ಬಿಜೆಪಿ ರಾಜಕೀಯ ಸಂಸ್ಕೃತಿಯ ಚಿತ್ರಣವನ್ನೇ ಬದಲಿಸಿದೆ: ಶಾಸಕ ಎನ್‌.ಮಹೇಶ್‌

By Govindaraj SFirst Published Aug 17, 2022, 10:29 PM IST
Highlights

ರಾಜಕೀಯ ಹಾಗೂ ಆರ್ಥಿಕ ಸಂಸ್ಕೃತಿಯ ಚಿತ್ರಣವನ್ನೇ ಬದಲಾಯಿಸಿ, ಸಂಸತ್‌ನಿಂದ ಹಳ್ಳಿಯ ಕೊನೆಯವರೆಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ಮಾಡಿದ ಕೀರ್ತಿ ಬಿಜೆಪಿ ಪಕ್ಷದಾಗಿದ್ದು, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಪ್ರಮುಖವಾದದ್ದು ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು. 

ಚಾಮರಾಜನಗರ (ಆ.17): ರಾಜಕೀಯ ಹಾಗೂ ಆರ್ಥಿಕ ಸಂಸ್ಕೃತಿಯ ಚಿತ್ರಣವನ್ನೇ ಬದಲಾಯಿಸಿ, ಸಂಸತ್‌ನಿಂದ ಹಳ್ಳಿಯ ಕೊನೆಯವರೆಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ಮಾಡಿದ ಕೀರ್ತಿ ಬಿಜೆಪಿ ಪಕ್ಷದಾಗಿದ್ದು, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಪ್ರಮುಖವಾದದ್ದು ಎಂದು ಶಾಸಕ ಎನ್‌.ಮಹೇಶ್‌ ಹೇಳಿದರು. ನಗರದ ಅಂಬೇಡ್ಕರ್‌ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪ್ರಕೋಷ್ಠಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೋಷ್ಠಗಳ ರಚನೆ ಬಿಜೆಪಿಯಲ್ಲಿ ಮಾತ್ರ ಇದೆ. ಜಿಲ್ಲೆಯಲ್ಲಿ 24 ಪ್ರಕೋಷ್ಠಗಳು, 6 ಸಂಕುಲಗಳು ಇದ್ದು, ಸಮಾಜದ ವಿವಿಧ ಸಮುದಾಯಗಳ ಈ ಪ್ರಕೊಷ್ಠ ಪಕ್ಷದ ಇನ್ನಷ್ಟುಸದೃಢತೆಗೆ ಅತ್ಯಂತ ಮಹತ್ವದ್ದಾಗಿದೆ. 

ಇದಕ್ಕೆ ನಿಮ್ಮೆಲ್ಲರ ಸಹಕಾರ ಸಂಕಲ್ಪವೂ ಅತ್ಯಗತ್ಯ ಎಂದರು. ಈ ಪ್ರಕೋಷ್ಠಗಳು ಜವಾಬ್ದಾರಿಯಿಂದ ಮಾಡಿದರೆ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಗೆಲುವು ಕಾಣಲಿದೆ. ಆದ್ದರಿಂದ ನಿಮ್ಮ ಜವಾಬ್ದಾರಿ ಹೆಚ್ಚಿನ ಪಾಲು ಇದೆ ಎಂದರು. ಬಿಜೆಪಿಯ ರಾಜಕೀಯ ಸಂಸ್ಕೃತಿ ಚಿತ್ರಣ ಬದಲಾವಣೆ ವಿರೋಧ ಪಕ್ಷಗಳ ನಾಯಕರನ್ನೇ ಬದಲಾಯಿಸಿದೆ ಬಿಟ್ಟಿದೆ. ಬೋಲೋ ಭಾರತ್‌ ಮಾತಾಕೀ ಜೈ ಎಂಬ ಘೋಷಣೆ ಬಿಜೆಪಿಗೆ ಸೀಮಿತ ಎಂದು ಹೇಳುತ್ತಿದ್ದ ವಿರೋಧ ಪಕ್ಷಗಳ ನಾಯಕರು ಇಂದು ತಾವೇ ಮುಂದೆ ಬಂದು ಕೂಗುತ್ತಿದ್ದಾರೆ. ಅದರಲ್ಲೂ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್‌ ಮುಂಚೂಣಿಯಲ್ಲಿದ್ದಾರೆ ಎಂದರು.

