
ರಾಮನಗರ (ಫೆ.02): ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಕ್ಷೇತ್ರ ಗೆಲ್ಲದಿದ್ದರೆ ಐದು ಗ್ಯಾರಂಟಿ ರದ್ದುಗೊಳಿಸಲಾಗುವುದು ಎಂದು ಮಾಗಡಿ ಶಾಸಕರು ಹೇಳಿರುವ ಬಗ್ಗೆ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಇದು ಬ್ಲ್ಯಾಕ್ ಮೇಲ್ ರಾಜಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹೇಳಿಕೆಯನ್ನು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು. ಇದು ಬ್ಲಾಕ್ ಮೇಲ್ ರಾಜಕಾರಣ ಎಂಬುದರಲ್ಲಿ ಸಂಶಯವಿಲ್ಲ ಎಂದರು.
ಚುನಾವಣೆ ವೇಳೆ 3 ಸಾವಿರ, 5 ಸಾವಿರ ಬೆಲೆಯ ಉಡುಗೊರೆ ಕೊಡುತ್ತೇವೆ ಎಂದು ಹೇಳಿ ಗಿಫ್ಟ್ ಕೂಪನ್ ಗಳನ್ನು ಹಂಚಿ ಗೆದ್ದರು. ಅಮಾಯಕ ಹೆಣ್ಣುಮಕ್ಕಳನ್ನು ನಂಬಿಸಿ ಮೋಸ ಮಾಡಿದರು. ಈಗ ಗ್ಯಾರಂಟಿ ಯೋಜನೆಗಳೂ ಅದೇ ರೀತಿಯಾಗಿವೆ ಎಂದು ಆರೋಪಿಸಿದರು. ಈ ಗ್ಯಾರಂಟಿಗಳು ಲೋಕಸಭೆ ಚುನಾವಣೆಯವರೆಗೆ ಮಾತ್ರ ಇರುತ್ತವೆ. ಪಕ್ಷದ ಮಟ್ಟದಲ್ಲಾಗಿರುವ ಚರ್ಚೆಯ ವಿಚಾರವನ್ನು ಈ ವ್ಯಕ್ತಿಯು ಜನರ ಎದುರು ಹೇಳಿದ್ದಾರೆ. ಪಾರ್ಲಿಮೆಂಟ್ ವರೆಗೂ ಗ್ಯಾರಂಟಿ ಕೊಡೋಣ, ಬಳಿಕ ನಿಲ್ಲಿಸೋಣ ಎಂಬ ಚರ್ಚೆ ನಡೆದಿದ್ದು, ಪಕ್ಷದ ರಹಸ್ಯ ರಿವೀಲ್ ಆಗಿದೆ ಎಂದು ಹೇಳಿದರು.
ಕೇಂದ್ರ ಮಂಡಿಸಿರುವುದು ಬಜೆಟ್ ಹೊರತು ಚುನಾವಣೆ ಬಜೆಟ್ ಅಲ್ಲ: ಮಾಜಿ ಸಚಿವ ಎಸ್.ಎ.ರಾಮದಾಸ್
ಸಮರ್ಪಕವಾಗಿ ಗ್ಯಾರಂಟಿ ಕೊಡಲು ಅವಕಾಶವಿದೆ. ಸರಿಯಾದ ಮಾರ್ಗದಲ್ಲಿ ಹೋಗಿದಿದ್ದರೆ ಈ ಐದು ಗ್ಯಾರಂಟಿಗಳನ್ನು ನೀಡಿ, ರಾಜ್ಯದ ಅಭಿವೃದ್ಧಿಯನ್ನು ಮಾಡಬಹುದಿತ್ತು. ಆದರೆ, ಇವರ ತಪ್ಪುಗಳಿಂದ ಹೀಗಾಗಿದೆ ಎಂದು ಹೇಳಿದರು. ಬಿಜೆಪಿಯವರು ಅಕ್ಷತೆಗೆ ಜನರು ಮತ ಹಾಕುವುದಾದರೆ ಅದನ್ನು ಕಾಂಗ್ರೆಸ್ ನವರೂ ಮಾಡಲಿ. ಬೇಡ ಎಂದವರು ಯಾರು? ಅವರ ಅಕ್ಷತೆಗೆ ಜನ ವೋಟ್ ಹಾಕಿದರೆ ನಿಮ್ಮ ಅಕ್ಷತೆಗೆ ಜನ ವೋಟ್ ಹಾಕಲ್ವಾ? ನೀವೂ ಒಂದು ಪ್ರಯೋಗ ಮಾಡಿ ಎಂದು ಕುಮಾರಸ್ವಾಮಿ ಟೀಕಿಸಿದರು.
ಇಡೀ ಬೆಟ್ಟವನ್ನೇ ಅಭಿವೃದ್ಧಿ ಮಾಡಲಿ: ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರ ಹೇಳಿಕೆಗೆ ಸ್ವಾಗತ. 20 ಎಕರೆಯಲ್ಲಿ ಅಲ್ಲ 100 ಎಕರೆಯಲ್ಲಿ ರಾಮಮಂದಿರ ಕಟ್ಟಿ, ನಿಮಗೆ ನನ್ನ ಬೆಂಬಲ ಇದೆ. ಇಡೀ ಬೆಟ್ಟವನ್ನೆಲ್ಲಾ ಅಭಿವೃದ್ಧಿ ಮಾಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಿ ಎಂದರು. ಲೋಕಸಭೆ ಚುನಾವಣೆವರೆಗೂ ಈ ವಿಚಾರವನ್ನು ಮುಂದಿಟ್ಟಿರುತ್ತಾರಷ್ಟೇ, ಇವರು ಹಾರೋಬೆಲೆಯಲ್ಲಿ ಕಟ್ಟಿರುವುದೇನು?
ದೇವೇಗೌಡರನ್ನು ಪ್ರಧಾನಿಯಾಗಿ ಮಾಡಿದ್ದೇ ಕಾಂಗ್ರೆಸ್: ಮಾಜಿ ಸಚಿವ ಶಿವರಾಂ
ಯೇಸುಕ್ರಿಸ್ತನ ಪ್ರತಿಮೆಯನ್ನು ಅಲ್ಲಿ ಯಾಕೆ ಕಟ್ಟಿದ್ದಾರೆ? ಅಲ್ಲಿನ ಚರ್ಚೊಳಗೆ ಬಹಳ ವರ್ಷಗಳಿಂದ ಏನಿಟ್ಟಿದ್ದರು? ಇದೆಲ್ಲಾ ಗೊತ್ತಿಲ್ಲದೇ ಇರುವುದಾ? ಚರ್ಚ್ ಕಟ್ಟಿದ್ದು ಯೇಸು ಮೇಲಿನ ಭಕ್ತಿಗಲ್ಲ. ಇದನ್ನೆಲ್ಲಾ ನಾನು ಕಾಣದೇ ಇರುವುದಾ? ಎಂದು ವ್ಯಂಗ್ಯವಾಡಿದರು. ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಅವರಿಗೆ ಭಯ ತಂದಿದೆ. ಇವರು ಏನೇ ತಿಪ್ಪರಲಾಗ ಹಾಕಿದರೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಎನ್ ಡಿಎ ಮೈತ್ರಿ ಅಭ್ಯರ್ಥಿ ಗೆಲುವು ಖಚಿತ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.