
ನೆಲಮಂಗಲ (ಮಾ.05): ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ದೊಡ್ಡನದಿಗಳಿಲ್ಲದ್ದರಿಂದ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಕೆರೆ ತುಂಬಿಸಿ ಅಂತರ್ಜಲ ಹೆಚ್ಚಿಸುವ ಬೃಹತ್ ಜನಸೇವಾ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಜನಪರ ಕಾಳಜಿಯ ಕಳಕಳಿಯ ಸರ್ಕಾರ ನಮ್ಮದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರದ ಸಾಧನೆಯ ವಿವರಗಳನ್ನು ಒಂದೊಂದಾಗಿ ಜನತೆಗೆ ಒಪ್ಪಿಸಿ ಅವರಿಂದಲೇ ಕೈ ಎತ್ತಿಸುವ ಮೂಲಕ ಸಮ್ಮತಿ ಪಡೆದರು. ಇಲ್ಲಿಗೆ ಸಮೀಪದ ಬೂದಿಹಾಳ ಗ್ರಾಮದಲ್ಲಿ ಜಿಲ್ಲಾ ಆಡಳಿತ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ₹869 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಿ ಮಾತನಾಡಿದರು.
ಬಡವರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿ ಸರ್ಕಾರಕ್ಕೆ ಈ ರೀತಿ ಯೋಜನೆಗಳೇ ಹೊಳೆಯುವುದಿಲ್ಲ. ಹಣಕ್ಕಾಗಿ ಅಧಿಕಾರಕ್ಕಾಗಿ ಶಾಸಕರಾಗಬಾರದು, ಜನಸೇವೆ ಶಾಸಕರ ಮುಖ್ಯ ಗುರಿಯಾಗಬೇಕು. ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಮಾದರಿ ಶಾಸಕರಾಗಿದ್ದಾರೆ. ಎಂಟು ತಿಂಗಳಲ್ಲಿ ಕ್ಷೇತ್ರಕ್ಕಾಗಿ ನಮ್ಮನ್ನು ಕಾಡಿಬೇಡಿ ₹869 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಜನಪ್ರೀಯರಾಗಿದ್ದಾರೆ ಎಂದರು. ಕ್ಷೇತ್ರದ ಅಂತರ್ಜಲ ವೃದ್ಧಿಗಾಗಿ ನಗರದ ವೃಷಭಾವತಿ ವ್ಯಾಲಿ ಕಣಿವೆಯ ಸಂಸ್ಕರಿಸಿದ ತ್ಯಾಜ್ಯ ನೀರನ್ನು ₹1081 ಕೋಟಿ ವೆಚ್ಚದ ಮೊದಲ ಹಂತದಲ್ಲಿ 70 ಕೆರೆಗಳಿಗೆ ನೀರನ್ನು ತುಂಬಿಸುವ ಬೃಹತ್ ಯೋಜನೆಯನ್ನು ಕೈಗೊಂಡಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರ ಗೆದ್ದೇ ಗೆಲ್ತೇವೆ: ಕೋಟ ಶ್ರೀನಿವಾಸ ಪೂಜಾರಿ
ಎರಡು ಮತ್ತು ಮೂರನೇ ಹಂತದಲ್ಲಿ 189 ಕೆರೆಗಳನ್ನು ಜಿಲ್ಲೆಯಾದ್ಯಂತ ಒಟ್ಟು 259 ಕೆರೆಗಳಿಗೆ ನೀರನ್ನು ಹರಿಸಲು ಸಣ್ಣ ನೀರಾವರಿ ಇಲಾಖೆ ಯೋಜನೆಯನ್ನು ರೂಪಿಸಿದೆ. ಇದು ಜನಪರ ಕಾಳಜಿಯ ಸರ್ಕಾರವಲ್ಲವೆ? ಗ್ಯಾರಂಟಿ ಯೋಜನೆಗಳಿಂದ ಸರ್ಕಾರದಲ್ಲಿ ಹಣವೇ ಇಲ್ಲ ಎಂದು ವಿರೋಧ ಪಕ್ಷಗಳು ನಮ್ಮ ಅಭಿವೃದ್ಧಿ ಮತ್ತು ಜನಪ್ರಿಯತೆಯನ್ನು ಸಹಿಸದೆ ಟೀಕಿಸುತ್ತಿವೆ, ಮುಂದಿನ ಲೋಕಸಭೆಯಲ್ಲಿ ಮಹಾ ಜನತೆ ಇದಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಕೇಳಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಖಂಡಿಸಿ ನಮ್ಮ ಸರ್ಕಾರ 36,789 ಮನೆ ನೀಡಿ, ಬಡವರಿಗೆ ಭಾಗ್ಯ ನೀಡಿದೆ ಎಂದರು. ವಸತಿ ಯೋಜನೆಯ ಅನುಷ್ಠಾನ ಮತ್ತು ಸಾಧನೆಯ ಬಗ್ಗೆ ಸಚಿವ ಜಮೀರ್ ಅಹಮದ್ ಖಾನ್, ಹೊಸಕೋಟೆ ಶಾಸಕ ಬಚ್ಚೇಗೌಡ, ಆನೆಕಲ್ ಶಾಸಕ ಶಿವಣ್ಣ ಮಾತನಾಡಿದರು.
ಬಿಜೆಪಿ-ಜೆಡಿಎಸ್ನವರಿಗೆ ಅಧಿಕಾರ ಸಿಕ್ಕರೂ ಏನೂ ಮಾಡಲಿಲ್ಲ: ಡಿ.ಕೆ.ಶಿವಕುಮಾರ್
ಬಿಜೆಪಿಯವರದ್ದು ಧರ್ಮರಾಜಕಾರಣ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿಯವರು ಧರ್ಮದಲ್ಲಿ ರಾಜಕಾರಣ ಮಾಡುತ್ತಿದ್ದರೆ ನಾವು ರಾಜಕಾರಣದಲ್ಲಿ ಧರ್ಮ ಅನುಸರಿಸುತ್ತಿದ್ದೇವೆ ಎಂದರು. ಜನಪರವಾದ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಮಾತ್ರ ಅನುಷ್ಠಾನಗೊಳಿಸಿದೆ. ಕಳೆದ ನಾಲ್ಕಾರು ದಶಕಗಳ ಇತಿಹಾಸದಿಂದ ಇದು ತಿಳಿದು ಬರುತ್ತದೆ. ಭೂಮಿ ಹಕ್ಕು, ಆಶ್ರಯ ಯೋಜನೆ, ಅನೇಕ ಭಾಗ್ಯಗಳನ್ನು ನೀಡಿದ ಸಾಧನೆ ಕಾಂಗ್ರೆಸ್ ಸರ್ಕಾರದ್ದು. ನೆಲಮಂಗಲ ಕ್ಷೇತ್ರದ ಸುಸಜ್ಜಿತ ರಸ್ತೆ ನಿರ್ಮಾಣ, ನಿರಂತರ ವಿದ್ಯುತ್, ಆರೋಗ್ಯ ಭಾಗ್ಯಗಳನ್ನು ನೀಡಿ ನೆಲಮಂಗಲವನ್ನು ಅಭಿವೃದ್ಧಿಮಂಗಲ ಮಾಡುವ ಇಚ್ಛಾಶಕ್ತಿ ಹೊಂದಿರುವ ಶಾಸಕ ಎನ್.ಶ್ರೀನಿವಾಸ್ ಅವರ ಬೆಂಬಲಕ್ಕೆ ನಾವೆಲ್ಲರೂ ಇದ್ದೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.