ಹುಲಿ ಯೋಜನೆ ತೀರ್ಮಾನ ಸಿಎಂಗೆ ಬಿಟ್ಟದ್ದು: ಸಚಿವ ಕತ್ತಿ

ಪ್ರಭಾವಿಗಳಿಗೆ, ಶಿಪಾರಸ್ಸು ಮಾಡಿದವರಿಗೆ ಸೀಮಿತವಾಗಿದ್ದ ರಾಜ್ಯಸಭಾ ಸ್ಥಾನಗಳು, ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು ಇಂದು ಪ್ರಾಮಾಣಿಕ ಸೇವೆ ಸಲ್ಲಿಸಿದವರಿಗೆ ಸಿಗುತ್ತಿರುವುದಕ್ಕೆ ಬಿಜೆಪಿಯ ರಾಜಕೀಯ ಸಂಸ್ಕೃತಿ ಚಿತ್ರಣ ಬದಲಾವಣೆ ಕಾರಣ. ಸಾಮಾನ್ಯ, ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುವ ಕೆಲಸ, ಸಾಮಾಜಿಕ ನ್ಯಾಯ ಇವೆಲ್ಲವು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಇವುಗಳೆಲ್ಲವನ್ನು ಪ್ರಕೋಷ್ಠದ ಮುಂಚೂಣಿಯ ನಾಯಕರು ಸಾಮಾನ್ಯ ಜನರಿಗೆ ತಿಳಿಸಬೇಕು ಎಂದರು. ಮನ್‌ ಕೀ ಬಾತ್‌ ಮೂಲಕ ಸಾಮಾನ್ಯ ಜನರನ್ನು ಭೇಟಿ ಮಾಡುವ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ. 

ಇವರ ಯೋಜನೆಗಳ ಬಗ್ಗೆ ಸಾಮಾನ್ಯ ಜನರಿಗೆ ತಿಳಿಸಿ, ಇನ್ನೂ 10 ವರ್ಷಗಳ ಕಾಲ ನರೇಂದ್ರ ಮೋದಿಯವರು ಪ್ರಧಾನಿಯಾದರೆ ದೇಶ ಅಭಿವೃದ್ದಿ ಹೊಂದಿದ ದೇಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಂತಹ ದೂರದೃಷ್ಟಿಅವರ ಯೋಜನೆಗಳಲ್ಲಿದ್ದು, ವಿರೋಧ ಪಕ್ಷಗಳು ವಿನಾಕಾರಣ ಆರೋಪ ಮಾಡುತ್ತಿವೆ. ಆದರೆ ಪಕ್ಷದ ಸಾಧನೆ ಮತ್ತು ಒಳ್ಳೆಯ ಯೋಜನೆಗಳ ಬಗ್ಗೆ ಜನರಿಗೆ ಸರಿಯಾಗಿ ತಿಳಿಸದೇ ಇರುವುದು ನಮ್ಮ ಪಕ್ಷದ ಕೊರತೆ ಎಂದು ಬೇಸರ ವ್ಯಕ್ತಪಡಿಸಿದರು. ಕಳೆದ ಕೆಲ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಮಾರು 28 ಲಕ್ಷ ಕೋಟಿ ರು. ಹಣ ನೇರವಾಗಿ ಫಲಾನುಭವಿಗಳಿಗೆ ನೀಡಿವೆ. 

10 ಕೋಟಿ ಶೌಚಾಲಯಗಳ ನಿರ್ಮಾಣ, ಪ್ರತಿಯೊಬ್ಬರಿಗೂ ನದಿ ಮೂಲದ ಶುದ್ಧ ಕುಡಿಯವ ನೀರು ಸಿಗಬೇಕೆಂಬ ಜಲಜೀವನ್‌ ಮಿಷನ್‌ ಸೇರಿದಂತೆ ಹಲವಾರು ಮಹತ್ವದ ಯೋಜನೆಗಳ ಬಗ್ಗೆ ಜನರೊಂದಿಗೆ ಮಾತನಾಡಿ ಪಕ್ಷವನ್ನು ಸದೃಢಗೊಳಿಸಿ ಎಂದರು. ಪಕ್ಷದ ರಾಜ್ಯ ಉಪಾಧ್ಯಕ್ಷ, ಜಿಲ್ಲಾ ಪ್ರಭಾರಿ ರಾಜೇಂದ್ರ ಮಾತನಾಡಿ, ಕಾರ್ಯಕರ್ತರು ಸಣ್ಣಪುಟ್ಟಗೊಂದಲಗಳನ್ನು ಬಿಟ್ಟು ಪಕ್ಷದ ಸದೃಢತೆಗೆ ಪ್ರಯತ್ನಿಸದಿದ್ದರೆ ಮುಂದೆ ಪಕ್ಷದ ಸಾಮಾನ್ಯ ಕಾರ್ಯಕರ್ತರು ತೊಂದರೆ ಅನುಭವಿಸಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮ ಪಕ್ಷವೇ ಅಧಿಕಾರದಲ್ಲಿದ್ದರೂ ಪಕ್ಷದ ಕಾರ್ಯಕರ್ತರು ಹಲ್ಲೆಗೊಳಾಗುತ್ತಿದ್ದಾರೆ. ಇದರ ಬಗ್ಗೆ ಚಿಂತಿಸಿ ಎಂದರು.

