38 ಸೀಟು ಬಂದಾಗ ನಿವೃತ್ತಿಗೆ ನಿರ್ಧರಿಸಿದ್ದೆ: ಎಚ್‌ಡಿಕೆ

By Web DeskFirst Published Mar 5, 2019, 9:14 AM IST
Highlights

38 ಸೀಟು ಬಂದಾಗ ನಿವೃತ್ತಿಗೆ ನಿರ್ಧರಿಸಿದ್ದೆ: ಎಚ್‌ಡಿಕೆ | ಮೈತ್ರಿ ಸರ್ಕಾರ ರಚನೆಗೆ ಕಾಂಗ್ರೆಸ್‌ ಆಹ್ವಾನ ನೀಡಿತು | ಮೈತ್ರಿ ಸರ್ಕಾರ ನಡೆಸುವುದು ಒಂದು ಸವಾಲು 

ಬೆಂಗಳೂರು (ಮಾ. 05):  ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಶಾಸಕರ ಸಂಖ್ಯೆ 38 ದಾಟದಿದ್ದಾಗ ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ್ದೆ. ಅಷ್ಟರಲ್ಲಿ ಮೈತ್ರಿ ಸರ್ಕಾರ ರಚನೆಗೆ ಕಾಂಗ್ರೆಸ್‌ ಆಹ್ವಾನ ನೀಡಿತು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಅಭಿನಂದನ್‌ ಹೆಸರಿದ್ದವರಿಗೆಲ್ಲಾ ಪಿಜ್ಜಾ ಹಟ್‌ನಿಂದ ಬಿಗ್ ಆಫರ್!

ಮೈತ್ರಿ ಸರ್ಕಾರ ನಡೆಸುವುದು ಒಂದು ಸವಾಲು. 12 ವರ್ಷಗಳ ಹಿಂದೆ ಮೈತ್ರಿ ಸರ್ಕಾರ ರಚನೆ ಮಾಡಿದಾಗ ನನಗಿದ್ದದ್ದು ದೇವೇಗೌಡರ ಮಗ ಎಂಬ ಅರ್ಹತೆ ಮಾತ್ರ. ಯಾರೋ ಹುಡುಗ ಸರ್ಕಾರ ರಚನೆ ಮಾಡಿದ್ದಾನೆ ಎಂದು ನಾಡಿನ ಜನರು ಅನುಮಾನದಿಂದಲೇ ನೋಡಿದ್ದರು. 20-20 ಅವಧಿಯಲ್ಲಿ ದಿನಗಳು ಕಡಿಮೆ ಆಗ್ತಿದೆ ಎಂಬ ಆತಂಕ ಇತ್ತು. ಈಗ ಗಡುವುಗಳ ಮಧ್ಯೆ ಆಡಳಿತ ನಡೆಸಬೇಕಿದೆ.

ಆಗಲೂ-ಈಗಲೂ ಕಾಯಕಕ್ಕೆ ನಾನು ಮಹತ್ವ ಕೊಡುವವನು. 2ನೇ ಬಾರಿಗೆ ಸರ್ಕಾರ ಮುನ್ನಡೆಸುವ ಮುನ್ನ ನಮ್ಮ ಪಕ್ಷಕ್ಕೆ ಕೇವಲ 38 ಶಾಸಕರ ಬಲ ದೊರೆತಾಗ ನಾನು ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ್ದೆ. ಅಷ್ಟರಲ್ಲಿ ಫೋನ್‌ ಬಂತು. ಮೈತ್ರಿ ಸರ್ಕಾರ ರಚನೆಗೆ ಕಾಂಗ್ರೆಸ್‌ ಆಹ್ವಾನಿಸಿತ್ತು ಎಂದು ಹೇಳಿದರು.

ರಫೇಲ್ ಡೀಲ್: ವಿಪಕ್ಷಗಳ ಟೀಕೆಗೆ ಮೋದಿ ಸಿಡಿಮಿಡಿ!

