ನಾನು ಬಿಎಸ್‌ವೈ ವಿರುದ್ಧ ಮಾತನಾಡಲ್ಲ ಎಂದ ಯತ್ನಾಳ್‌: ನಸು ನಕ್ಕು ಕೈ ಮುಗಿದ ಯಡಿಯೂರಪ್ಪ..!

By Kannadaprabha NewsFirst Published Jan 28, 2023, 2:34 PM IST
Highlights

ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಭಾಗಿಯಾಗಲು ದೆಹಲಿಗೆ ಬಂದಿದ್ದೇನೆ. ಈಶಾನ್ಯ ಭಾಗದ ಮೂರು ರಾಜ್ಯಗಳ ಟಿಕೆಟ್‌ ಬಗ್ಗೆ ಚರ್ಚೆ ನಡೆಯಲಿದೆ: ಯಡಿಯೂರಪ್ಪ

ನವದೆಹಲಿ(ಜ.28):  ಶಾಸಕ ಯತ್ನಾಳ ಅವರು ತಮ್ಮ ಬಗ್ಗೆ ಮಾತನಾಡಲ್ಲ ಎಂದಿದ್ದು ಸಂತಸ ತಂದಿದೆ ಎಂದು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ನವದೆಹಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ, ಯತ್ನಾಳ್‌ ಹೇಳಿಕೆ ಕುರಿತ ಪ್ರಶ್ನೆಗೆ ನಸು ನಕ್ಕು ಪತ್ರಕರ್ತರತ್ತ ಕೈ ಮುಗಿದು ಮುಂದೆ ನಡೆದರು.

ನಂತರ ಮಾತನಾಡಿದ ಅವರು, ಇನ್ನು ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಭಾಗಿಯಾಗಲು ದೆಹಲಿಗೆ ಬಂದಿದ್ದೇನೆ. ಈಶಾನ್ಯ ಭಾಗದ ಮೂರು ರಾಜ್ಯಗಳ ಟಿಕೆಟ್‌ ಬಗ್ಗೆ ಚರ್ಚೆ ನಡೆಯಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಲ್ಲದೇ ಶನಿವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕರ್ನಾಟಕಕ್ಕೆ ಆಗಮಿಸುತ್ತಿದ್ದು, ಆ ಸಭೆಯಲ್ಲಿ ಭಾಗವಹಿಸಬೇಕಿದೆ. ಹಾಗಾಗಿ ಬೆಂಗಳೂರಿಗೆ ವಾಪಸ್‌ ತೆರಳುವುದಾಗಿ ಇದೇ ವೇಳೆ ಹೇಳಿದರು.

ಚುನಾವಣೆ ಸಮಯದಲ್ಲಿ ಭಿನ್ನಮತಕ್ಕೆ ಬ್ರೇಕ್‌: ಫೈರ್‌ ಬ್ರಾಂಡ್‌ 'ಯತ್ನಾಳ್' ತಣ್ಣಗಾಗಿದ್ದು ಹೇಗೆ ?

ನೋಟಿಸ್‌ ಬಂದಿಲ್ಲ. ಆದರೆ ನಾನಿನ್ನು ಮಾತಾಡಲ್ಲ: ಯತ್ನಾಳ್‌

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ಪದೇ ಪದೇ ಬಹಿರಂಗವಾಗಿಯೇ ಹೇಳಿಕೆ ನೀಡಿ ಪಕ್ಷದ ವರಿಷ್ಠರ ಅಸಮಾಧಾನಕ್ಕೆ ಕಾರಣವಾಗಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬಾಯಿಗೆ ಬೀಗ ಬಿದ್ದಿದೆ. ಯಡಿಯೂರಪ್ಪ ವಿರುದ್ಧ ಯಾವುದೇ ಹೇಳಿಕೆ ನೀಡದಂತೆ ಯತ್ನಾಳ್‌ ಅವರಿಗೆ ವರಿಷ್ಠರಿಂದ ಸ್ಪಷ್ಟ ಸಂದೇಶ ರವಾನೆಯಾಗಿದೆ. ಈ ವಿಚಾರವನ್ನು ಸ್ವತಃ ಖಚಿತಪಡಿಸಿರುವ ಯತ್ನಾಳ್‌, ನನಗೆ ಕೇಂದ್ರದಿಂದ ಯಾವುದೇ ನೋಟಿಸ್‌ ಕೊಟ್ಟಿಲ್ಲ. ಆದರೆ ನಾನು ಯಡಿಯೂರಪ್ಪ ವಿರುದ್ಧ ಮಾತನಾಡಲ್ಲ ಎಂದು ಸ್ಪಷ್ಟಪಡಿಸಿದ್ದರು.

