
ಬೆಂಗಳೂರು(ಜ.20): ಬಿಜೆಪಿಯಲ್ಲಿ ಭುಗಿಲೆದ್ದಿರುವ ಬ್ರಿಗೇಡ್ ಸಂಘರ್ಷವನ್ನು ಪರಿಹರಿಸುವ ನೆಪದಲ್ಲಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕರೆದಿದ್ದ ಸಂಧಾನ ಸಭೆ ವಿಫಲವಾಗಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನ್ನು' ಬೆಂಬಲಿಸುತ್ತಿರುವವರ ಪೈಕಿ 12 ಮಂದಿ ನಾಯಕರ ಜತೆ ನಿನ್ನೆ ಪಕ್ಷದ ಕಚೇರಿಯಲ್ಲಿ ಚರ್ಚೆ ನಡೆಸಲು ನಿರ್ಧರಿಸಿದ್ದರು. ಆದರೆ, ಬಿಎಸ್ವೈ ಕರೆದಿದ್ದ ಸಭೆಗೆ ಯಾರೂ ಆಗಮಿಸಲಿಲ್ಲ.
ನಿರ್ಮಲ್ಕುಮಾರ್ ಸುರಾನಾ, ಸೋಮಣ್ಣ ಬೇವಿನಮರದ, ಭಾನುಪ್ರಕಾಶ್, ಶಿವಯೋಗಿಸ್ವಾಮಿ, ಸಿದ್ಧರಾಜು ಸೇರಿದಂತೆ 12 ಮಂದಿ ನಾಯಕರ ಜತೆ ಯಡಿಯೂರಪ್ಪ ಸಂಧಾನ ಸಭೆ ಕರೆದಿದ್ದರಾದರೂ ಯಾರೂ ಸಭೆಗೆ ಹಾಜರಾಗಲಿಲ್ಲ. ಹೀಗಾಗಿ ಯಡಿಯೂರಪ್ಪ ಸಭೆಯನ್ನು ನಾಲ್ಕು ಗಂಟೆಗೆ ಮುಂದೂದ್ದರು. ಆದರೆ ಇದಾಗಿ ಐದು ಗಂಟೆ ಕಳೆದರೂ ಯಾರೂ ಸಭೆಗೆ ಬರದ ಕಾರಣಕ್ಕಾಗಿ ಕಚೇರಿಯಿಂದ ಹೊರ ನಡೆದಿದ್ದಾರೆ. ಆ ಮೂಲಕ ಪಕ್ಷದ ಬಹುತೇಕ ನಾಯಕರು ಯಡಿಯೂರಪ್ಪ ಅವರಿಗೆ ವಿರುದ್ಧವಾಗಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಅವರೇ ಕರೆದ ಸಂಧಾನಸಭೆಗೆ ಗೈರು ಹಾಜರಾಗುವ ಮೂಲಕ ಅವರ ನಾಯಕತ್ವದಲ್ಲಿ ತಮಗೆ ವಿಶ್ವಾಸವಿಲ್ಲ ಎಂದು ಹೇಳಿದಂತಾಗಿದೆ.
24 ಮಂದಿಯಲ್ಲಿ 12 ಮಂದಿಯನ್ನು ಮಾತ್ರ ಸಂಧಾನಸಭೆಗೆ ಕರೆದು, ಪದಾಧಿಕಾರಿಗಳ ಪಟ್ಟಿಯಲ್ಲಿ ಬದಲಾವಣೆಯಿಲ್ಲ, ಜಿಲ್ಲಾ ಸಮಿತಿಗಳ ಪಟ್ಟಿಯಲ್ಲಿ ಬದಲಾವಣೆ ಇಲ್ಲ ಎಂಬ ಧೋರಣೆಗೆ ಅಂಟಿಕೊಳ್ಳಲು ಯಡಿಯೂರಪ್ಪ ಮುಂದಾಗಿದ್ದರು. ಆದರೆ, ಪದಾಧಿಕಾರಿಗಳು, ಜಿಲ್ಲಾ ಸಮಿತಿಗಳಿಗೆ ನೇಮಕವಾದವರ ಪೈಕಿ ಬಹುತೇಕರು ಪಕ್ಷ ನಿಷ್ಟರೂ ಅಲ್ಲ, ಪಕ್ಷದಲ್ಲಿದ್ದವರೂ ಅಲ್ಲ. ಹೀಗಾಗಿ ಅದು ಬದಲಾವಣೆಯಾಗುವ ತನಕ ಯಡಿಯೂರಪ್ಪ ಅವರ ಜತೆ ಮಾತುಕತೆ ನಡೆಸುವುದರಲ್ಲಿ ಅರ್ಥವೇ ಇಲ್ಲ ಎಂಬುದು ಬ್ರಿಗೇಡ್ ಪ್ರಮುಖರ ಅಭಿಪ್ರಾಯ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.