ವೀರಶೈವ- ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ, ಕಲಬುರಗಿ ವಿವಿಗೆ ಜಗಜ್ಯೋತಿ ಬಸವಣ್ಣ ಹಾಗೂ ಬಿಜಾಪುರ ವಿವಿಗೆ ಅಕ್ಕಮಹಾದೇವಿ ಹೆಸರಿಟ್ಟಹಿನ್ನೆಲೆಯಲ್ಲಿ ತಮಗೆ ಅಭಿನಂದನೆ ಸಲ್ಲಿಸಲು ಬುಧವಾರ ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರು: ವೀರಶೈವ- ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ರಾಜ್ಯ ಸರ್ಕಾರವು ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ, ಕಲಬುರಗಿ ವಿವಿಗೆ ಜಗಜ್ಯೋತಿ ಬಸವಣ್ಣ ಹಾಗೂ ಬಿಜಾಪುರ ವಿವಿಗೆ ಅಕ್ಕಮಹಾದೇವಿ ಹೆಸರಿಟ್ಟಹಿನ್ನೆಲೆಯಲ್ಲಿ ತಮಗೆ ಅಭಿನಂದನೆ ಸಲ್ಲಿಸಲು ಬುಧವಾರ ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೀರಶೈವವನ್ನು ಸ್ವತಂತ್ರ ಧರ್ಮವೆಂದು ಘೋಷಿಸಲು ರಾಜ್ಯ ಸರ್ಕಾರದ ಅಭ್ಯಂತರವಿಲ್ಲ. ಆದರೆ ಧರ್ಮ ಘೋಷಣೆ ಅಧಿಕಾರ ಕೇಂದ್ರ ಸರ್ಕಾರಕ್ಕಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸಿ ರಾಜ್ಯ ಸರ್ಕಾರದಿಂದ ಶಿಫಾರಸು ಮಾಡುವುದಾಗಿ ತಿಳಿಸಿದರು.
ರಾಜಕಾರಣಕ್ಕಾಗಿ ಯಾವುದೇ ತೀರ್ಮಾನಗಳನ್ನು ಕೈಗೊಂಡಿಲ್ಲ. ನಾಡಿನ ಶರಣರು ಪ್ರೇರಕ ಶಕ್ತಿಯಾಗಬೇಕು. ಪ್ರತಿ ದಿನ ಶರಣರನ್ನು ನೆನೆಯಬೇಕೆಂಬ ಉದ್ದೇಶದಿಂದ ವಿವಿಗಳಿಗೆ ಶರಣರ ಹೆಸರು ನಾಮಕರಣ ಮಾಡಲಾಗಿದೆ. ಈಗಾಗಲೇ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಸರ್ಕಾರದಿಂದ ಆಚರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕೂಡ ಸರ್ಕಾರದಿಂದ ಆಚರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.
ಬಸವಣ್ಣನರ ಬಗ್ಗೆ ಅಪಾರ ಗೌರವ ಮತ್ತು ಶ್ರದ್ಧೆ ಇರುವುದರಿಂದಲೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನವೇ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದೇನೆ. ಇದು ಯಾರ ಮೆಚ್ಚುಗೆಗೂ ಮಾಡಿಲ್ಲ. ನಾನೊಬ್ಬ ಬಸವ ಅನುಯಾಯಿ, ಬಸವ ತತ್ವಕ್ಕೆ ಬದ್ಧನಾಗಿದ್ದೇನೆ. ರಾಜಕೀಯ ಪ್ರವೇಶ ಕೂಡ ಸಮಾಜವಾದಿ ಪಕ್ಷದಿಂದಲೇ ಆಗಿದೆ ಎಂದು ಹೇಳಿದರು. ದೇಶದಲ್ಲಿನ ಜಾತಿ ವ್ಯವಸ್ಥೆಯನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಕಸುಬು ಆಧಾರದಲ್ಲಿ ರೂಪಿಸಿವೆ. ಇದು ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲು- ಕೀಳೆಂಬ ಭೇದಭಾವ ಹುಟ್ಟುಹಾಕಿದೆ. ಬಸವಣ್ಣನವರು ಶ್ರೇಣೀಕೃತ ವ್ಯವಸ್ಥೆಯ ನಾಶ ಮಾಡಿ ಸಮ ಸಮಾಜ, ವೈಚಾರಿಕತೆಯ ಕನಸು ಕಂಡಿದ್ದರು. ಕಂದಾಚಾರ, ಮೌಢ್ಯ, ಗೊಡ್ಡು ಸಂಪ್ರದಾಯಗಳನ್ನು ದೂರ ಮಾಡಬೇಕೆಂದು ಹೇಳಿದ್ದರು. ಈಗಲೂ ಕೆಲವು ಹಿತಾಸಕ್ತಿಗಳು ಜನರನ್ನು ಮತ್ತೆ ದಾಸರನ್ನಾಗಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿಮಾತನಾಡಿ, ಲಿಂಗಾಯತ ಧರ್ಮ ಹಿಂದುಳಿದಿದ್ದರೆ, ಅಪಚಾರವಾಗಿದ್ದರೆ ಅದು ಒಳ ಪಂಗಡಗಳಿಂದ ಮಾತ್ರ. ಹೀಗಾಗಿ ಎಲ್ಲ ಸಮಾಜದವನ್ನು ಒಂದುಗೂಡಿಸಬೇಕು. ಬಸವಣ್ಣನ ಸಮಾಜದವರಾಗಿ ಎಲ್ಲಾ ಸಮಾಜದವರನ್ನು ಒಗ್ಗೂಡಿಸುವ ಮತ್ತು ಸಮಾಜದಲ್ಲಿನ ಅಂಕುಡೊಂಕುಗಳನ್ನು ಸರಿಪಡಿಸುವ ಕೆಲಸವನ್ನು ಸ್ವಾಮೀಜಿಗಳು ಮಾಡಬೇಕು ಎಂದು ಮನವಿ ಮಾಡಿದರು. ಹಿಂದಿನ ಲಿಂಗಾಯತ ಮುಖ್ಯಮಂತ್ರಿ ಗಳು ಬಸವಣ್ಣನ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಹಾಕುವ ಧೈರ್ಯ ಮಾಡಿರಲಿಲ್ಲ. ಸಿದ್ದರಾಮಯ್ಯನವರು ಧೈರ್ಯ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅನೇಕ ಗಣ್ಯರು, ಸಚಿವರು ಹಾಜರಿದ್ದರು.