ತಮ್ಮ ವೈಯಕ್ತಿಕ ಸಾಧನೆಗಾಗಿ ದೇಶವನ್ನು ಇಬ್ಭಾಗ ಮಾಡಿದ ಕಾಂಗ್ರೆಸ್‌ ಅಂದಿನಿಂದ ಇಂದಿನವರೆಗೂ ಸಮಾಜದಲ್ಲಿ ದ್ವೇಷ ಭಾವನೆಯನ್ನು ಬಿತ್ತಿ ಅಣ್ಣ ತಮ್ಮಂದಿರಂತೆ ಇದ್ದ ನಮ್ಮನ್ನು ಒಡೆಯುತ್ತಾ ಬಂದಿದ್ದಾರೆ. ಇಂತವರ ಬಗ್ಗೆ ಎಚ್ಚರಿಕೆಯಿಂದ ಇರಿ. ಸಣ್ಣಪುಟ್ಟಗೊಂದಗಳಿಗೆ ಕಿವಿಗೊಡದೆ ಪಕ್ಷವನ್ನು ಸಂಘಟಿಸಿ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು, ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಪಕ್ಷ ಇಂತಹ ಪ್ರಕೋಷ್ಠಗಳ ರಚನೆ ಮಾಡಿದೆ. ಈ ಮೂಲಕ ಸರ್ಕಾರದ ಜನಪರ ಯೋಜನೆಗಳು ಮತ್ತು ಸೌಲಭ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಮೂಲಕ ಪಕ್ಷವನ್ನು ಸದೃಢಗೊಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರತಾಪ್‌ಸಿಂಹ ನಾಯಕ್‌, ಸಹ ಸಂಚಾಲಕ ಸದಾಶಿವಯ್ಯ, ಕಮಲಮ್ಮ, ನೂರೊಂದು ಶೆಟ್ಟಿ, ಜಿಲ್ಲಾಧ್ಯಕ್ಷ ಆರ್‌.ಸುಂದರ್‌, ಮುಖಂಡರಾದ ಎಂ. ರಾಮಚಂದ್ರ, ಅಮ್ಮನಪುರ ಮಲ್ಲೇಶ್‌, ಡಾ. ಎ.ಆರ್‌.ಬಾಬು, ಗಾಯಿತ್ರಿ, ನಾಗಶ್ರೀ ಪ್ರತಾಪ್‌, ಬಾಲಸುಬ್ರಹ್ಮಣ್ಯಂ, ಸಿ.ಎನ್‌. ಬಾಲರಾಜ್‌ ಇತರರು ಪಾಲ್ಗೊಂಡಿದ್ದರು.

ನಮ್ಮದು ಪಾಪರ್‌ ಸರ್ಕಾರವಲ್ಲ ಸೂಪರ್‌ ಸರ್ಕಾರ: ಸಚಿವ ಅಶೋಕ್‌

ಒಂದೇ ಕುಟುಂಬದ ಮೂವರು ಪ್ರಧಾನಿಗಳು ಈ ದೇಶವನ್ನು ಸುಮಾರು 50 ವರ್ಷಗಳ ಕಾಲ ಆಳಿದರು. ಇವರಿಗೆ ಸಾಮಾನ್ಯ ಜನರ ಕಷ್ಟನೋವು ತಿಳಿಯಲಿಲ್ಲ. ಸ್ವಾತಂತ್ರ್ಯ 25ನೇ 50ನೇ ವರ್ಷ ಯಾವುದನ್ನು ಮಾಡಲಿಲ್ಲ. ಆದರೆ ಜನರು ನೆನಪಿಡುವ, ಸಾಮಾನ್ಯರಿಗೂ ಸ್ವಾತಂತ್ರ್ಯದ ಅರ್ಥ ತಿಳಿಸಿ, ತಿರಂಗಾ ಯಾತ್ರೆ, ಪ್ರತಿ ಮನ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಿದ ಕೀರ್ತಿ ಸಾಮಾನ್ಯ ಕುಟುಂಬದ ಪ್ರಧಾನಿ ಮೋದಿಗೆ ಸಲ್ಲಬೇಕು.
-ಎನ್‌.ಮಹೇಶ್‌, ಶಾಸಕ

click me!