MLC Election: ಬಿಜೆಪಿ ಬ್ಯುಸಿನೆಸ್‌ ಜನತಾ ಪಾರ್ಟಿಯಾಗಿದೆ: ಮಧು ಬಂಗಾರಪ್ಪ

Kannadaprabha News   | Asianet News
Published : Dec 05, 2021, 01:56 PM IST
MLC Election: ಬಿಜೆಪಿ ಬ್ಯುಸಿನೆಸ್‌ ಜನತಾ ಪಾರ್ಟಿಯಾಗಿದೆ: ಮಧು ಬಂಗಾರಪ್ಪ

ಸಾರಾಂಶ

*  ಪ್ರಚಾರಕ್ಕೋಸ್ಕರ ಕೆಲಸ ಮಾಡುತ್ತಿರುವ ಪ್ರಧಾನಿ ಮೋದಿ *  ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಮಾತ್ರ ಅಭಿವೃದ್ಧಿ ಕಾರ್ಯ *  ಜನವಿರೋಧಿ ನೀತಿ ಹೊಂದಿದ ಬಿಜೆಪಿ 

ಭಟ್ಕಳ(ಡಿ.05):  ಪ್ರಧಾನಿ ನರೇಂದ್ರ ಮೋದಿಯವರು(Narendra Modi) ಪ್ರಚಾರಕ್ಕೋಸ್ಕರ ಕೆಲಸ ಮಾಡುತ್ತಿದ್ದಾರೆ. ಸ್ವಚ್ಛತಾ ಅಭಿಯಾನ ಸೇರಿದಂತೆ ಎಲ್ಲವನ್ನೂ ಜನರಿಂದಲೇ ಮಾಡಿಸಿ ಎಲ್ಲವೂ ತಮ್ಮಿಂದಲೇ ಆಯಿತು ಎಂದು ಪ್ರಚಾರ ಪಡೆಯುತ್ತಿದ್ದಾರೆ. ದೇಶವನ್ನು ಸದೃಢವಾಗಿ ಕಟ್ಟಲು ಕಾಂಗ್ರೆಸ್‌(Congress) ಶ್ರಮಿಸಿದ್ದರೆ, ಬಿಜೆಪಿ ಎಲ್ಲವನ್ನೂ ಖಾಸಗೀಕರಣ ಮಾಡಿ ಮಾರಲು ಹೊರಟಿದೆ. ಬಿಜೆಪಿ ಬ್ಯುಸಿನೆಸ್‌ ಜನತಾ ಪಾರ್ಟಿಯಾಗಿದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ(Madhu Bangarappa) ಟೀಕಿಸಿದರು.

ಇಲ್ಲಿನ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಕಾಂಗ್ರೆಸ್‌ ವಿಧಾನ ಪರಿಷತ್‌ ಅಭ್ಯರ್ಥಿ ಭೀಮಣ್ಣ ನಾಯ್ಕ(Bheemanna Naik) ಪರ ಮತಯಾಚಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯ(Siddaramaiah) ಸರಕಾರದಲ್ಲಿ ಪಂಚಾಯತ್‌ಗಳಿಗೆ ಹೆಚ್ಚಿನ ಅನುದಾನದ ಜೊತೆಗೆ ಸಾಕಷ್ಟು ಮನೆಗಳನ್ನೂ ಮಂಜೂರು ಮಾಡಿದ್ದರು. ಆದರೆ ಈಗಿನ ಬಿಜೆಪಿ(BJP) ಸರಕಾರದಿಂದ ಪಂಚಾಯತ್‌ಗೆ ಅನುದಾನವೂ ಇಲ್ಲ, ಒಂದು ಮನೆಯೂ ಇಲ್ಲ ಎಂಬಂತಾಗಿದೆ. ಕಾಂಗ್ರೆಸ್‌ ಅವಧಿಯಲ್ಲಿ ಮಂಜೂರಾದ ಮನೆಗಳ ಬಿಲ್‌ ಕೂಡ ಸಮರ್ಪಕವಾಗಿ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

