Assembly election: ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್‌ ಶಾ ಒಗ್ಗಟ್ಟಿನ ಪಾಠ

By Kannadaprabha NewsFirst Published Jan 29, 2023, 1:31 PM IST
Highlights

ಕಿತ್ತೂರು ಕರ್ನಾಟಕದಲ್ಲಿ ಮಿಂಚಿನ ಸಂಚಾರ ನಡೆಸಿ ಪಕ್ಷದ ಕಾರ್ಯಕರ್ತರಿಗೆ ಹೊಸ ಚೈತನ್ಯ ತುಂಬಿರುವ ಕೇಂದ್ರ ಗೃಹ ಸಚಿವ ಅಮಿತ ಶಾ, ಶನಿವಾರ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಪಕ್ಷದ ಹಿರಿಯ ನಾಯಕರ ಸಭೆ ನಡೆಸಿ, ಮುಂದಿನ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸುವಂತೆ ಸೂಚನೆ ನೀಡಿದ್ದಾರೆ.

ಬೆಳಗಾವಿ/ಹುಬ್ಬಳ್ಳಿ (ಜ.29) : ಕಿತ್ತೂರು ಕರ್ನಾಟಕದಲ್ಲಿ ಮಿಂಚಿನ ಸಂಚಾರ ನಡೆಸಿ ಪಕ್ಷದ ಕಾರ್ಯಕರ್ತರಿಗೆ ಹೊಸ ಚೈತನ್ಯ ತುಂಬಿರುವ ಕೇಂದ್ರ ಗೃಹ ಸಚಿವ ಅಮಿತ ಶಾ, ಶನಿವಾರ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಪಕ್ಷದ ಹಿರಿಯ ನಾಯಕರ ಸಭೆ ನಡೆಸಿ, ಮುಂದಿನ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸುವಂತೆ ಸೂಚನೆ ನೀಡಿದ್ದಾರೆ.

ಬೆಳಗ್ಗೆ ಹುಬ್ಬಳ್ಳಿಯಲ್ಲಿ, ಸಂಜೆ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಎರಡೂವರೆ ಗಂಟೆಗಳ ಕಾಲ ಸುದೀರ್ಘವಾಗಿ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿದ ಶಾ, ಚುನಾವಣಾ ರಣತಂತ್ರ ಕುರಿತು ಸಮಾಲೋಚನೆ ನಡೆಸಿದರು. ಪಕ್ಷದ ನಾಯಕರೆಲ್ಲರೂ ಭಿನ್ನಮತ, ಗುಂಪುಗಾರಿಕೆ ಬದಿಗಿಟ್ಟು ಒಂದಾಗಿ ಚುನಾವಣೆ ಎದುರಿಸುವಂತೆ ಕಟ್ಟಪ್ಪಣೆ ಮಾಡಿದರು. ಒಗ್ಗಟ್ಟಿನ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ಸೂಚನೆ ನೀಡಿದರು ಎನ್ನಲಾಗಿದೆ.

Dharwad: ದಕ್ಷಿಣ ಭಾರತದ ಪ್ರಥಮ ಫಾರೆನ್ಸಿಕ್‌ ವಿವಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಡಿಗಲ್ಲು

ಸಭೆ ಬಳಿಕ, ಬೆಳಗಾವಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವಂತೆ ಅಮಿತ್‌ ಶಾ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುವುದು ಖಚಿತ ಎಂದರು.

ಬಿಎಸ್‌ವೈ, ಬೊಮ್ಮಾಯಿ, ಪ್ರಹ್ಲಾದ ಜೋಶಿ, ಕಟೀಲ್‌, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಮಧ್ಯೆ, ಸಭೆ ಬಳಿಕ ಮಾಜಿ ಸಚಿವ ರಮೇಶ ಜಾರಕಿಹೊಳಿಯವರು, ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರನ್ನು ಭೇಟಿಯಾಗಿ ಪ್ರತ್ಯೇಕವಾಗಿ ಚರ್ಚೆ ನಡೆಸಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಟಾರ್ಗೆಟ್‌ 150: ಬಿಜೆಪಿ ಕಾರ‍್ಯಕಾರಿಣಿ ನಿರ್ಧಾರ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಳ್ಳಬೇಕು. ಆ ನಿಟ್ಟಿನಲ್ಲಿ ಈಗಿನಿಂದಲೇ ಪಕ್ಷ ಸಂಘಟಿಸಿ ಸಿದ್ಧತೆ ಆರಂಭಿಸಬೇಕೆಂಬ ಸ್ಪಷ್ಟಮಾರ್ಗಸೂಚಿಯೊಂದಿಗೆ ಹುಬ್ಬಳ್ಳಿಯಲ್ಲಿ ಎರಡು ದಿನಗಳ ಕಾಲ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಬುಧವಾರ ಮುಕ್ತಾಯವಾಗಿದೆ.

