Council Election Ramanagar : ಆತಂಕದಲ್ಲಿಯೇ ಅಭ್ಯರ್ಥಿಗಳು : ಬೆಂಬಲಿಗರೊಂದಿಗೆ ಗೆಲುವಿನ ಲೆಕ್ಕಾಚಾರ

Kannadaprabha News   | Asianet News
Published : Dec 12, 2021, 03:23 PM IST
Council Election Ramanagar : ಆತಂಕದಲ್ಲಿಯೇ ಅಭ್ಯರ್ಥಿಗಳು : ಬೆಂಬಲಿಗರೊಂದಿಗೆ ಗೆಲುವಿನ ಲೆಕ್ಕಾಚಾರ

ಸಾರಾಂಶ

ಆತಂಕದಲ್ಲಿಯೇ ಅಭ್ಯರ್ಥಿಗಳು : ಬೆಂಬಲಿಗರೊಂದಿಗೆ ಗೆಲುವಿನ ಲೆಕ್ಕಾಚಾರ ಗೆಲುವಿಗಾಗಿ ದೇವರ ಮೊರೆ ಹೋದ ಬೆಂಬಲಿಗರು ಗೆಲ್ಲುವ ಅಭ್ಯ​ರ್ಥಿ​ಗಳ ಮೇಲೆ ಬೆಟ್ಟಿಂಗ್‌ ಜೋರು

ವರದಿ :  ಎಂ. ಅಫ್ರೋಜ್ ಖಾನ್‌

 ರಾಮನಗರ (ಡಿ.12):  ಬೆಂಗ​ಳೂರು (Bengaluru) ಗ್ರಾಮಾಂತರ ಸ್ಥಳೀಯ ಸಂಸ್ಥೆ ಕ್ಷೇತ್ರ​ದಿಂದ ನಡೆದ ವಿಧಾನ ಪರಿ​ಷತ್‌ ಚುನಾ​ವಣೆ (MLC Election) ನಂತರ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಫಲಿತಾಂಶ ಏನಾಗುತ್ತದೊ ಎಂಬ ಆತಂಕದಲ್ಲಿಯೇ ವಿಶ್ರಾಂತಿಗೆ ಶರಣಾಗಿದ್ದರೆ, ಕೆಲವರು ವಿಶ್ರಾಂತಿಯನ್ನು ಬಯಸದೆ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.  ಚುನಾವಣೆಯಲ್ಲಿ ಕಳೆದ ಒಂದು ತಿಂಗ​ಳಿಂದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌. ರವಿ, ಜೆಡಿ​ಎಸ್‌ ಅಭ್ಯರ್ಥಿ ರಮೇಶ್‌ ಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ಸಿ.​ನಾ​ರಾ​ಯ​ಣ​ಸ್ವಾಮಿ ಅವರು ಪಕ್ಷದ ನಾಯ​ಕರ ಜತೆ​ಗೂಡಿ ಗೆಲು​ವಿ​ಗಾಗಿ ಮತ​ಬೇಟೆ ನಡೆ​ಸಿ​ದ್ದರು. ಈಗ ಮತದಾನ ಮುಗಿಯುತ್ತಿದ್ದಂತೆ ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ನಿರಾಳರಾಗಿದ್ದಾರೆ. ಅಭ್ಯ​ರ್ಥಿ​ಗಳು ಮನೆ ಮಂದಿ ಜತೆ ಸೇರಿ ಮನಸ್ಸು ಹಗುರ ಮಾಡಿ​ಕೊ​ಳ್ಳು​ತ್ತಿ​ದ್ದಾರೆ. ಅದರ ಜತೆಗೆ ಸೋಲು ಗೆಲು​ವಿನ ಲೆಕ್ಕಾ​ಚಾರ ಹಾಕು​ತ್ತಿ​ದ್ದಾ​ರೆ.

