ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಬದಲಾವಣೆ: ಪೂಜಾರಿ

By Kannadaprabha NewsFirst Published Oct 19, 2022, 1:00 PM IST
Highlights
  1. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಬದಲಾವಣೆ
  2. ಸಚಿವ ಕೋಟಾ ಶ್ರೀನಿವಾಸ ಪೂಜಾರಿ
  3. ಭಟ್ಕಳದ ಕಡವಿನಕಟ್ಟೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆ
  4. ಜೋಡೋ ಯಾತ್ರೆ ಮಾಡುವವರು ಭಾರತ ತುಂಡು ಮಾಡಿದವರು ಯಾರೆಂದು ಹೇಳಲಿ

ಭಟ್ಕಳ (ಅ.19) : ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಸಾಕಷ್ಟುಅಭಿವೃದ್ಧಿಯ ಜತೆಗೆ ಬದಲಾವಣೆ ಆಗಿದೆ. ಬಿಜೆಪಿಯ ಜನಪರ ಯೋಜನೆಯ ಬಗ್ಗೆ ಕಾರ್ಯಕರ್ತರು ಜನತೆಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.\

PM - KISAN ಯೋಜನೆ: ರೈತರ ಬ್ಯಾಂಕ್‌ ಖಾತೆಗೆ 16 ಸಾವಿರ ಕೋಟಿ ರೂ. ವರ್ಗಾಯಿಸಿದ ಪ್ರಧಾನಿ Modi

ಕಡವಿನಕಟ್ಟೆದುರ್ಗಾ ಪರಮೇಶ್ವರಿ ಸಭಾಗೃಹದಲ್ಲಿ ಮಂಗಳವಾರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಮಂಡಳಿಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಇಲ್ಲಿಯ ತನಕ ಯಾವ ಸರ್ಕಾರವೂ ಪರಿಶಿಷ್ಟಜಾತಿ/ಪರಿಶಿಷ್ಟಪಂಗಡಗಳ ಮೀಸಲಾತಿಯನ್ನು ಹೆಚ್ಚಿಸುವ ಕಾರ್ಯ ಮಾಡಿಲ್ಲ. ಆದರೆ ಬಿಜೆಪಿ ಪ್ರಸ್ತುತ ಪರಿಸ್ಥಿತಿಯಲ್ಲಿ ಎಸ್‌ಸಿ/ಎಸ್‌ಟಿ ಜನಸಂಖ್ಯೆಯಲ್ಲಿ ಆಗಿರುವ ಹೆಚ್ಚುವರಿ ಜನಸಂಖ್ಯೆಯನ್ನಾಧರಿಸಿ ಪರಿಶಿಷ್ಟಪಂಗಡದವರಿಗೆ ಶೇ. 4, ಪರಿಶಿಷ್ಟಜಾತಿಯವರಿಗೆ ಶೇ. 3ರಷ್ಟುಮೀಸಲಾತಿ ಹೆಚ್ಚಿಸಿದೆ. ಎಸ್‌ಸಿ/ಎಸ್‌ಟಿಯವರಿಗೆ 75 ಯುನಿಟ್‌ ತನಕ ವಿದ್ಯುತ್‌ ಉಚಿತವಾಗಿ ನೀಡುವ ನಿರ್ಣಯ ತೆಗೆದುಕೊಂಡಿದೆ. ಬಿಜೆಪಿಯನ್ನು ವಿರೋಧಿಸುವವರು ಸೇರಿದಂತೆ ಅನೇಕ ಟೀಕಾಕಾರರೂ ಕೂಡಾ ಇದನ್ನು ಸ್ವಾಗತಿಸಿದ್ದಾರೆ. ಈ ಹಿಂದಿನ ಸರ್ಕಾರಗಳೆಲ್ಲವೂ ನಾಮಧಾರಿಗಳಿಗೆ ಏನೂ ಕೊಡುಗೆ ನೀಡಿಲ್ಲ. ಆದರೆ ನಮ್ಮ ಸರ್ಕಾರ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ವಸತಿ ಶಾಲೆಯನ್ನು ತೆರೆಯುವ ಮೂಲಕ ಆ ಸಮಾಜವನ್ನು ಕೂಡಾ ಗೌರವಿಸಿದ್ದೇವೆ ಎಂದರು.