ಉಪಚುನಾವಣೆ ಮತ್ತು ಮೇಲ್ಮನೆ ಚುನಾವಣೆಗಳ ಫಲಿತಾಂಶದ ಪರಾಮರ್ಶೆ ಜತೆಯಲ್ಲೇ ಮುಂದಿನ ಚುನಾವಣೆಗಳನ್ನು ಶಿಸ್ತು ಹಾಗೂ ಸಂಘಟನೆಯಿಂದ ಎದುರಿಸುವ ಕುರಿತು ರಾಜ್ಯ ಕಾರ್ಯಕಾರಿಣಿಯಲ್ಲಿ ಸುದೀರ್ಘ ಸಮಾಲೋಚನೆಗಳು ನಡೆದವು. ಆರಂಭದಲ್ಲೇ ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳಿಗೆ ಬ್ರೇಕ್‌ ಹಾಕಿದ ಹಿನ್ನೆಲೆಯಲ್ಲಿ ಕೇವಲ ಪಕ್ಷ ಸಂಘಟನೆ ಕುರಿತ ಚರ್ಚೆಗಷ್ಟೇ ಕಾರ್ಯಕಾರಿಣಿ ಹೆಚ್ಚಿನ ಆದ್ಯತೆ ನೀಡಿತು. ಪಕ್ಷ ಸಂಘಟನೆ ಕುರಿತು ಏನೆಲ್ಲ ಮಾಡಬೇಕು, ಇತ್ತೀಚೆಗೆ ನಡೆದ ಪರಿಷತ್‌ ಚುನಾವಣೆಯಲ್ಲಿನ ಪಕ್ಷದ ಸಾಧನೆ, ಕೆಲ ಕ್ಷೇತ್ರಗಳಲ್ಲಿ ಅನುಭವಿಸಿದ ಸೋಲು, ಪಕ್ಷ ಸಂಘಟನೆಗೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ವಿಧಾನಸಭಾ ಸಾರ್ವತ್ರಿಕ ಚುನಾವಣೆಗೂ ಮುನ್ನ ನಡೆಯುವ ಪಂಚಾಯ್ತಿ ಚುನಾವಣೆಗಳನ್ನು ಸವಾಲಾಗಿ ಸ್ವೀಕರಿಸುವ ನಿರ್ದೇಶನ ನೀಡಲಾಯಿತು. ವಿಭಾಗವಾರು ಸಭೆ ನಡೆಸಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಎಲ್ಲರ ಅಭಿಪ್ರಾಯ ಸಂಗ್ರಹಿಸಿದರು. ಮುಂಬರುವ ಚುನಾವಣೆ ಗೆಲ್ಲುವ ಸಲುವಾಗಿ ಒಗ್ಗಟ್ಟಿನ ಪಾಠವನ್ನೂ ಮಾಡಿದರು.

ತಾಪಂ, ಜಿಪಂಗೆ ರಿಹರ್ಸಲ್‌: ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೇರಬೇಕು. ಅದಕ್ಕಾಗಿ 2023ರ ಚುನಾವಣೆಗೆ ಹೈಕಮಾಂಡ್‌ ‘ಮಿಷನ್‌ 150’ ಗುರಿ ನೀಡಿದೆ. ಈ ಗುರಿ ಮುಟ್ಟಬೇಕೆಂದರೆ ಸದ್ಯದಲ್ಲೇ ಎದುರಾಗುವ ತಾಪಂ, ಜಿಪಂ ಹಾಗೂ ಪರಿಷತ್‌ನ ಕೆಲ ಸ್ಥಾನಗಳಿಗೆ ಜೂನ್‌ನಲ್ಲಿ ನಡೆಯುವ ಚುನಾವಣೆಗಳು ಬಹಳ ಪ್ರಮುಖ. ಈ ಚುನಾವಣೆ ಗೆಲ್ಲಲು ಪಕ್ಷ ಸಂಘಟನೆಗೆ ಈಗಿನಿಂದಲೇ ಸಜ್ಜಾಗಬೇಕು. ಅದಕ್ಕಾಗಿ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯ ಸಾಧಿಸಬೇಕು ಎಂಬ ಸೂಚನೆಯನ್ನು ಸಭೆಯಲ್ಲಿ ನೀಡಲಾಯಿತು.

ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಪಕ್ಷದ ನಿಯಮ, ಸೂಚನೆಗಳನ್ನು ಯಾರೂ ಮೀರುವಂತಿಲ್ಲ. ಸರ್ಕಾರ ಮತ್ತು ಪಕ್ಷದ ನಡುವೆ ಅಪನಂಬಿಕೆ ಬಾರದ ರೀತಿಯಲ್ಲಿ ಕೆಲಸ ಮಾಡಬೇಕು. ಪ್ರತಿಯೊಬ್ಬರೂ ಪಕ್ಷದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಬೇಕು. ಈಗಾಗಲೇ ಅಸ್ತಿತ್ವದಲ್ಲಿರುವ ಪೇಜ್‌ ಪ್ರಮುಖ್‌ ಜತೆಗೆ ಪ್ರತ್ಯೇಕವಾಗಿ ಪೇಜ್‌ ಸಮಿತಿಯನ್ನೂ ರಚಿಸಬೇಕು. ಈ ಮೂಲಕ ಪಕ್ಷ ಸಂಘಟಿಸಬೇಕು ಎಂದು ಅರುಣ್‌ ಕುಮಾರ್‌ ಸೂಚಿಸಿದರು.

