Karnataka Politics : 15 ಕಡೆ ನಾವ್ ಗೆಲ್ತೇವೆಂದ ಸಿದ್ದರಾಮಯ್ಯರಿಂದ ಮುಂದಿನ ಸ್ಪರ್ಧಾ ಕಣದ ಬಗ್ಗೆಯೂ ಪ್ರಸ್ತಾಪ

By Kannadaprabha NewsFirst Published Dec 12, 2021, 2:43 PM IST
Highlights
  • ವಿಧಾನ ಪರಿಷತ್ ಚುನಾವಣೆ ಮುಕ್ತಾಯವಾಗಿದ್ದು, ಇನ್ನೇನು ಫಲಿತಾಂಶ ಬರಲು ಎರಡು ದಿನವಷ್ಟೇ ಬಾಕಿ 
  • ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನ ಗೆಲ್ಲುತ್ತದೆ  ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ

ಕೋಲಾರ (ಡಿ.12) : ವಿಧಾನ ಪರಿಷತ್ ಚುನಾವಣೆ (MLC Election) ಮುಕ್ತಾಯವಾಗಿದ್ದು, ಇನ್ನೇನು ಫಲಿತಾಂಶ ಬರಲು ಎರಡು ದಿನವಷ್ಟೇ ಬಾಕಿ ಉಳಿದಿದೆ.  ಚುನಾವಣೆಯಲ್ಲಿ (Election) ಕಾಂಗ್ರೆಸ್ (Congress) 15 ಸ್ಥಾನ ಗೆಲ್ಲುತ್ತದೆ  ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.  ಕೋಲಾರದಲ್ಲಿಂದು (Kolar) ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಇಲ್ಲಿಂದ ಕೈ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ ಅನಿಲ್ ಕುಮಾರ್ ಗೆಲುವು ನಿಶ್ಚಿತ ಎಂದು ಭವಿಷ್ಯ ಹೇಳಿದರು. .

ಜೆಡಿಎಸ್ (JDS) ನವರು 6 ಕಡೆ ಅಭ್ಯರ್ಥಿ ಹಾಕಿದ್ದರು, ಇನ್ನು 19 ಕಡೆ ಏಕೆ ಹಾಕಿಲ್ಲ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಉಳಿದ ಕಡೆ ಜೆಡಿಎಸ್ ನವರು ಬಿಜೆಪಿಗೆ (BJP) ವೋಟು ಹಾಕಿಸಿರುತ್ತಾರೆ.  ಜೆಡಿಎಸ್ ನವರು ಬಿಜೆಪಿಗೆ ಯಾವಾಗಲೂ ಬಿ ಟೀಂ.  ನಾವು ಯಾವತ್ತೂ ಜೆಡಿಎಸ್ ನವರ ಮನೆಯ ಬಾಗಿಲಿಗೆ ಹೋಗಿ ನಮ್ಮ ಜೊತೆ ಅಧಿಕಾರ ಮಾಡಿ ಎಂದು ಕೇಳಿಲ್ಲ.  ಆಗ ಮಾತುಕತೆ ಆಗಿದ್ದು ನಿಜ, ಆದರೆ ನಾನಂತೂ ಅವರ ಮನಗೆ ಹೋಗಿಲ್ಲ. ನಾನು ಬಿ ಟೀಂ ಅಂದರೆ ಜೆಡಿಎಸ್ ನವರು ಏಕೆ ರಿಯಾಕ್ಟ್ ಮಾಡಬೇಕು ಎಂದು ಪ್ರಶ್ನೆ ಮಾಡಿದರು.

ಕುಂಬಳಕಾಯಿ ಕಳ್ಳ ಅಂದ್ರೆ ಏಕೆ ಹೆಗಲು ಮುಟ್ಟಿಕೊಂಡು ನೋಡಿಕೊಳ್ಳಲು ಜೆಡಿಎಸ್ ನಾಯಕರು ಮುಂದಾಗಬೇಕು ಎಂದು ಪ್ರಶ್ನೆ ಮಾಡಿದರು. ಗೋ ಹತ್ಯೆ ನಿಷೇಧ ಕಾಯ್ದೆಯನ್ನ ಜೆಡಿಎಸ್ ನವರು ಏಕೆ ವಿರೋಧ ಮಾಡಿಲ್ಲ. ಕೊರೋನಾ (Corona) ಸಮಯದಲ್ಲಿ ಅಸಂಬ್ಲಿನಲ್ಲಿ ಬಿಜೆಪಿಗೆ (BJP) ಸಪೋರ್ಟ್ ಮಾಡಿದ್ದರು. ಹೀಗಾಗಿಯೇ ಅವರು ಬಿ ಟಿಂ ಎಂದು ಹೇಳಿದ್ದೇನೆ ಎಂದರು. 

