
ಚಿತ್ರದುರ್ಗ(ಜು.04): ಬೂತ್ ಮಟ್ಟದ ಸಮಿತಿ ರಚನೆ ಸಂಬಂಧ ಹಮ್ಮಿಕೊಳ್ಳಲಾಗಿದ್ದ ಸಭೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ತೋಳೇರಿಸಿಕೊಂಡು ಮಾರಾಮಾರಿಗಿಳಿದ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಎಮ್ಮಿಗನೂರು ಗ್ರಾಮದಲ್ಲಿ ನಿನ್ನೆ(ಭಾನುವಾರ) ನಡೆದಿದೆ.
ಇಲ್ಲಿ ಬೂತ್ ಸಮಿತಿ ರಚನೆ ಸಂಬಂಧ ವೀಕ್ಷಕರಾಗಿ ಪಕ್ಷದ ಮುಖಂಡ ಸಾಸಲು ಸತೀಶ್ ಆಗಮಿಸಿದ್ದರು. ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸವಿತಾ ರಘು ಅವರ ಕಡೆಯ ಗುಂಪು ಇದ್ದಕ್ಕಿದ್ದಂತೆ ಮಾಜಿ ಸಚಿವ ಆಂಜನೇಯ ಅವರ ಬೆಂಬಲಿಗರೊಂದಿಗೆ ವಾಗ್ವಾದಕ್ಕಿಳಿಯಿತು. ಆಗ ಎರಡೂ ಗುಂಪುಗಳ ನಡುವೆ ತಳ್ಳಾಟ, ನೂಕಾಟ ನಡೆದು ಕೊರಳುಪಟ್ಟಿ ಹಿಡಿದು ಎಳೆದಾಡಿಕೊಂಡರು.
ಗುರಾಯಿಸ್ತಿದ್ದವನನ್ನ ಪ್ರಶ್ನೆ ಮಾಡಿದ್ದಕ್ಕೆ ಚಾಕುವಿನಿಂದ ತಿವಿದ: ಕೋಮು ದ್ವೇಷಕ್ಕಾಗಿ ಕೊಲೆ ಯತ್ನ ಎಂದ SDPI
ಘೋಷಣೆ ಕೂಗುವಾಗ ಪರಸ್ಪರ ಗಲಾಟೆ ಮಾಡಿಕೊಂಡ ಕಾರ್ಯಕರ್ತರು ನಂತರ ಘಟನೆಯನ್ನು ಬೂತ್ ಸಮಿತಿ ರಚನೆಯಲ್ಲಿ ನಮ್ಮ ಕಡೆಯವರು ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕೆಂಬ ಪಟ್ಟು ಇಡುವ ತನಕ ಒಯ್ದರು. ಸವಿತಾ ಕಡೆ ಗುಂಪು ಏರಿದ ದನಿಯಲ್ಲಿ ವೀಕ್ಷಕರ ಮುಂದೆ ಕಿರಿಚಾಡಿತು. ಈ ವೇಳೆ ಮಾತಿಗೆ ಮಾತು ಬೆಳೆದು ಎರಡೂ ಗುಂಪುಗಳು ಪರಸ್ಪರ ತಳ್ಳಾಟ, ನೂಕಾಟದಲ್ಲಿ ನಿರತರಾದರು.
ಒಂದಿಬ್ಬರು ಕಾರ್ಯಕರ್ತರ ಕೊರಳಪಟ್ಟಿ ಹಿಡಿದು ಎಳೆದಾಡಿದ ಪ್ರಸಂಗ ಕೂಡ ನಡೆದಿದೆ. ಈ ವೇಳೆ ಯಾರ ಮಾತನ್ನು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಎರಡೂ ಗುಂಪಿನ ಕಾರ್ಯಕರ್ತರು ಇರಲಿಲ್ಲ. ಅಂತಿಮವಾಗಿ ವೀಕ್ಷಕ ಸಾಸಲು ಸತೀಶ್ ಎಲ್ಲರ ಸಮಾಧಾನ ಪಡಿಸಿದ ನಂತರ ವಾತಾವರಣ ತಣ್ಣಗಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.