ಈ ಹಿಂದಿನ ಚುನಾವಣೆಗಳಿಗೆ ಹೋಲಿಕೆ ಮಾಡಿದರೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಈಗಿನಷ್ಟು ಪ್ರಯಾಸ ಪಟ್ಟಿರಲಿಲ್ಲ. ಕಾಂಗ್ರೆಸ್‌ (Congress), ಬಿಜೆಪಿ ಹಾಗೂ ಜೆಡಿಎಸ್‌ (JDS) ಪಕ್ಷಗಳ ನಾಯಕರು ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಗೆಲವಿಗಾಗಿ ಅಬ್ಬರದ ಪ್ರಚಾರ ನಡೆಸಿದ್ದರು.

ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಪೈಕಿ ಮೂವ​ರು ಬೆಂಗಳೂರು (bengaluru) ವಾಸಿಗರು. ಪಕ್ಷದ ಟಿಕೆಟ್‌ ಪಡೆಯುವುದರಿಂದ ಹಿಡಿದು ಚುನಾವಣಾ ಪ್ರಚಾರದಲ್ಲಿ ಮತಯಾಚನೆ ಮುಗಿಸಿ, ಮತದಾನ ಪೂರ್ಣಗೊಳ್ಳುವವರೆಗೂ ಕ್ಷೇತ್ರದಲ್ಲಿಯೇ ಠಿಕಾಣಿ ಹೂಡಿದ್ದರು.

ಮತದಾನದ ದಿನದವರೆಗೂ ಒಬ್ಬರನ್ನೊಬ್ಬರು ದೂಷಿಸುತ್ತಾ ಮತದಾರರನ್ನು ಸೆಳೆಯುವುದಕ್ಕೆ ಮೇಲಾಟ ನಡೆಸುತ್ತಿದ್ದ ಅಭ್ಯರ್ಥಿಗಳು ನಿದ್ದೆ ಇಲ್ಲದೆ ರಾತ್ರಿಗಳನ್ನು ಕಳೆಯಬೇಕಾಯಿತು. ಇದೀಗ ಅಭ್ಯರ್ಥಿಗಳು ಶುಕ್ರ​ವಾರ ಮತದಾನ ಮುಗಿದ ತರುವಾಯ ರಾತ್ರೋರಾತ್ರಿ ಕ್ಷೇತ್ರ ತೊರೆದು ತಮ್ಮ ತಮ್ಮ ಗೂಡು ಸೇರಿಕೊಂಡಿದ್ದಾರೆ.

ಸೋಲು ಗೆಲುವಿನ ಲೆಕ್ಕಾಚಾರ: 

ಕೆಲ ಅಭ್ಯರ್ಥಿಗಳು ಬೆಂಬಲಿಗರು ಮತ್ತು ಕಾರ್ಯಕರ್ತರೊಂದಿಗೆ ಸೇರಿ ಕ್ಷೇತ್ರದಲ್ಲಿ ಸ್ಥಾಪನೆಯಾಗಿದ್ದ ಬೂತ್‌ಗಳಲ್ಲಿ ನಡೆದಿರುವ ಶೇಕಡವಾರು ಮತದಾನ ಪ್ರಮಾಣ ಹಾಗೂ ಯಾವ ಮತದಾರರು ಮತದಾನ (Voting) ಮಾಡಿದ್ದಾರೆ ಎಂಬ ಪಟ್ಟಿ ಹಿಡಿದು ಗೆಲವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಮತದಾನದ ಮುನ್ನಾ ದಿನವಾದ ಗು​ರುವಾರ ರಾತ್ರಿ ಕ್ಷೇತ್ರಗಳಲ್ಲಿ ಸ್ಥಳೀಯ ಕಾರ್ಯಕರ್ತರು, ಮತದಾರನ ಕೈಗೆ ಬಾಗಿಲಿಗೆ ಉಡುಗೊರೆ ಜತೆಗೆ ಗರಿ ಗರಿ ನೋಟುಗಳು ತಲುಪಿದರು. ಕೆಲವೆಡೆ ಮತದಾರನ ಕೈಗೆ ಹಣ ಮತ್ತು ಬಳುವಳಿಗಳ ಜತೆಗೆ ದೇವರ ಫೋಟೋ, ಅರಿಶಿನ ಕುಂಕುಮದ ಪ್ಯಾಕೆಟ್‌, ಎಲೆ ಅಡಿಕೆ ಇರಿಸಿ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ.