Council Election Karnataka : ಯಡಿಯೂರಪ್ಪ ಹಾಗೂ ನನ್ನ ನಡುವೆ ವೈಯಕ್ತಿಕ ಮೈತ್ರಿ ಆಗಿದೆ

ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕ ವಿಧಾನ ಪರಿಷತ್ತಿನಲ್ಲಿ ಗ್ರಾಪಂ ಸದಸ್ಯರ ಗಟ್ಟಿಧ್ವನಿಯಾಗಲಿದ್ದಾರೆ. ಜಿಲ್ಲೆಯ ಜನತೆ ಅವರನ್ನು ಈ ಬಾರಿ ವಿಧಾನ ಪರಿಷತ್‌ಗೆ ಕಳುಹಿಸುತ್ತಾರೆನ್ನುವ ಭರವಸೆ ಇದೆ. ಗ್ರಾಪಂಗಳಿಗೆ ಆಯ್ಕೆಯಾಗುವಾಗ ಯಾವುದೇ ಪಕ್ಷದ ಚಿಹ್ನೆ ಇರುವುದಿಲ್ಲ, ಅನೇಕ ಸದಸ್ಯರು ಸರಕಾರದ ಕುರಿತು ಅಸಮಾಧಾನ ಹೊಂದಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕರನ್ನು ಪಕ್ಷಾತೀತವಾಗಿ ಬೆಂಬಲಿಸಿ ಗೆಲ್ಲಿಸಲಿದ್ದಾರೆ. ಜನರು ಬಿಜೆಪಿ ಆಡಳಿತದಿಂದ ರೋಸಿ ಹೋಗಿರುವುದು ಸ್ಪಷ್ಟವಾಗಿದ್ದು, ಮುಂದಿನ ಚುನಾವಣೆಯಲ್ಲಿ(Election) ಬದಲಾವಣೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ ನಾಯ್ಕ, ಜಿಪಂ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಪಂ ಮಾಜಿ ಸದಸ್ಯೆ ಸಿಂಧು ಭಾಸ್ಕರ ನಾಯ್ಕ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ನಯನಾ ನಾಯ್ಕ, ಹಿರಿಯ ಮುಖಂಡ ಸೋಮಯ್ಯ ಗೊಂಡ, ಟಿ.ಡಿ. ನಾಯ್ಕ, ನಾರಾಯಣ ನಾಯ್ಕ, ವಿಷ್ಣು ದೇವಾಡಿಗ, ವೆಂಕಟೇಶ ನಾಯ್ಕ ಶಿರಾಲಿ, ಮಹಾಬಲೇಶ್ವರ ನಾಯ್ಕ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಮಾತ್ರ ಅಭಿವೃದ್ಧಿ ಕಾರ್ಯ

ಯಲ್ಲಾಪುರ: ಜಿಲ್ಲೆಯಲ್ಲಿ ಅಥವಾ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಆಡಳಿತಾವಧಿಯಲ್ಲಿ ಮಾತ್ರ ಅಭಿವೃದ್ಧಿ ಕಾರ್ಯ ಆಗಿದೆ. ಆದರೆ ಅಭಿವೃದ್ಧಿ ಕಾರ್ಯಗಳೆಲ್ಲಾ ತಮ್ಮಿಂದಲೇ ಆಗಿರುವುದು ಎಂದು ಬಿಜೆಪಿ ನಾಯಕರು ಬಿಂಬಿಸುತ್ತಿರುವುದು ವಿಪರ್ಯಾಸ ಎಂದು ಹಳಿಯಾಳ ಶಾಸಕ ಆರ್‌.ವಿ. ದೇಶಪಾಂಡೆ(RV Deshpande) ಹೇಳಿದರು.

ಅವರು ಶುಕ್ರವಾರ ಪಟ್ಟಣದ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ವಿಧಾನ ಪರಿಷತ್‌ ಚುನಾವಣೆ(Vidhan Parishat Election) ನಿಮಿತ್ತ ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ವಿಧಾನ ಪರಿಷತ್‌ ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಮತಯಾಚಿಸಿ ಮಾತನಾಡಿದರು. ಕಾಂಗ್ರೆಸ್‌ ಆಡಳಿತದ ಅವಧಿಯ ಅಭಿವೃದ್ಧಿ ಕಾರ್ಯಗಳನ್ನು ಬಿಟ್ಟು ಬೇರೆ ಏನನ್ನೂ ಮಾಡದೇ ಬಿಜೆಪಿಗೆ ಚುನಾವಣೆ ಸಂದರ್ಭದಲ್ಲಿ ಮತ ಕೇಳಲು ನೈತಿಕತೆ ಇಲ್ಲ. ಇತ್ತೀಚೆಗೆ ಮಳೆಯಿಂದಾದ ಹಾನಿಯಲ್ಲಿ ಕಳಚೆಯಲ್ಲಿ ಅತ್ಯಂತ ಹೆಚ್ಚಿನ ಅವಘಡಗಳು ಸಂಭವಿಸಿ ಆಸ್ತಿ-ಪಾಸ್ತಿ ನಷ್ಟವಾಗಿದ್ದರೂ ಕೇವಲ ಭರವಸೆಯ ಮಾತುಗಳನ್ನಾಡಿ ತಿಂಗಳುಗಳೇ ಕಳೆದರೂ ಅಭಿವೃದ್ಧಿ ಕಾರ್ಯದ ನೀಲನಕ್ಷೆಯನ್ನೂ ಸಿದ್ಧಪಡಿಸದ ಸರ್ಕಾರಕ್ಕೆ ಪಂಚಾಯಿತಿ ವ್ಯಾಪ್ತಿಗೆ ತೆರಳಿ ಮತ ಕೇಳಿದರೆ ಎಲ್ಲವನ್ನೂ ನೋಡುತ್ತಿರುವ ಮತದಾರ ಈ ಚುನಾವಣೆಯಲ್ಲಿಯೇ ಉತ್ತರ ನೀಡುತ್ತಾನೆ ಎಂದರು.