ಈ ಸಂಬಂಧ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಬಗ್ಗೆ ನನಗೆ ಯಾವುದೇ ಪ್ರಶ್ನೆಗಳನ್ನು ಕೇಳಬೇಡಿ. ಯಡಿಯೂರಪ್ಪನವರು ಹಿರಿಯರು, ಅವರಿಗೆ ಬೈಯುವುದಾಗಲಿ, ಮಾತನಾಡುವುದಾಗಲಿ ಮಾಡಬೇಡಿ ಎಂದು ಪಕ್ಷದ ವರಿಷ್ಠರು ಹೇಳಿದ್ದಾರೆ. ಅದಕ್ಕೆ ನಾನು ಒಪ್ಪಿದ್ದೇನೆ ಎಂದರು.

ಹೈಕಮಾಂಡ್‌ ಹೇಳಿದ ಮೇಲೆ ಯಡಿಯೂರಪ್ಪನವರ ಬಗ್ಗೆ ಸಾಫ್ಟ್‌ ಆಗಬೇಕು. ಎಲ್ಲದಕ್ಕೂ ಗುರ್‌. ಎನ್ನುವುದಕ್ಕೆ ಬರಲ್ಲ. ಇನ್ನು ಮುಂದೆ ಯಡಿಯೂರಪ್ಪನವರ ಜೊತೆಗೆ ರಾಜಕೀಯ ಸಂಘರ್ಷಕ್ಕೆ ವಿರಾಮ ಹೇಳುತ್ತೇನೆ. ಕಾಂಪ್ರಮೈಸ್‌ ಏನೂ ಇಲ್ಲ, ರಾಜಕೀಯ ಸಂಘರ್ಷಕ್ಕೆ ಪೂರ್ಣ ವಿರಾಮ ಹಾಕಿದ್ದೇನೆ ಅಷ್ಟೆ ಎಂದರು.

ಬಿಎಸ್‌ವೈ ವಿರುದ್ಧ ಒಂದಕ್ಷರ ಮಾತಾಡಿದರೂ ಸಹಿಸಲ್ಲ: ಯತ್ನಾಳ್‌ಗೆ ಅಮಿತ್ ಶಾ ವಾರ್ನಿಂಗ್

ಇದೇ ವೇಳೆ ಪಕ್ಷದ ಮುಖಂಡರ ವಿರುದ್ಧ ಬಹಿರಂಗ ಹೇಳಿಕೆ ನೀಡಿದ ವಿಚಾರವಾಗಿ ಕೇಂದ್ರದಿಂದ ನೋಟಿಸ್‌ ನೀಡಲಾಗಿದೆ ಎಂಬ ಸುದ್ದಿಯನ್ನು ಯತ್ನಾಳ್‌ ತಳ್ಳಿಹಾಕಿದ್ದಾರೆ. ನನಗೆ ಯಾವುದೇ ನೋಟಿಸ್‌ ಬಂದಿಲ್ಲ. ನನ್ನ ಬಗ್ಗೆ ಊಹಾಪೋಹಗಳು ಯಾಕೆ ಏಳುತ್ತವೆ ಎಂಬುದೇ ಗೊತ್ತಾಗುತ್ತಿಲ್ಲ ಎಂದರು.

ಗುರ್‌ ಎನ್ನಲಾಗದು

ಹೈಕಮಾಂಡ್‌ ಹೇಳಿದ ಮೇಲೆ ಬಿಎಸ್‌ವೈ ಬಗ್ಗೆ ಸಾಫ್ಟ್‌ ಆಗಬೇಕು. ಎಲ್ಲದಕ್ಕೂ ಗುರ್‌ ಎನ್ನುವುದಕ್ಕೆ ಬರಲ್ಲ. ಇನ್ನು ಮುಂದೆ ಅವರ ಜೊತೆ ರಾಜಕೀಯ ಸಂಘರ್ಷಕ್ಕೆ ವಿರಾಮ ಹೇಳುತ್ತೇನೆ. ಕಾಂಪ್ರಮೈಸ್‌ ಏನೂ ಇಲ್ಲ ಅಂತ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಿಳಿಸಿದ್ದರು. 

click me!