ಪ್ರಧಾನಿ ಹುದ್ದೆ ಮೇಲೆ ನಿತೀಶ್‌ ಕಣ್ಣು?

By Kannadaprabha NewsFirst Published Aug 10, 2022, 5:34 AM IST
Highlights
  • ಪ್ರಧಾನಿ ಹುದ್ದೆ ಮೇಲೆ ನಿತೀಶ್‌ ಕಣ್ಣು?
  • ಬಿಜೆಪಿ ಮೈತ್ರಿ ಮುರಿದಿದ್ದರ ಹಿಂದೆ ದೂರಾಲೋಚನೆ
  • 2024ರಲ್ಲಿ ರಾಹುಲ್‌, ದೀದಿ, ಜತೆ ಪಿಎಂ ರೇಸಲಿ?

ಪಟನಾ (ಆ.10): ರಾಜ್ಯದಲ್ಲಿ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡ ನಿತೀಶ್‌ ನಿರ್ಧಾರಕ್ಕೆ, 2024ರಲ್ಲಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮುವ ದೂರಾಲೋಚನೆಯೂ ಒಂದು ಕಾರಣ ಎಂಬ ವಿಶ್ಲೇಷಣೆ ಕೇಳಿಬಂದಿದೆ. 2024ರಲ್ಲಿ ರಾಜ್ಯದಲ್ಲಿ ಸಿಎಂ ಹುದ್ದೆಯನ್ನು ಆರ್‌ಜೆಡಿ(RJD) ನಾಯಕ ತೇಜಸ್ವಿಗೆ ಬಿಟ್ಟುಕೊಡುವ ವಾಗ್ದಾನಕ್ಕೂ ಇದೇ ಕಾರಣ ಎನ್ನಲಾಗುತ್ತಿದೆ. ಸದ್ಯ ವಿವಿಧ ರಾಜ್ಯಗಳಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಬಲ ಹೊಂದಿದ್ದರು, ಲೋಕಸಭೆ ಚುನಾವಣೆ ವಿಷಯ ಬಂದಾಗ ಬಿಜೆಪಿಯದ್ದು ಮೇಲುಗೈ. ಆದರೆ ಮತ್ತೊಂದೆಡೆ ವಿಪಕ್ಷ ಕಾಂಗ್ರೆಸ್‌ ತನ್ನ ಈ ಹಿಂದಿನ ವರ್ಚಸ್ಸು ಕಳೆದುಕೊಂಡಿದೆ. ಸೋನಿಯಾ ಪ್ರಧಾನಿ ಅಭ್ಯರ್ಥಿ ಆಗಲ್ಲ ಎಂಬುದು ಖಚಿತವಾಗಿದೆ. ಇನ್ನು ರಾಹುಲ್‌ ನಾಯಕತ್ವಕ್ಕೆ ಅವರದ್ದೇ ಪಕ್ಷದ ಕೆಲ ನಾಯಕರ ಜೊತೆಗೆ ಮಿತ್ರ ಪಕ್ಷಗಳಲ್ಲೂ ವಿರೋಧವಿದೆ.

ಬಿಜೆಪಿ ಜೆಡಿಯು ಮೈತ್ರಿಯಲ್ಲಿ ಬಿರುಕು? ಮಹತ್ವದ ಸಭೆ ಕರೆದ ಬಿಹಾರ ಸಿಎಂ ನಿತೀಶ್ ಕುಮಾರ್!

ಉಳಿದಂತೆ ಪ್ರಧಾನಿ ಅಭ್ಯರ್ಥಿ ರೇಸ್‌ನಲ್ಲಿ ಈಗಾಗಲೇ ಪಶ್ಚಿಮ ಬಂಗಾಳ(West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banarjee), ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್‌ ರಾವ್‌(Chandrashekhar Rao) ಕಾಣಿಸಿಕೊಂಡಿದ್ದಾರೆ. ಆದರೆ ಮಮತಾ ಬಗ್ಗೆ ಕಾಂಗ್ರೆಸ್‌ ವಿರೋಧ ಹೊಂದಿದೆ. ಇನ್ನು ಕೆಸಿಆರ್‌ ರಾಷ್ಟ್ರವ್ಯಾಪಿ ನಾಯಕರಾಗಿ ಇನ್ನೂ ಹೊರಹೊಮ್ಮಿಲ್ಲ.

