯುವ ಕೆಲಸ ಮಾಡಬೇಡಿ ಎಂದು ಪ್ರತಾಪ ಸಿಂಹ ಕಿವಿಮಾತು ಹೇಳಿದರು.

click me!