ಅಮಿತ್ ಶಾ ಆಗಮನಕ್ಕೂ ಮುನ್ನವೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ..!

By Suvarna NewsFirst Published Jan 17, 2021, 12:16 PM IST
Highlights

ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ನಾಯಕರ ಅಸಮಾಧಾನ| ಈ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರಿಗೆ ದೂರು ನೀಡಿದ್ದೇವೆ| ಅವಕಾಶ ಸಿಕ್ಕರೆ ಅಮಿತ್ ಶಾ ಸೇರಿ ಇತರೆ ವರಿಷ್ಠರಿಗೆ ದೂರು ನೀಡುತ್ತೇವೆ| 

ಬೆಳಗಾವಿ(ಜ.17):  ಇಂದು ಉತ್ಸವದ ದಿನ ಇದೆ. ಅಸಮಾಧಾನಿತ ಶಾಸಕರ ಬಗ್ಗೆ ಹಾಗೂ ಬ್ಲ್ಯಾಕ್‌ಮೇಲ್ ರಾಜಕಾರಣ ಬಗ್ಗೆ ಈಗ ಏಕೆ ಮಾತನಾಡೋದು. ಬಹಳ ದಿನಗಳ ಬಳಿಕ ದೊಡ್ಡಮಟ್ಟದ ಸಮಾವೇಶ ನಡೆಯುತ್ತಿದೆ. ಕೇಂದ್ರ ಗೃಹಸಚಿವರಾದ ಬಳಿಕ ಮೊದಲ ಬಾರಿ ಅಮಿತ್ ಶಾ ಈ ಭಾಗಕ್ಕೆ ಬರುತ್ತಿದ್ದಾರೆ. ನಾವೆಲ್ಲಾ ಅಮಿತ್ ಶಾಗೆ ಅಭಿನಂದನೆ ಮಾಡುತ್ತಿದ್ದೇವೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. 

"

ಇಂದು(ಭಾನುವಾರ) ನಗರದ ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೊಡ್ಡ ಮಟ್ಟದ ಸಮಾವೇಶಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಸಮಾವೇಶದಲ್ಲಿ ಬೆಳಗಾವಿ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ಆಗಲ್ಲ. ಉಪಚುನಾವಣೆಯಲ್ಲಿ ನಾವು ಗೆಲ್ಲಲಿದ್ದೇವೆ ಎಂದು ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇಂದು ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ಶಾ ಅವರ ಸ್ವಾಗತಕ್ಕೆ ತೆರಳಲು ಇಬ್ಬರು ಮಹಿಳಾ ನಾಯಕರ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸಾಂಬ್ರಾ ಏರ್‌ಪೋರ್ಟ್‌ವೊಳಗೆ ಅಮಿತ್ ಶಾ ಸ್ವಾಗತಕ್ಕೆ ತೆರಳುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿಯರಾದ ಡಾ.ಸೋನಾಲಿ ಸೋರ್ನಾಬತ್, ದೀಪಾ ಕುಡಚಿ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ. 

ಅಮಿತ್ ಶಾ ಅವರನ್ನ ಸ್ವಾಗತಿಸಲು ಡಾ.ಸೋನಾಲಿ ಸೋರ್ನಾಬತ್ ಸಾಂಬ್ರಾ ಏರ್‌ಪೋರ್ಟ್ ಒಳಗೆ ತೆರಳಿದ್ದರು. ಇದಕ್ಕೆ ಮತ್ತೋರ್ವ ಮಹಿಳಾ ನಾಯಕಿ ದೀಪಾ ಕುಡಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಸ್ ಇಲ್ಲದೇ ಒಳಗೆ ಹೇಗೆ ಬಿಟ್ರಿ, ಸ್ವಾಗತ ಸಮಿತಿ ಲಿಸ್ಟ್‌ನಲ್ಲಿ ಅವರ ಹೆಸರಿಲ್ಲ ಎಂದು ತಗಾದೆ ತಗೆದಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರ ಬಳಿ ದೀಪಾ ಕುಡಚಿ ತಮ್ಮ ಅಸಮಾಧಾನವನ್ನ ಹೊರಹಾಕಿದ್ದಾರೆ.  

ಇಂದು ಬೆಳಗಾವಿಗೆ ಕೇಂದ್ರ ಸಚಿವರ ಆಗಮನ: ಅಮಿತ್‌ ಶಾ ವಿರುದ್ಧ ಬೃಹತ್‌ ಪ್ರತಿಭಟನೆ

ಅಸಮಾಧಾನ ಸ್ಫೋಟ

ಅಮಿತ್ ಶಾ ಬೆಳಗಾವಿಗೆ ಆಗಮನಕ್ಕೂ ಮುನ್ನವೇ ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟವಾಗಿದೆ. ಹೌದು, ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏರ್‌ಪೋರ್ಟ್ ಹೊರಗೆ ನಿಂತಿರುವ ಮಾಜಿ ಸಚಿವ ಶಶಿಕಾಂತ್ ನಾಯಕ್, ದೀಪಾ ಕುಡಚಿ ಸೇರಿ ಅನೇಕರು, ಪಕ್ಷದಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದ್ದಾರೆ. 

ಬೆಳಗಾವಿ ಲೋಕಸಭಾ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿರುವ ದೀಪಾ ಕುಡಚಿ ಬಹಿರಂಗವಾಗಿ ತಮ್ಮ ಅಸಮಾಧಾನವನ್ನ ಹೊರಹಾಕಿದ್ದಾರೆ. ನಾವು 20 ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗೆ ಪಕ್ಷಕ್ಕೆ ಬಂದ ಡಾ.ಸೋನಾಲಿ ಸೋರ್ನಾಬತ್‌ರನ್ನು ಏರ್‌ಪೋರ್ಟ್ ಒಳಗೆ ಬಿಟ್ಟಿದ್ದಾರೆ. ರಾತ್ರೋರಾತ್ರಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ಲಿಸ್ಟ್ ಚೇಂಜ್ ಮಾಡಿದ್ದಾರೆ. ಮಾಜಿ ಸಚಿವ ಶಶಿಕಾಂತ್ ನಾಯಕ್‌ರಂತಹ ಹಿರಿಯ ನಾಯಕರು ಹೊರಗೆ ನಿಂತಿದ್ದಾರೆ. ಈ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರಿಗೆ ದೂರು ನೀಡಿದ್ದೇವೆ. ಅವಕಾಶ ಸಿಕ್ಕರೆ ಅಮಿತ್ ಶಾ ಸೇರಿ ಇತರೆ ವರಿಷ್ಠರಿಗೆ ದೂರು ನೀಡುತ್ತೇವೆ ಎಂದು ಹೇಳಿದ್ದಾರೆ. 
 

click me!