
ಹಾಸನ (ಜ.12): ಸಂಸದ ಪ್ರಜ್ವಲ್ ರೇವಣ್ಣ ಅವರ ಕೆಲವು ವಿಡಿಯೋಗಳು ನನ್ನ ಹತ್ತಿರವಿದ್ದು, ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯ ವಕ್ತಾರ ದೇವರಾಜೇಗೌಡ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ದಿನದ ಹಿಂದೆ ಭಾನು ಮಂಜುನಾಥ್ ಎಂಬ ಮಹಿಳೆ ನನ್ನ ವಿರುದ್ಧ ಮಾತನಾಡಿರುವುದು ಸುಳ್ಳು, ಅದಕ್ಕೆ ರೇವಣ್ಣ ಅವರ ಪ್ರಚೋದನೆ ಕಾರಣ. ಮಹಿಳೆಯೊಬ್ಬರನ್ನು ತಮ್ಮ ವಿರುದ್ಧ ಎತ್ತಿಕಟ್ಟಿ ನಿರಾಧಾರ ವಿಷಯದ ಬಗ್ಗೆ ಸುದ್ದಿಗೋಷ್ಠಿ ಮಾಡಿಸುವುದು, ಸುಖಾ ಸುಮ್ಮನೆ ತೇಜೋವಧೆ ಮಾಡುವುದನ್ನು ಮಾಜಿ ಸಚಿವ ರೇವಣ್ಣ ನಿಲ್ಲಿಸಬೇಕು. ಇಲ್ಲದಿದ್ದರೆ ಅವರ ಕುಟುಂಬ ಸದಸ್ಯರ ಭ್ರಷ್ಟಾಚಾರ, ಕರ್ಮಕಾಂಡವನ್ನು ಒಂದೊಂದಾಗಿ ಬಿಚ್ಚಿಡಬೇಕಾಗುತ್ತದೆ ಎಂದು ಘರ್ಜಿಸಿದರು.
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ನೇತೃತ್ವದಲ್ಲಿ ಹಳೇಕೋಟೆಯಲ್ಲಿ ನಡೆದ ವಿಕಸಿತ ಯಾತ್ರೆ ವೇಳೆ ನನ್ನನ್ನು ಡರ್ಟಿ ಫೆಲೋ ಎಂದು ನಿಂದಿಸಿದರು. ನಾನು ಹಾಗಲ್ಲ, ಅದನ್ನು ಅವರ ಕುಟುಂಬಕ್ಕೆ ಹೇಳಿಕೊಳ್ಳಲಿ ಎಂದು ತಿರುಗೇಟು ನೀಡಿದರು. ನಾನು ಹಿರಿಯರಾದ ದೇವೇಗೌಡರು, ಕುಮಾರಸ್ವಾಮಿ ಅವರಿಗೆ ಗೌರವ ಕೊಡುತ್ತೇನೆ. ರೇವಣ್ಣ ಯಾವುದೇ ವಿಷಯದಲ್ಲೂ ನನ್ನ ತಂಟೆಗೆ ಬರಬಾರದು. ಯಾರು ಲಜ್ಜೆಗೆಟ್ಟವರು ಎಂಬುದು ಜನರಿಗೆ ಗೊತ್ತಿದೆ. ನಿಮ್ಮ ಕರ್ಮಕಾಂಡವೂ ಬಟಾ ಬಯಲಾಗಿದೆ. ಹಾಗಾಗಿ ಬಾಯಿ ಮುಚ್ಚಿಕೊಂಡು ಸುಮ್ಮನಿರಿ ಎಂದು ಎಚ್ಚರಿಸಿದರು.
ಪ್ರಜ್ವಲ್ ರೇವಣ್ಣ ಚಾಲಕನ ಬಗ್ಗೆ ಸಮಗ್ರ ತನಿಖೆ: ಸಂಸದ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್ ವಿಚಾರವಾಗಿ ಸಮಗ್ರ ತನಿಖೆ ಆಗಬೇಕು. ಹಾಗೆಯೇ ಜೆಡಿಎಸ್ ಮುಖಂಡರಾದ ರೇವಣ್ಣ ಅವರು ತಮ್ಮ ಪುತ್ರನ ಮೇಲಿನ ಆರೋಪವನ್ನು ಮರೆ ಮಾಚಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶ್ರೇಯಸ್ ಪಟೇಲ್ ತಿಳಿಸಿದರು. ಸಂಸದ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್ ವಿಚಾರವಾಗಿ ಸಮಗ್ರ ತನಿಖೆ ಆಗಬೇಕು. ಹಾಗೆಯೇ ಜೆಡಿಎಸ್ ಮುಖಂಡರಾದ ರೇವಣ್ಣ ಅವರು ತಮ್ಮ ಪುತ್ರನ ಮೇಲಿನ ಆರೋಪವನ್ನು ಮರೆ ಮಾಚಲು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶ್ರೇಯಸ್ ಪಟೇಲ್ ಹಾಸನದಲ್ಲಿ ಶುಕ್ರವಾರ ಹೇಳಿದರು.
ಅಕ್ರಮ ಆಸ್ತಿ ಇದ್ದರೆ ಸರ್ಕಾರ ವಶಕ್ಕೆ ಪಡೆಯಲಿ: ಎಚ್.ಡಿ.ರೇವಣ್ಣ
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ‘ಕಳೆದ ಒಂದು ತಿಂಗಳಿನಿಂದ ಕಾರ್ತಿಕ್ ವಿಚಾರ ಎಲ್ಲಾ ಮಧ್ಯಮಗಳಲ್ಲಿ ಹರಿದಾಡುತ್ತಿದ್ದು, ಕಾಂಗ್ರೆಸ್ ಪಕ್ಷದವರೆ ಮಾಡಿಸಿರುವುದು ಎಂದು ಸಂಸದ ಪ್ರಜ್ವಲ್ ರೇವಣ್ಣ ಅವರು ಆರೋಪಿಸಿರುವುದನ್ನು ಟಿವಿಯಲ್ಲಿ ವೀಕ್ಷಣೆ ಮಾಡಿದ್ದೇನೆ. ಈ ಮಾತುಗಳು ಸತ್ಯಕ್ಕೆ ದೂರವಾಗಿದೆ. ವಾಹನ ಚಾಲಕ ಕಾರ್ತಿಕ್ ವಿಚಾರವಾಗಿ ಕೆಲ ದಿನಗಳ ಹಿಂದೆ ಪ್ರತಿಭಟನೆ ಕೂಡ ಮಾಡಲಾಗಿರುವುದನ್ನು ಹಾಗೂ ಮಾಡಿರುವ ತಪ್ಪನ್ನು ಮರೆಮಾಚಲು ಕಾಂಗ್ರೆಸ್ ಗೆ ದೂರುತ್ತಿರುವುದನ್ನು ನಾನು ಖಂಡಿಸುತ್ತೇನೆ. ನ್ಯಾಯಾಂಗದಲ್ಲಿ ತನಿಖೆ ನಡೆಯುತ್ತಿದ್ದು, ತನಿಖೆ ನಡೆಯಲಿ ಎಂದು ನಾನು ಕೂಡ ಆಗ್ರಹಿಸುತ್ತೇನೆ. ಸರ್ಕಾರದ ಮಟ್ಟದಲ್ಲೂ ಕೂಡ ನ್ಯಾಯಬದ್ಧವಾಗಿ ಸತ್ಯಾಸತ್ಯತೆ ಕುರಿತು ತನಿಖೆ ಮಾಡಲು ನಾವು ಕೂಡ ಮನವಿ ಮಾಡಿದ್ದೇವೆ’ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.