ಇಂಥ ಸಂರ್ಭದಲ್ಲಿ ಕಾಣಿಸಿಕೊಂಡಿರುವ ಶೂನ್ಯವನ್ನು ತುಂಬಲು ತಾವು ಸೂಕ್ತ ಅಭ್ಯರ್ಥಿಯಾಗಬಹುದು ಎಂಬ ಲೆಕ್ಕಾಚಾರದಲ್ಲಿ ನಿತೀಶ್‌ ಇದ್ದಾರೆ ಎನ್ನಲಾಗಿದೆ. ನಿತೀಶ್‌ಗೆ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ನಾಯಕರನ್ನು ಸಂಭಾಳಿಸುವ ಚಾಕಚಕ್ಯತೆ ಇದೆ. ಭ್ರಷ್ಟಾಚಾರಿಯಲ್ಲ, ಕುಟುಂಬ ರಾಜಕಾರಣದ ಹಿನ್ನೆಲೆ ಇಲ್ಲ ಎಂಬ ಹಿರಿಮೆಯೂ ಅವರ ಬೆನ್ನಿಗಿದೆ. ಈ ಎಲ್ಲಾ ಲೆಕ್ಕಾಚಾರಗಳು, ಅವರನ್ನು 2024ರ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ಪ್ರಧಾನಿ ಹುದ್ದೆ ರೇಸ್‌ನಲ್ಲಿ ಮುಂಚೂಣಿಯಲ್ಲಿ ಇರಿಸಿವೆ.

ಇದಕ್ಕೆ ಇಂಬು ನೀಡುವಂತೆ ‘ನಿತೀಶ್‌ ಕುಮಾರ್‌ ಪ್ರಧಾನಿಯಾಗುವ ಅರ್ಹತೆಯನ್ನು ಹೊಂದಿದ್ದಾರೆ. ಈ ಬಗ್ಗೆ ನಾವು ಯಾವುದೇ ಘೋಷಣೆ ಮಾಡುತ್ತಿಲ್ಲ. ಆದರೆ ಅವರು ಪ್ರಧಾನಿಯಾಗುವ ಎಲ್ಲ ಗುಣಗಳನ್ನು ಹೊಂದಿದ್ದಾರೆ’ ಜೆಡಿಯು ರಾಷ್ಟ್ರೀಯ ಸಂಸದೀಯ ಮಂಡಳಿ ಅಧ್ಯಕ್ಷ ಉಪೇಂದ್ರ ಕುಶ್ವಾಹ ಹೇಳಿದ್ದಾರೆ. ಜೊತೆಗೆ, ಎನ್‌ಡಿಎ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ರಾಜಭವನದಿಂದ ಹೊರಬರುವಾಗ ನಿತೀಶ್‌ ಕುಮಾರ್‌ ಅವರಿಗೆ ಮುಂಬರುವ ಲೋಕಸಭಾ ಚುನಾವಣೆಗೆ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವಿರಾ? ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಯಾವುದೇ ಉತ್ತರ ನೀಡಲು ನಿತೀಶ್‌ ನಿರಾಕರಿಸಿದ್ದಾರೆ.

ನೀತಿ ಆಯೋಗ ಸಭೆಗೆ ಗೈರಾಗಲಿರುವ ನಿತೀಶ್‌ ಕುಮಾರ್‌, ಕೆಸಿಆರ್‌: ಕೇಂದ್ರದ ವಿರುದ್ಧ ತೆಲಂಗಾಣ ಸಿಎಂ ಪತ್ರ ಬರೆದು ಆಕ್ರೋಶ

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿದ ಕಾರಣಕ್ಕೇ ಎನ್‌ಡಿಎ ಮೈತ್ರಿಕೂಟದಿಂದ ಹೊರಬರುವ ಮೂಲಕ ನಿತೀಶ್‌ ತಮ್ಮ ಕನಸನ್ನು ಸ್ಪಷ್ಟವಾಗಿ ಬಹಿರಂಗಪಡಿಸಿದ್ದರು.ಆದರೆ ಇಷೆಲ್ಲಾ ಹಿರಿಮೆಯ ನಡುವೆಯೂ ಪದೇ ಪದೇ ಯೂ-ಟರ್ನ್‌ ಹೊಡೆಯುವ ಗುಣ ಅವರ ಕಡೆಗೆ ವಿಪಕ್ಷಗಳು ಅನುಮಾನದಿಂದ ನೋಡುವಂತೆಯೂ ಮಾಡುತ್ತಿರುವುದು ಸುಳ್ಳಲ್ಲ.

click me!