‘ಕೈ’ ತಿಕ್ಕಾಟದ ಲಾಭ ಪಡೆಯಿರಿ:

ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಮಧ್ಯೆ ತಿಕ್ಕಾಟ ಜೋರಾಗಿದೆ. ಇದರ ಲಾಭ ತಾಪಂ, ಜಿಪಂ ಸೇರಿ ಮುಂಬರುವ ಪ್ರತಿ ಚುನಾವಣೆಯಲ್ಲೂ ಪಡೆಯಬೇಕು. ಆ ರೀತಿ ಕಾರ್ಯತಂತ್ರ ರೂಪಿಸಬೇಕು ಎಂಬ ಸಲಹೆಯನ್ನೂ ಅರುಣ್‌ಸಿಂಗ್‌ ನೀಡಿದ್ದಾರೆ.

ಕಾರ್ಯಕಾರಿಣಿ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಈ ಕಾರ್ಯಕಾರಿಣಿ ಮುಂದಿನ ಚುನಾವಣೆಗೆ ದಿಕ್ಸೂಚಿ ನೀಡಿದೆ. ಬಿಜೆಪಿಯ 150 ಪ್ಲಸ್‌ ಘೋಷಣೆಯೊಂದಿಗೆ 2023ರ ಚುನಾವಣೆ ಎದುರಿಸಲು ಸಜ್ಜಾಗಿದೆ. ಇದಕ್ಕೆ ಪೂರಕವಾಗಿ ತಯಾರಿ ನಡೆಸಲು ಸಭೆ ಅನುಕೂಲ ಕಲ್ಪಿಸಿದೆ. ಮುಂದಿನ 3 ತಿಂಗಳವರೆಗೆ ಏನು ಮಾಡಬೇಕು ಎಂಬ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.

2 ಅಭಿನಂದನಾ ನಿರ್ಣಯಗಳು

ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಎರಡು ಅಭಿನಂದನಾ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.

1. ದಿವ್ಯ ಕಾಶಿ- ಭವ್ಯ ಕಾಶಿ ಯೋಜನೆ, ಪೆಟ್ರೋಲ…- ಡಿಸೇಲ್‌ ಮೇಲಿನ ಕೇಂದ್ರೀಯ ಶುಲ್ಕ ಕಡಿತ, ಜಾಗತಿಕ ಮಟ್ಟದಲ್ಲಿ ಯುದ್ಧ ಸಾಮಗ್ರಿಗಳ ತುರ್ತು ವಹಿವಾಟು, ಯಶಸ್ವಿ ಕೊರೋನಾ ಲಸಿಕಾ ಅಭಿಯಾನ, ಸ್ವ ಸಹಾಯ ಸಂಘಗಳಿಗೆ ಸಹಾಯಧನ ನೀಡಿದ ಕೇಂದ್ರ ಸರ್ಕಾರಕ್ಕೆ ಅಭಿನಂದನೆ

2. ಮತಾಂತರ ತಡೆ ನಿಷೇಧ ಕಾಯ್ದೆ ಜಾರಿಗೆ ಪ್ರಯತ್ನ, ಬೆಳೆ ನಷ್ಟಪರಿಹಾರ ಹೆಚ್ಚಳಕ್ಕಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದನೆ 

ರಾಜ್ಯದಲ್ಲಿ ಬಿಜೆಪಿ ಪರ ಅಲೆಯಿದೆ- ಆದರೂ ಕಾಂಗ್ರೆಸ್‌ನವರು ಗೆದ್ದಿರುವಂತೆ ಪೋಸ್‌ ಕೊಡ್ತಿದ್ದಾರೆ: ಸಿಎಂ ಬೊಮ್ಮಾಯಿ

ಕಾರ್ಯಕಾರಿಣಿಯಲ್ಲಿ ನಮ್ಮ ಮೇಲೆ ವಿಶ್ವಾಸವಿಟ್ಟು ಮುನ್ನಡೆಯಿರಿ ಎಂದು ಬೆನ್ನುತಟ್ಟಿದ್ದಾರೆ. ಪಕ್ಷ ಬಲಿಷ್ಠವಾಗಬೇಕು, ಮುಂಬರುವ ಚುನಾವಣೆಗೆ ಒಗ್ಗಟ್ಟಿನಿಂದ ಹೋಗಬೇಕೆಂಬ ಅವರ ನಿರೀಕ್ಷೆಯನ್ನು ಹುಸಿಗೊಳಿಸಲ್ಲ.

- ಬಸವರಾಜ ಬೊಮ್ಮಾಯಿ, ಸಿಎಂ

click me!