BJP Janaspandana: ಕತ್ತಿ ನಿಧನ ಹಿನ್ನೆಲೆ: ಬಿಜೆಪಿ ಜನಸ್ಪಂದನ ಶನಿವಾರಕ್ಕೆ..!

By Kannadaprabha NewsFirst Published Sep 8, 2022, 5:00 AM IST
Highlights

ಕತ್ತಿ ನಿಧನದ ಕಾರಣ ಬುಧವಾರದಿಂದ 3 ದಿನ ಶೋಕಾಚರಣೆ ಸಾರಲಾಗಿರುವ ಕಾರಣ ಅದು ಮುಗಿದ ಮರುದಿನವಾದ ಶನಿವಾರವೇ ಸಮಾವೇಶ ನಡೆಸಲು ನಿರ್ಧಾರ.

ಬೆಂಗಳೂರು(ಸೆ.08):  ಆಹಾರ ಹಾಗೂ ಅರಣ್ಯ ಸಚಿವ ಉಮೇಶ್‌ ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಗುರುವಾರ ನಿಗದಿಯಾಗಿದ್ದ ಆಡಳಿತಾರೂಢ ಬಿಜೆಪಿಯ ಸಮಾವೇಶವನ್ನು ಶನಿವಾರಕ್ಕೆ ಮುಂದೂಡಲಾಗಿದ್ದು, ‘ಜನೋತ್ಸವ ಕಾರ್ಯಕ್ರಮ’ ಬದಲು ಜನಸ್ಪಂದನ ಕಾರ್ಯಕ್ರಮ ಎಂದು ಮರುನಾಮಕರಣ ಮಾಡಲಾಗಿದೆ.

ಕತ್ತಿ ನಿಧನದ ಕಾರಣ ಬುಧವಾರದಿಂದ 3 ದಿನ ಶೋಕಾಚರಣೆ ಸಾರಲಾಗಿರುವ ಕಾರಣ ಅದು ಮುಗಿದ ಮರುದಿನವಾದ ಶನಿವಾರವೇ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ಜತೆಗೆ ಜನೋತ್ಸವ ಕಾರ್ಯಕ್ರಮ ಎಂಬ ಹೆಸರನ್ನು ಇಟ್ಟಬಳಿಕ ಎರಡು ಬಾರಿ ಸಮಾವೇಶದ ದಿನಾಂಕ ಮುಂದೂಡಿಕೆಯಾಗಿದ್ದರಿಂದ ‘ದೋಷವಿರಬಹುದು’ ಎಂಬ ಕಾರಣಕ್ಕಾಗಿ ಅದರ ಹೆಸರನ್ನೇ ಬದಲಿಸಲು ಬುಧವಾರ ರಾತ್ರಿ ತೀರ್ಮಾನಿಸಲಾಯಿತು. ಈ ಹಿಂದೊಮ್ಮೆ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಕಾರಣ ಜನೋತ್ಸವವನ್ನು ಮುಂದೂಡಲಾಗಿತ್ತು.

 

ಮಾನ್ಯ ಸಚಿವರಾದ ಶ್ರೀ ಉಮೇಶ್ ಕತ್ತಿಯವರ ಅಕಾಲಿಕ ನಿಧನದಿಂದ ರಾಜ್ಯದಲ್ಲಿ ‌3 ದಿನ ಶೋಕಾಚರಣೆಯನ್ನು ರಾಜ್ಯ ಸರಕಾರ ಘೋಷಿಸಿದೆ.

ಇದರಿಂದಾಗಿ ಸೆಪ್ಟೆಂಬರ್ 8 ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿದ್ದ ಜನಸ್ಪಂದನಾ ಸಮಾವೇಶವನ್ನು ಸೆಪ್ಟೆಂಬರ್ 10 ಶನಿವಾರಕ್ಕೆ ಮುಂದೂಡಲಾಗಿದೆ. ಕಾರ್ಯಕರ್ತ ಬಂಧುಗಳು ಸಹಕರಿಸಬೇಕಾಗಿ ವಿನಂತಿ.

