
ಬೆಂಗಳೂರು : 2018-19ನೇ ಶೈಕ್ಷಣಿಕ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಅಡಿ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ಸರ್ಕಾರವು ನಿಯಮಾವಳಿ ಪ್ರಕಟಿಸಿದ್ದು, ಅನುದಾನಿತ ಶಾಲೆಗಳಲ್ಲಿನ ಅನುದಾನ ರಹಿತ ವಿಭಾಗದಲ್ಲಿ ಆರ್ಟಿಇ ಪ್ರವೇಶ ಪಡೆಯುವ ಮಕ್ಕಳ ಶುಲ್ಕವನ್ನು ಮರು ಪಾವತಿ ಮಾಡುವುದಿಲ್ಲ ಎಂಬ ನಿಯಮವನ್ನು ಜಾರಿಗೊಳಿಸಿದೆ.
ಈವರೆಗೆ ಅನುದಾನಿತ ಶಾಲೆಗಳ ಅನುದಾನ ರಹಿತ ವಿಭಾಗದ ಆರ್ಟಿಇ ಸೀಟುಗಳ ಹಂಚಿಕೆ ನಿಯಮವೇ ಇರಲಿಲ್ಲ. ಇದೇ ಮೊದಲ ಬಾರಿಗೆ ಅನುದಾನಿತ ಶಾಲೆಗಳ ಈ ವಿಭಾಗದಲ್ಲೂ ಆರ್ಟಿಇ ಕಾಯ್ದೆಯಡಿ ಸೀಟುಗಳ ಕಡ್ಡಾಯ ಹಂಚಿಕೆಗೆ ಸರ್ಕಾರ ನಿಯಮ ರೂಪಿಸಿದೆ.
ನಿಯಮದಲ್ಲಿ ಏನಿದೆ?: ಅನುದಾನಿತ ಶಾಲೆಗಳಲ್ಲಿ 1ರಿಂದ 8ನೇ ತರಗತಿವರೆಗೆ ಅನಾನುಕೂಲ ಪರಿಸ್ಥಿತಿಯಲ್ಲಿರುವ ಮತ್ತು ದುರ್ಬಲ ವರ್ಗದ ಮಕ್ಕಳಿಗೆ ಸೀಟುಗಳನ್ನು ಮೀಸಲಿಡಲಾಗಿದೆ. ಈ ಮೂಲಕ ಅನುದಾನಿತ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲು ಸರ್ಕಾರ ಮುಂದಾಗಿದೆ. ಒಂದು ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಹಾಗೂ ಅನಾನನುಕೂಲ ಪರಿಸ್ಥಿತಿಯಲ್ಲಿರುವ ವಿಶೇಷ ಪ್ರವರ್ಗದ ಮಕ್ಕಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಲಾಗುತ್ತದೆ. 2015ರ ಏಪ್ರಿಲ್ 1ರ ಬಳಿಕ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು, ಅನಾಥ ಮಗು, ಎಚ್ಐವಿ ಬಾಧಿತ ಹಾಗೂ ಸೋಂಕಿತ ಮಗು, ಮಂಗಳಾಮುಖಿ ಮಗು, ವಿಶೇಷ ಅಗತ್ಯತೆಯುಳ್ಳ ಮಗು, ವಲಸೆ ಮತ್ತು ಬೀದಿ ಮಕ್ಕಳು ವಿಶೇಷ ಪ್ರವರ್ಗದಡಿ ಸೇರಲಿದ್ದಾರೆ.
ಬಿಬಿಎಂಪಿಗೆ ಹೊಂದಿಕೊಂಡ ಗ್ರಾಮಗಳಲ್ಲಿ ವಾಸಿ ಸುವ ಪೋಷಕರು, ಗ್ರಾಮಕ್ಕೆ ಹೊಂದಿಕೊಂಡ ವಾರ್ಡ್ ಗಳಲ್ಲಿರುವ ಶಾಲೆಗಳಲ್ಲಿ 2ನೇ ಆದ್ಯತೆಯಾಗಿ ಪರಿಗಣಿಸಲಾಗುತ್ತದೆ. ಮಗು ಮತ್ತು ಪೋಷಕರಲ್ಲಿ ಒಬ್ಬರ ಆಧಾರ್ ನಂಬರ್ ಸಲ್ಲಿಕೆ ಕಡ್ಡಾಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.