ಬಿಕ್ಕಿಬಿಕ್ಕಿ ಅತ್ತ ಕಾಂಗ್ರೆಸ್ ಅಭ್ಯರ್ಥಿ, ಸಚಿವರೇ ನಿಮಗೆ ಅಕ್ಕ-ತಂಗಿಯರು ಇಲ್ವಾ ಎಂದ ಬಾಬು ಪತ್ನಿ

By Suvarna NewsFirst Published Dec 1, 2021, 8:48 PM IST
Highlights

* ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸಚಿವ ಸೋಮಶೇಖರ್ ಗಂಭೀರ ಆರೋಪ
* ಸುದ್ದಿಗೋಷ್ಠಿ ನಡೆಸಿ ಕಣ್ಣೀರಿಟ್ಟ ಕೆಜಿಎಫ್ ಬಾಬು ಕುಟುಂಬ
* ಸೋಮಶೇಖರ್ ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಕೆಜಿಎಫ್ ಬಾಬು

ಬೆಂಗಳೂರು, (ಡಿ.01): ಸಚಿವ ಎಸ್‌ಟಿ ಸೋಮಶೇಖರ್ (ST Somashekar) ಮಾಡಿರುವ ಆರೋಪಕ್ಕೆ ಕಾಂಗ್ರೆಸ್ ವಿಧಾನಪರಿಷತ್ ಅಭ್ಯ್ರರ್ಥಿ(Congress MLC Candidate)  ಕೆಜಿಎಫ್ ಬಾಬು (KGF Babu) ಕಣ್ಣೀರಿಟ್ಟಿದ್ದಾರೆ.

 ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಕೆಜಿಎಫ್ ಬಾಬುಗೆ ಎಂಎಲ್‍ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್((Congress Ticket) ನೀಡಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಗಂಭೀರ ಆರೋಪ ಮಾಡಿದ್ದರು. 

ಇದಕ್ಕೆ ಪತ್ನಿಯರು-ಮಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರದ ವಿಧಾನ ಪರಿಷತ್​ ಚುನಾವಣೆಯ ಕಾಂಗ್ರೆಸ್​ ಅಭ್ಯರ್ಥಿ ಕೆಜಿಎಫ್ ಬಾಬು ಅಲಿಯಾಸ್ ಯೂಸುಫ್‌ ಷರೀಫ್‌,  ರಾಜಕೀಯ ಅಂದ್ರೆ ಹೀಗೀರುತ್ತೆ ಅಂತಾ ಗೊತ್ತಿದ್ದರೆ ನಾನು ರಾಜಕೀಯಕ್ಕೇ ಬರುತ್ತಿರಲಿಲ್ಲ. ನಾನು ರಾಜಕೀಯಕ್ಕೆ ಬಂದು ತಪ್ಪು ಮಾಡಿಬಿಟ್ಟೆ ಎಂದು ಸಾವಿರ ಕೋಟಿ ಒಡೆಯ ಬಿಕ್ಕಿ ಬಿಕ್ಕಿ ಅತ್ತರು.

MLC Election:ಮಗಳ ಮೇಲೆ ಅತ್ಯಾಚಾರ ಮಾಡಿದವನಿಗೆ ಟಿಕೆಟ್, ಕೈ ಅಭ್ಯರ್ಥಿ ವಿರುದ್ಧ ಗಂಭೀರ ಆರೋಪ

ನನಗೆ ಇಬ್ಬರು ಪತ್ನಿಯರು. ನನ್ನ ಮನೆಯಲ್ಲಿ ಕೆಲಸಕ್ಕಿದ್ದ ಸಾಜೀಯಾ ಅವರನ್ನು ಇಷ್ಟಪಟ್ಟು ಎರಡನೇ ಮದುವೆ ಆದೆ. ಆರಂಭದಲ್ಲಿ ಈ ವಿಚಾರ ಮೊದಲ ಹೆಂಡತಿಗೆ ಗೊತ್ತಿರಲಿಲ್ಲ. ನನ್ನ ಸ್ನೇಹಿತ ನವೀದ್ ಎಂಬಾತ ನನ್ನ ಮೊದಲ ಹೆಂಡತಿಗೆ ಹೇಳಿ ಕೋರ್ಟ್​ನಲ್ಲಿ ಕೇಸ್ ಹಾಕಿಸಿದ್ದ. ನಂತರ ನಾವು ರಾಜಿ ಮಾಡಿಕೊಂಡು ಒಂದೇ ಮನೆಯಲ್ಲಿದ್ದೇವೆ. ಆದರೆ ನನ್ನ‌ ಸ್ನೇಹಿತ ಮಕ್ಕಳಿಗೆ ಬ್ರೈನ್ ವಾಷ್ ಮಾಡಿ ದೂರು ದಾಖಲಿಸಿದ್ದ ಎಂದು ಕೆಜಿಎಫ್​ ಬಾಬು ಕಣ್ಣೀರಿಟ್ಟರು.