ನಾಳೆಯಿಂದ ಅಧಿವೇಶನ ಆರಂಭ : ಇನ್ನು ನಾಳೆಯಿಂದ ವಿಧಾನಸಭಾ ಅಧಿವೇಶನ (Karnataka Assembly Election) ಆರಂಭವಾಗುತ್ತಿದೆ. ಈ ವೇಳೆ ಬೆಳೆಹಾನಿ, ಕೊರೊನಾ ಪರಿಹಾರ, ಬಿಟ್ ಕಾಯಿನ್, ಪರ್ಸೆಂಟೇಜ್ ಬಗ್ಗೆ, ಮತಾಂತರ ಕಾಯ್ದೆ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಮತಾಂತರವನ್ನು ಬಲವಂತವಾಗಿ ಮಾಡಬಾರದು ಎಂದು ಕಾಯ್ದೆ ಇದೆ. ಆದರೆ ಒಂದು ಧರ್ಮವನ್ನು ಗುರಿಯಾಗಿಟ್ಟು ಕೊಂಡು ರಾಜಕೀಯ (Politics) ಮಾಡುವುದು ಸರಿಯಲ್ಲ  ಎಂದು ಸಿದ್ದರಾಮಯ್ಯ ಈ ವೇಳೆ ಹೇಳಿದರು. 

ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರ :  ನಾನು ಮಠಾಧೀಶರ ಬಗ್ಗೆ ಮಾತನಾಡುವುದಿಲ್ಲ.  ಆಹಾರ ಪದ್ಧತಿ ಅವರವರಿಗೆ ಬಿಟ್ಟ ವಿಚಾರ. ಮೊಟ್ಟೆ ಯಾರು ತಿನ್ನುತ್ತಾರೋ ಅವರಿಗೆ ಕೊಡಿ. ಇಲ್ಲವೆಂದರೆ ಕೊಡಬೇಕು ಎಂದರು.  

ಮುಂದಿನ ಚುನಾವಣಾ ಸ್ಪರ್ಧೆ :  ಮುಂದಿನ ಚುನಾವಣೆಯಲ್ಲಿ (Election) ಕೋಲಾರದಲ್ಲಿ (Kolar) ಸ್ಪರ್ಧಿಸುವ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಸಿಎಂ ನನ್ನನು ಬೇರೆ ಬೇರೆ ಕಡೆಗಳಲ್ಲಿಯೂ ಆಹ್ವಾನಿಸುತ್ತಿದ್ದಾರೆ.  ಮುಂದೆ ಹೈಕಮಾಂಡ್ ತೀರ್ಮಾನದಂತೆ ನಿಲ್ಲುತ್ತೇನೆ. ಮುಂದೆ ರಾಜಕೀಯ ಸ್ಥಿತಿಗತಿಗಳನ್ನು ನೋಡೋಣ ಎಂದು ಹೇಳಿದರು.  

ಜಾಲಪ್ಪ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ :    ಮಾಜಿ ಕೇಂದ್ರ ಸಚಿವ ಆರ್.ಎಲ್ ಜಾಲಪ್ಪ (RL Jalappa) ಆರೋಗ್ಯ ಸ್ಥಿತಿ ಗಂಭೀರವಾಗಿದ್ದು  ಸಿದ್ದರಾಮಯ್ಯ ಆಸ್ಪತ್ರೆಗೆ ತೆರಳಿ ಅವರ ವಿಚಾರಿಸಿದರು.  ಕಳೆದ 35 ದಿನಗಳಿಂದ ಜಾಲಪ್ಪ ಅವರ ಆರೋಗ್ಯ ಕಠಿಣ ಪರಿಸ್ಥಿತಿಯಲ್ಲಿದ್ದು ವೆಂಟಿಲೇಟರ್ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ  ಕಿಡ್ನಿ ಫೇಲ್ ಆಗಿದ್ದು, ಡಯಾಲಿಸಿಸ್ ನಲ್ಲಿ ಇರಿಸಲಾಗಿದೆ.

ಇನ್ನು ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಜಾಲಪ್ಪ  ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ.  ಅವರ ಜೀನ್ಸ್ ಗಟ್ಟಿಯಾಗಿದೆ ಹಾಗಾಗಿ ಗಟ್ಟಿಯಾಗಿದ್ದಾರೆ.  ನಾನು ಬಂದಿದ್ದೇನೆ ಎಂದು ಕೂಗಿ ಹೇಳಿದಾಗ ಕಣ್ಣು ಬಿಟ್ಟು ನೋಡಿದರು. ನಾವು ಜನತಾ ಪರಿವಾರದಿಂದಲೂ ಒಟ್ಟಿಗಿದ್ದವು.   ಸದಾ ಸಾಮಾಜಿಕ ನ್ಯಾಯ ಹಾಗೂ ಹಿಂದುಳಿದವರ ಪರವಾಗಿದ್ದವರು ಜಾಲಪ್ಪ.  ಕೋಲಾರ ದಿಂದಲೇ ಪ್ರಾರಂಭ ಆಗಿದ್ದ ಅಹಿಂದ ಹೋರಾಟಕ್ಕೆ ಜಾಲಪ್ಪನವರೇ ಅಧ್ಯಕ್ಷತೆ ವಹಿಸಿದ್ದರು ಎಂದು ನೆನೆದರು.

click me!