ನಾನು ಭವಿಷ್ಯ ಅಥವಾ ಜ್ಯೋತಿಷ್ಯದ ಹಿಂದೆ ಹೋಗುವವನಲ್ಲ. ಆದರೆ ನಮ್ಮ ಕುಟುಂಬ ವರ್ಗದವರು ನಂಬುತ್ತಾರೆ. ನಮ್ಮ ತಂದೆ ಗ್ರಾಮೀಣ ಭಾಗದಿಂದ ಬಂದವರು. ಅವರಿಗೆ ನಂಬಿಕೆ ಹೆಚ್ಚು. ಮೈಸೂರು ಅರಸರ ಜ್ಯೋತಿಷಿಯೊಬ್ಬರು ಹೇಳಿದ್ದು ಅವರಿಗೆ ಒಳ್ಳೆಯದಾಗಿದೆ. ಹಾಗಾಗಿ ಅವರು ನಂಬಿಕೊಂಡು ಮುಂದುವರಿಸಿದ್ದಾರೆ. ನಾನು ದೇವರನ್ನು ನಂಬುತ್ತೇನೆ. 38-37 ಸಂಖ್ಯಾಶಾಸ್ತ್ರವನ್ನು ನಂಬಲ್ಲ. ಆದರೆ ಪ್ರತಿ ಬಾರಿಯೂ ಗಡುವಿನಲ್ಲೇ ಸರ್ಕಾರ ನಡೆಸುವ ಪರಿಸ್ಥಿತಿ ಇದೆ ಎಂದು ಹೇಳಿದರು.

ನಮ್ಮ ಸರ್ಕಾರದ ಒಳ್ಳೆಯ ಕೆಲಸಗಳ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟುಪ್ರಚಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಹನ್ನೆರಡು ವರ್ಷಗಳ ಹಿಂದೆ ವ್ಯವಸ್ಥಿತವಾಗಿ ಜನತಾ ದರ್ಶನ ಆರಂಭಿಸಿದ್ದೆ. ಆದರೆ ಈಗ ಪ್ರತಿದಿನ ಜನತಾದರ್ಶನ ಮಾಡಲು ಆಗುತ್ತಿಲ್ಲ. ಆದರೆ ಈಗಲೂ ಜನ ಬರುತ್ತಿರುತ್ತಾರೆ. ಮಾನವೀಯತೆ ದೃಷ್ಟಿಯಿಂದ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇನೆ ಎಂದರು.

ನಮ್ಮ ಈಗಿನ ಜಿಲ್ಲಾ ಸಚಿವರು ಕೇವಲ ತಾಲೂಕು ಮಂತ್ರಿಗಳಾಗಿದ್ದಾರೆ. ತಮ್ಮ ಕ್ಷೇತ್ರಗಳಿಗೆ ಸೀಮಿತರಾಗಿದ್ದಾರೆ. ಇದರ ಬಗ್ಗೆ ಬೇಸರವಿದೆ. ಈಗ ಜನರ ಸೇವೆ ಮಾಡಿ ರಾಜಕೀಯಕ್ಕೆ ಬರುವವರ ಸಂಖ್ಯೆ ಹೆಚ್ಚಿಲ್ಲ. ಹಿಂದೆ ಅಬಕಾರಿ ಲಾಬಿ, ಶಿಕ್ಷಣ ಲಾಬಿ ಇದ್ದಂತೆ ಈಗ ಲ್ಯಾಂಡ್‌ ಡೆವಲಪರ್ಸ್‌ ಲಾಬಿ ಇದೆ. ಹಣ ಚೆಲ್ಲಿ ಗೆದ್ದು ಬರುವವರಿಂದ ನಾನು ಜನಸೇವೆ ನಿರೀಕ್ಷೆ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ನನ್ನಿಂದ ಪಕ್ಷಪಾತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆರೋಪಿಸಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ. ನಾನು ಎಂದೂ ಜಾತಿ ಆಧಾರದ ಮೇಲೆ ರಾಜಕಾರಣ ಮಾಡುವವನಲ್ಲ. ಅದು ನನಗೆ ಬೇಕಾಗಿಲ್ಲ. ಹಾಗೇನಾದರೂ ಜಾತಿ ಕಾರಣಕ್ಕೆ ಯಾವುದೇ ಅಧಿಕಾರಿಗಳಿಗೆ ತೊಂದರೆಯಾಗಿರುವುದನ್ನು ನನ್ನ ಗಮನಕ್ಕೆ ತಂದರೆ ತಕ್ಷಣ ಸರಿಪಡಿಸುವುದಾಗಿ ಪ್ರತಿಪಕ್ಷ ನಾಯಕರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದರು.

 

click me!