Council Election Karnataka: ಮುಂದೆ ಸೂಕ್ತ ಹುದ್ದೆ : ಮುಖಂಡಗೆ ಡಿಕೆಶಿ ಭರವಸೆ

ಕಾಂಗ್ರೆಸ್‌ ಅಭ್ಯರ್ಥಿ ಭೀಮಣ್ಣ ನಾಯ್ಕ ಮಾತನಾಡಿ, ಬಿಜೆಪಿ ಜನವಿರೋಧಿ ನೀತಿ ಹೊಂದಿದ್ದು, ಸಾಮಾನ್ಯ ನಾಗರಿಕನು ತಿರಸ್ಕಾರದ ಮನೋಭಾವದಲ್ಲಿ ನೋಡುತ್ತಿದ್ದಾನೆ. ಕೇವಲ ಬಣ್ಣದ ಮಾತುಗಳಿಂದ ಅಭಿವೃದ್ಧಿ ನಾಟಕವಾಡುತ್ತಿರುವ ಸರ್ಕಾರಕ್ಕೆ ಬುದ್ಧಿ ಕಲಿಸಬೇಕಿದೆ. ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಅಲೆ ಕಂಡುಬಂದಿದೆ. ಪಿಡಿಒಗಳ ಮೂಲಕ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವಂತೆ ಒತ್ತಡ ಹೇರುತ್ತಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ. ಸ್ಥಳೀಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳು ಮತದಾನ ಮಾಡಲು ಸ್ವತಂತ್ರರಿದ್ದು, ಉತ್ತಮ ಸೇವೆ ಸಲ್ಲಿಸಲು ನನ್ನನ್ನು ಆಯ್ಕೆ ಮಾಡುತ್ತಾರೆಂಬ ಭರವಸೆ ಇದೆ ಎಂದರು.

ಹಿರಿಯ ಮುಖಂಡ ಎನ್‌.ಎಂ. ಹೆಬ್ಬಾರ್‌ ಇನ್ನಿತರರು ಕಾಂಗ್ರೆಸ್‌ ಸೇರ್ಪಡೆಗೊಂಡರು. ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಉಸ್ತುವಾರಿ ಪ್ರಶಾಂತ ದೇಶಪಾಂಡೆ, ವಿಧಾನ ಪರಿಷತ್‌ ಚುನಾವಣಾ ವೀಕ್ಷಕರಾದ ಗಾಯತ್ರಿ ನೇತ್ರೇಕರ್‌, ಆರ್‌.ಪಿ. ನಾಯ್ಕ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಡಿ.ಎನ್‌. ಗಾಂವ್ಕರ್‌, ಪಕ್ಷದ ಪ್ರಮುಖರಾದ ಡಾ. ಕುಬೇರಪ್ಪ, ಬಸವರಾಜ ದೊಡ್ಮನಿ ಮತ್ತಿತರರು ಉಪಸ್ಥಿತರಿದ್ದರು. ಉಲ್ಲಾಸ ಶಾನಭಾಗ ಸ್ವಾಗತಿಸಿದರು. ಪ್ರಶಾಂತ ಸಭಾಹಿತ ಕಾರ್ಯಕ್ರಮ ನಿರ್ವಹಿಸಿದರು. ಅನಿಲ ಮರಾಠೆ ವಂದಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