ಕೆಜಿಎಫ್​ ಬಾಬು ಅವರ ಮೊದಲ ಪತ್ನಿ ರುಕ್ಸಾನಾ ಮಾತನಾಡಿ, ನಾವು ಒಟ್ಟಾಗಿ ಸುಖವಾಗಿದ್ದೇವೆ. ನಮ್ಮನ್ನು ಸುಮ್ಮನೆ ಬಿಟ್ಟ ಬಿಡಿ ಎಂದು ಕೈಮುಗಿದರು. ಇದಕ್ಕೆ ಧ್ವನಿಗೂಡಿಸಿದ ಎರಡನೇ ಪತ್ನಿ ಸಾಜೀಯಾ. ನನ್ನ‌ ಗಂಡ ಒಳ್ಳೆಯವರು. ನಾವೆಲ್ಲಾ ಒಗ್ಗಟ್ಟಾಗಿದ್ದೇವೆ. ಈ ತರಹ ರಾಜಕೀಯ ಇದೆ ಅಂತಾ ಗೊತ್ತಾಗಿದ್ದರೆ ನಾವಿಬ್ಬರೂ ನನ್ನ ಗಂಡನ ಕಾಲು ಹಿಡಿದುಕೊಂಡು ರಾಜಕೀಯಕ್ಕೆ ಹೋಗಲು ಬಿಡುತ್ತಿರಲಿಲ್ಲ. ನನ್ನ ಗಂಡನ ವಿರುದ್ಧ ಸಚಿವ ಸೋಮಶೇಖರ್ ಮಾಡಿರುವ ಆರೋಪದ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು ಎಂದರು.

FIR against Congress Candidate: ತಂದೆಯ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಮಗಳು!

ಮೊದಲ ಪತ್ನಿ ರುಕ್ಸಾನಾ ಮಾತನಾಡಿ, ನಾನು ನನ್ನ ಗಂಡನ ವಿರುದ್ಧ ಸುಳ್ಳು ಕೇಸ್ ಹಾಕಿದ್ದೆ. ರಾಜಿ ಮಾಡಿಕೊಂಡು ಬಾಳ್ತಾ ಇದ್ದೇನೆ. ಒಳ್ಳೆಯ ಮನಸ್ಸಿನ ವ್ಯಕ್ತಿ ನನ್ನ ಗಂಡ. ಈಗ ನಾವು ಚೆನ್ನಾಗಿ ಇದ್ದೇವೆ. ನಮ್ಮ ಮನೆಯನ್ನ ಯಾರೂ ಹಾಳು ಮಾಡಬೇಡಿ. ಸಚಿವರೇ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ವಾ? ನಿಮಗೆ ಅಕ್ಕ-ತಂಗಿಯರು ಇಲ್ವಾ..? ಎಂದು ಅಳುತ್ತಲೇ ಸೋಮಶೇಖರ್‌ಗೆ ಪ್ರಶ್ನಿಸಿದ್ದರು.

ಇನ್ನು ಇದೇ ವೇಳೆ ಕೆಜಿಎಫ್​ ಬಾಬು ಅವರ ಮಗಳು ಉಮ್ರಾ ಮಾತನಾಡಿ, ಹಳೆಯದ್ದನ್ನು ಪ್ರಸ್ತಾಪ ಮಾಡಬೇಡಿ. ಇಲ್ಲಿಗೆ ಬಿಟ್ಟು ಬಿಡಿ. ನಿಮಗೆ ಮನವಿ ಮಾಡ್ತೇವೆ. ಯಾರು ಇದನ್ನೆಲ್ಲಾ ದೊಡ್ಡದು ಮಾಡಬೇಡಿ. ನಮಗೆ ಬದುಕಲು ಅವಕಾಶ ಕೊಡಿ ಎಂದು ಕಣ್ಣೀರಿಟ್ಟರು.

ಸೋಮಶೇಖರ್ ಹೇಳಿದ್ದೇನು?
ಬಾಬು ಹೆಂಡತಿ, ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಬಾಬು ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನ ಠಾಣೆಯೊಂದರಲ್ಲಿ ಎಫ್‍ಐಆರ್ ದಾಖಲಾಗಿದೆ. ಇಂತಹವರಿಗೆ ಕಾಂಗ್ರೆಸ್‍ನವರು ಟಿಕೆಟ್ ಕೊಟ್ಟಿದ್ದಾರೆ. ಇಂತಹ ಪ್ರಕರಣಗಳನ್ನು ನೋಡಿ ಕೊಟ್ಟಿದ್ದಾರೋ ಏನೋ ಗೊತ್ತಿಲ್ಲ. ಅತ್ಯಾಚಾರ ಮಾಡಿದ್ದಾರೆ ಎಂಬುವುದಕ್ಕೆ ಎಫ್‍ಐಆರ್ ದಾಖಲಾಗಿರುವುದು ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ ಎಂದು ಸಚಿವ ಎಸ್‌ಟಿ ಸೋಮಶೇಖರ್ ಹೇಳಿದ್ದರು.

ಡಿಸೆಂಬರ್ 2 ಅಥವಾ 3 ಬೆಂಗಳೂರಿನ ಎಲ್ಲಾ ಶಾಸಕರು, ಸಚಿವರು ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ನಾನು ಹೇಳಿರುವುದು ಯಾವುದು ಸುಳ್ಳಲ್ಲ, ಎಲ್ಲಾ ನಿಜ. ಡೆವಲಪರ್ಸ್ ಯಾರು ಎಷ್ಟು ರೂಪಾಯಿ ಕೊಟ್ಟಿದ್ದಾರೆ ಎಂದು ನಮ್ಮ ಬಳಿ ಸಾಕ್ಷ್ಯಗಳಿದೆ. ಆತ 1,700 ಕೋಟಿಯನ್ನು ಡಿಕ್ಲೇರ್ ಮಾಡಿದ್ದಾನೆ. ಡಿಸಿಪಿಗೆ ಫೋನ್ ಮಾಡಿ ಅವನ ಹಿನ್ನೆಲೆಯನ್ನು ತೆಗೆದುಕೊಂಡಿದ್ದೇನೆ. 1,700 ಕೋಟಿ ಅಫಿಶಿಯಲ್ ಆಗಿ ತೋರಿಸಿದ್ದಾನೆ, ಅದರ ಎರಡರಷ್ಟು ಇದೆ ಎಂದು ಆರೋಪ ಮಾಡಿದ್ದರು.

click me!