ಅಭ್ಯರ್ಥಿ ಬೆಂಬ​ಲಿ​ಗ​ರಿಂದ ದೇವರ ಮೊರೆ :  ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೂ ಮುನ್ನಾ ಗೆಲವಿಗೆ ಪ್ರಾರ್ಥಿಸಿ ದೇವರ ಮೊರೆ ಹೋಗಿದ್ದರು. ಇದೀಗ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ ಹಾಗೂ ಅವರ ಬೆಂಬ​ಲಿ​ಗರು ಮತದಾನ ಮುಗಿಯುತ್ತಿದ್ದಂತೆ ದೇಗುಲಕ್ಕೆ ಭೇಟಿ ನೀಡಿ ಆಶೀರ್ವಾದ ಬೇಡುತ್ತಿದ್ದಾರೆ. ಕೆಲವರು ರಾಜಕೀಯ ಭವಿಷ್ಯ ಕೇಳಲು ಜ್ಯೋತಿಷಿಗಳ ಮೊರೆ ಹೋಗಿದ್ದಾರೆ ಎನ್ನ​ಲಾ​ಗಿ​ದೆ.

ಬೆಟ್ಟಿಂಗ್‌ ಜೋರು

ವಿಧಾನ ಪರಿ​ಷತ್‌ ಚುನಾ​ವ​ಣೆಯ (MLC Election) ಸೋಲು ಗೆಲುವಿನ ಚರ್ಚೆ​ಗಳು, ಊಹಾ​ಪೋ​ಹದ ಮಾತು​ಗಳ ಜತೆಗೆ ಬೆಟ್ಟಿಂಗ್‌ ಕೂಡ ಜೋರಾಗಿಯೇ ನಡೆ​ದಿದೆ.

ಚುನಾ​ವ​ಣೆ​ಯಲ್ಲಿ ಇಂತಹ ಅಭ್ಯ​ರ್ಥಿಯೇ ಗೆಲ್ಲು​ತ್ತಾರೆ. ಈ ಅಭ್ಯ​ರ್ಥಿಯು ಇಷ್ಟೇ ಮತ​ಗಳ ಅಂತ​ರ​ದಲ್ಲಿ ಪರಾ​ಭ​ವ​ಗೊ​ಳ್ಳು​ತ್ತಾರೆ ಎಂಬ ಇತ್ಯಾದಿ ವಿಚಾ​ರ​ಗಳ ಲೆಕ್ಕಾ​ಚಾ​ರದ ಮೇಲೆ ಬೆಟ್ಟಿಂಗ್‌ ನಡೆ​ಯು​ತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಎಸ್‌ .ರವಿ ಮತ್ತು ಜೆಡಿ​ಎಸ್‌ ಅಭ್ಯರ್ಥಿ ರಮೇಶ್‌ ಗೌಡ ಅವರು ಬೆಟ್ಟಿಂಗ್‌ ಆಡು​ವ​ವರ ಪಾಲಿಗೆ ರೇಸ್‌ ಕುದು​ರೆ​ಯಾ​ಗಿ​ದ್ದಾರೆ.

ಫಲಿತಾಂಶ ಬಂದಾಗ ಯಾರು ಗೆಲ್ಲುತ್ತಾರೋ ಗೊತ್ತಿಲ್ಲ. ಆದರೆ, ಈಗ ಬೆಟ್ಟಿಂಗ್‌ ಆಡುವವರ ಪಾಲಿಗಂತೂ ಇವರ ಗೆಲ್ಲುವ ಫೇವರೆಟ್‌ ಅಭ್ಯರ್ಥಿಗಳಾಗಿದ್ದಾರೆ. ಹೀಗಾಗಿ, ಮತಗಟ್ಟೆಯಲ್ಲಿ ಫಲಿತಾಂಶ ಭದ್ರವಾಗಿದ್ದರೂ ಬೆಟ್ಟಿಂಗ್‌ ಆಡುವವರು ಮಾತ್ರ ದೇವರ ಮೇಲೆ ಭಾರ ಹಾಕಿ ಹಣ ಕಟ್ಟುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