— Nalinkumar Kateel (@nalinkateel)

BJP Janotsav: ದೊಡ್ಡಬಳ್ಳಾಪುರ ಜನೋತ್ಸವ: 2-3 ಲಕ್ಷ ಜನ ಸೇರಿಸಿ ಭರ್ಜರಿ ಯಶಸ್ಸಿಗೆ ಸಿದ್ಧತೆ

ಮೊದಲು ಭಾನುವಾರಕ್ಕೆ ಮುಂದೂಡಿಕೆ ಆಗಿತ್ತು:

ಬುಧವಾರ ಬೆಳಗ್ಗೆ ಮೊದಲಿಗೆ ಗುರುವಾರದಿಂದ ಭಾನುವಾರಕ್ಕೆ (ಸೆ.11) ಮುಂದೂಡಲಾಗಿತ್ತು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾನಾ ಅಧಿಕೃತ ಮಾಹಿತಿಯನ್ನೂ ನೀಡಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ್ದ ಬೊಮ್ಮಾಯಿ, ‘ಕತ್ತಿ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನಗಳವರೆಗೆ ಶೋಕಾಚರಣೆ ಘೋಷಿಸಲಾಗಿದೆ. ಈ ವೇಳೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸುವುದು, ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸದಂತೆ ಆದೇಶ ಹೊರಡಿಸಲಾಗಿದೆ. ಆದರೆ ತುರ್ತು ಪ್ರವಾಹ ನಿರ್ವಹಣೆ ಕಾರ್ಯ ಚಟುವಟಿಕೆಗಳು ಚಾಲ್ತಿಯಲ್ಲಿರುತ್ತವೆ. ಹೀಗಾಗಿ, ಸೆ.8ರಂದು ನಡೆಯಬೇಕಿದ್ದ ಸರ್ಕಾರದ ಜನೋತ್ಸವ ಕಾರ್ಯಕ್ರಮವನ್ನು ಸೆ.11ಕ್ಕೆ ಮುಂದೂಡಲಾಗಿದೆ’ ಎಂದು ತಿಳಿಸಿದ್ದರು. ಇನ್ನು ನಿರ್ಮಲ್‌ ಕುಮಾರ್‌ ಸುರಾನಾ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಇದೇ ಮಾತು ಹೇಳಿದ್ದರು.

ಭ್ರಷ್ಟ ಬಿಜೆಪಿ ಸರ್ಕಾ​ರಕ್ಕೆ ಜನೋತ್ಸವ ಆಚರಿಸುವ ನೈತಿಕತೆ ಇಲ್ಲ: ಸಿದ್ದು

ಈ ಮೊದಲು ಸರ್ಕಾರ ಕತ್ತಿ ಅವರ ನಿಧನದ ಪ್ರಯುಕ್ತ ಬುಧವಾರ ಬೆಳಗ್ಗೆ ಕೇವಲ ಒಂದು ದಿನದ ಶೋಕಾಚರಣೆ ಘೋಷಿಸಿತ್ತು. ಅದರಂತೆ ನಿಗದಿಯಾಗಿರುವ ಗುರುವಾರವೇ ಜನೋತ್ಸವ ಕಾರ್ಯಕ್ರಮವನ್ನು ನಡೆಸುವ ಉದ್ದೇಶ ಹೊಂದಲಾಗಿತ್ತು. ಆದರೆ, ಹಾಲಿ ಸಚಿವರು ನಿಧನರಾದಾಗ 3 ದಿನಗಳ ಶೋಕಾಚರಣೆ ಘೋಷಿಸಬೇಕೆಂದು ಶೋಕಾಚರಣೆಯನ್ನು 3 ದಿನಕ್ಕೆ ವಿಸ್ತರಿಸಲಾಯಿತು. ಆಗ ಅನಿವಾರ್ಯವಾಗಿ ಜನೋತ್ಸವ ಮುಂದೂಡಬೇಕಾಯಿತು.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಅವರು ತಮ್ಮ  ಟ್ವಿಟ್ಟರ್‌ ಖಾತೆಯಲ್ಲಿ ಸ್ಪಷ್ಟಪಡಿಸಿದ್ದು, ಮಾನ್ಯ ಸಚಿವರಾದ ಶ್ರೀ ಉಮೇಶ್ ಕತ್ತಿಯವರ ಅಕಾಲಿಕ ನಿಧನದಿಂದ ರಾಜ್ಯದಲ್ಲಿ ‌3 ದಿನ ಶೋಕಾಚರಣೆಯನ್ನು ರಾಜ್ಯ ಸರಕಾರ ಘೋಷಿಸಿದೆ. ಇದರಿಂದಾಗಿ ಸೆಪ್ಟೆಂಬರ್ 8 ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿದ್ದ ಜನಸ್ಪಂದನಾ ಸಮಾವೇಶವನ್ನು ಸೆಪ್ಟೆಂಬರ್ 10 ಶನಿವಾರಕ್ಕೆ ಮುಂದೂಡಲಾಗಿದೆ. ಕಾರ್ಯಕರ್ತ ಬಂಧುಗಳು ಸಹಕರಿಸಬೇಕಾಗಿ ವಿನಂತಿ ಅಂತ ಬರೆದುಕೊಂಡಿದ್ದಾರೆ. 

click me!