BJP Janasankalpa Yatre: ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆ ಶೀಘ್ರ ನಿರ್ಮಾಣ: ಸಿಎಂ ಬೊಮ್ಮಾಯಿ

By Sathish Kumar KHFirst Published Nov 27, 2022, 7:39 PM IST
Highlights

ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆಗೆ ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದ್ದು, ಸ್ಥಳವನ್ನು ನಿರ್ಧರಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಶೃಂಗೇರಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಚಿಕ್ಕಮಗಳೂರು (ನ.27) : ಶೃಂಗೇರಿಯಲ್ಲಿ 100 ಹಾಸಿಗೆಯ ಆಸ್ಪತ್ರೆಗೆ ಮೇಲ್ದರ್ಜೆಗೇರಿಸಲು ಸರ್ಕಾರ ತೀರ್ಮಾನಿಸಿದ್ದು, ಸ್ಥಳವನ್ನು ನಿರ್ಧರಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ ಶೃಂಗೇರಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ  ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ಮಲೆನಾಡು ಭಾಗದಲ್ಲಿ ಅಕ್ರಮ ಒತ್ತುವರಿ ಬಗ್ಗೆ ಸಮಸ್ಯೆ ಇದೆ‌. ಕಾಫಿ ಬೆಳೆಗಾರರ ಸಮಸ್ಯೆಗಳನ್ನು ನಿವಾರಿಸಲು ಕಂದಾಯ ಇಲಾಖೆಯವರು ಶೀಘ್ರ ಪರಿಹಾರ ಕಂಡುಕೊಳ್ಳಲಿದ್ದಾರೆ‌.ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಬಂದಿದೆ. ಔಷಧಿ ಸಿಂಪಡನೆ ಹಾಗೂ ರೋಗ ಹರಡದಂತೆ  ಪರಿಹಾರ ಕಂಡುಕೊಳ್ಳಲು 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೇಂದ್ರ ತಂಡ ಬಂದು ಪರಿಶೀಲನೆ ನಡೆಸಿದೆ.  ಈ ಭಾಗದ ಪ್ರವಾಹ ಬಂದು ಹಾಳಾಗಿರುವ ರಸ್ತೆಗಳ ದುರಸ್ತಿಗೆ 5.80 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಇನ್ನೂ 5 ಕೋಟಿ ರೂ. ಹೆಚ್ಚಿನ ಅನುದಾನವನ್ನು ಬಿಡುಗಡೆ ನಿನ್ನೆಯಷ್ಟೇ ಬಿಡುಗಡೆ ಮಾಡಲಾಗಿದೆ  ಎಂದರು.

ಯಾರದ್ದೋ ದುಡ್ಡು.. ಸಿದ್ದರಾಮಯ್ಯನ ಜಾತ್ರೆ : ಸಿಎಂ ಬೊಮ್ಮಾಯಿ ಟೀಕೆ

ಮುಳ್ಳಯ್ಯನಗಿರಿ-ದತ್ತ ಪೀಠಕ್ಕೆ ರೋಪ್ ವೇ: ದತ್ತ ಪೀಠ ಈ ಭಾಗದ ಭಾವನೆಗಳ ದೇವಸ್ಥಾನ. ಈ ದೇವಸ್ಥಾನದಲ್ಲಿ ಮೂಲ ಪೂಜೆ ನಡೆಸುವ ಬಗ್ಗೆ ಶಾಸಕ ಸಿಟಿ ರವಿಯವರು ಸುದೀರ್ಘ ಹೋರಾಟ ನಡೆಸಿದ್ದಾರೆ. ಈಗಾಗಲೇ ಕಾನೂನಾತ್ಮಕ ಹೊರಾಟ ನಡೆದಿದ್ದು, ಸೂಕ್ತ ಪರಿಹಾರ ದೊರೆಯಲಿದೆ.ಮುಳ್ಳಯ್ಯನಗಿರಿ ಹಾಗೂ ದತ್ತ ಪೀಠದ ನಡುವೆ ರೋಪ್ ವೇ ನಿರ್ಮಿಸಲು ಆಯವ್ಯಯದಲ್ಲಿ ಅನುದಾನವನ್ನು ಮೀಸಲಿರಿಸಿದ್ದು, ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು. ಈ ಭಾಗದಲ್ಲಿ ಆನೆ ಹಾವಳಿ ಹೆಚ್ಚಿದೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಹೊಸ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುತ್ತಿದ್ದೇವೆ‌ ಆನೆ ದಾಳಿಯಿಂದ ಜೀವ ಹಾನಿಯಾದರೆ 15 ಲಕ್ಷಪರಿಹಾರ ನೀಡಲಾಗುತ್ತಿದೆ. ಆನೆ ದಾಳಿಯನ್ನು ತಡೆಯಲು ಪ್ರತಿ ಜಿಲ್ಲೆಗೆ ಸ್ಕ್ವಾಡ್ ರಚಿಸಲಾಗಿದೆ ಎಂದರು.

BJP Janasankalpa Yatre: ಜೀವರಾಜ್, ಪರವಾಗಿಲ್ವಪ್ಪಾ.. 2023ಕ್ಕೆ ದಾಟುತ್ತೀಯ: ಸಿಎಂ ಬೊಮ್ಮಾಯಿ ಮೆಚ್ಚುಗೆ

5 ಲಕ್ಷ ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ,ಪ್ರತಿ ಗ್ರಾಮದಲ್ಲಿ ಎರಡು ವಿವೇಕಾನಂದ ಯುವಕ ಸಂಘ ಕ್ಕೆ ಆರ್ಥಿಕ ಸಹಾಯ ನೀಡಿ, ಅವರ ಸ್ವಯಂಉದ್ಯೋಗಕ್ಕೆ ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿ ಗ್ರಾಮದಲ್ಲಿ ಕಂಬಾರ,ಕುಂಬಾರ, ಬಡಿಗೇರ, ಟೇಲರ್ ಗಳಿಗೆ ಅವರ ವೃತ್ತಿ ಕಾಯದ ಆಧಾರದ ಮೇಲೆ ಕಾಯಕ ಯೋಜನೆಯ ಮೂಲಕ ಸಾಲ ನೀಡಲಾಗುತ್ತದೆ. ಸರ್ಕಾರ ಹಾಗು ಜನರು ಶ್ರೀಮಂತ ರಾಗಬೇಕು. ಜನರ ಬಳಿ ಹಣ ಇದ್ದರೆ ಮಾತ್ರ ಸರ್ಕಾರ ಶ್ರೀಮಂತ ಆಗುತ್ತದೆ.  ದುಡಿಮೆಯೇ ದೊಡ್ಡಪ್ಪ ಎನ್ನುವ ಕಾಲವಿದು.ಜನರು ಆರ್ಥಿಕವಾಗಿ ಸಬಲರಾಗಬೇಕು ಎಂಬುದು ಸರ್ಕಾರದ ಸಂಕಲ್ಪ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಭೈರತಿ ಬಸವರಾಜ್, ಗೋವಿಂದ ಕಾರಜೋಳ, ಮಾಜಿ ಸಚಿವ ಡಿ.ಎನ್. ಜೀವರಾಜ್ ಹಾಗೂ ಚಿಕ್ಕಮಗಳೂರು ಜಿಲ್ಲೆ ಶಾಸಕರು ಸೇರಿ ಹಲವರು ಉಪಸ್ಥಿತರಿದ್ದರು.

click me!