ಕಾಂಗ್ರೆಸ್‌ನಿಂದ ಭಾರತ್‌ ಜೋಡೋ ಪಾದಯಾತ್ರೆ ಮಾಡಲಾಗುತ್ತಿದೆ. ಆದರೆ ಜೋಡೋ ಪಾದಯಾತ್ರೆ ಮಾಡುವವರು ಭಾರತವನ್ನು ತುಂಡು ಮಾಡಿದವರು ಯಾರು ಎಂದು ಹೇಳಲಿ ಎಂದ ಅವರು, ಭಾರತ್‌ ಜೋಡೋ ಮಾಡುತ್ತಿರುವುದು ಹಾಸ್ಯಾಸ್ಪದ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ ಆನಂತರ ಕಾಶ್ಮೀರದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜ ಹಾರಿಸಲಾಗುತ್ತಿದೆ. ನಮ್ಮ ಸರ್ಕಾರ ಮತಾಂತರ ನಿಷೇಧ ಕಾಯ್ದೆ, ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ದೇಶವಿರೋಧಿ ಸಂಘಟನೆಗಳನ್ನು ನಿಷೇಧಿಸುವ ದಿಟ್ಟಹೆಜ್ಜೆ ಇಟ್ಟಿದೆ ಎಂದ ಅವರು, ಬಿಜೆಪಿ ಸಾಧನೆಗಳ ಬಗ್ಗೆ ಕಾರ್ಯಕರ್ತರು ಮನೆಮನೆಗೆ ತಲುಪಿಸುವ ಕೆಲಸ ಮಾಡಬೇಕು. ನಮ್ಮ ಸರ್ಕಾರದ ಬಗ್ಗೆ ಯಾರೇ ಟೀಕೆ ಮಾಡಿದರೂ ಅದನ್ನು ಸಮರ್ಥವಾಗಿ ಎದುರಿಸಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹಳಿಯಾಳವನ್ನು ಗೆಲ್ಲುವ ಮೂಲಕ ಜಿಲ್ಲೆಯ ಆರೂ ಸ್ಥಾನಗಳನ್ನು ಗೆಲ್ಲುವುದು ನಮ್ಮ ಮುಂದಿನ ಗುರಿಯಾಗಿದೆ. ಆ ಬಗ್ಗೆ ಜಿಲ್ಲೆಯ ಕಾರ್ಯಕರ್ತರು ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಜಿ., ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಗಣೇಶ ರಾವ್‌, ಸಹ ಪ್ರಭಾರಿ ಎನ್‌. ಎಸ್‌. ಹೆಗಡೆ, ಶಾಸಕ ಸುನಿಲ್‌ ನಾಯ್ಕ, ಕುಮಟಾ ಶಾಸಕ ದಿನಕರ ಶೆಟ್ಟಿ, ಕಾರವಾರ ಶಾಸಕಿ ರೂಪಾಲಿ ನಾಯ್ಕ, ಮಾಜಿ ಸಚಿವ ಶಿವಾನಂದ ನಾಯ್ಕ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸುನೀಲ್‌ ಹೆಗಡೆ, ಮಾಜಿ ಜಿಲ್ಲಾಧ್ಯಕ್ಷ ಕೆ.ಜಿ. ನಾಯ್ಕ, ಜಿಲ್ಲಾ ಪ್ರಭಾರಿ ಭಾರತಿ ಜಂಭಗಿ, ಜಿಲ್ಲಾ ಸಹ ಪ್ರಭಾರಿ ಪ್ರಸನ್ನ ಕೆರೆಕೈ, ಶಿವಮೊಗ್ಗ ಜಿಲ್ಲಾ ಪ್ರಭಾರಿ ಆರ್‌.ಡಿ. ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ಕರ್ನಾಟಕದ ನಾಲ್ಕು ಕಡೆ ನಾರಾಯಣಗುರು ಹೆಸರಲ್ಲಿ ಶಾಲೆ: ಸಚಿವ ಕೋಟ

ಉಮೇಶ ಹಳೆಬಂಕಾಪುರ ಸ್ವಾಗತಿಸಿದರು. ಚಂದ್ರು ಎಸಳೆ, ಗುರುಪ್ರಸಾದ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಮಂಡಳ ಅಧ್ಯಕ್ಷ ಸುಬ್ರಾಯ ದೇವಡಿಗ, ಪ್ರಧಾನ ಕಾರ್ಯದರ್ಶಿ ಭಾಸ್ಕರ ದೈಮನೆ, ಮೋಹನ ನಾಯ್ಕ ಮುಂತಾದವರು ಸಹಕರಿಸಿದರು. ಸಭೆಯಲ್ಲಿ ಜಿಲ್ಲೆಯ ವಿವಿಧ ಭಾಗದ 180ಕ್ಕೂ ಅಧಿಕ ಬಿಜೆಪಿ ಮುಖಂಡರಿದ್ದರು.

click me!