ಬಿಎಸ್‌ವೈ ಸಮಾನಕ್ಕೆ ನಾನು ಬೆಳೆಯಲು ಸಾಧ್ಯವೇ ಇಲ್ಲ : ಸವದಿ

By Kannadaprabha NewsFirst Published Aug 28, 2019, 8:39 AM IST
Highlights

ಯಡಿಯೂರಪ್ಪ ಅವರ ಸಮಾನಕ್ಕೆ ನಾನು ಎಂದಿಗೂ ಬೆಳೆಯಲು ಸಾಧ್ಯವೆ ಇಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ. 

ಬೆಂಗಳೂರು [ಆ.28]:  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ನಮ್ಮ ತಂದೆ ಸಮಾನರು. ಅವರ ಸಮಾನವಾಗಿ ಬೆಳೆಯುವುದಕ್ಕೆ ಸಾಧ್ಯವೇ ಇಲ್ಲ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಮಂಗಳವಾರ ನಗರದಲ್ಲಿ ಯೋಗ ಗುರು ವಚನಾನಂದ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನಮ್ಮ ನಾಯಕರು. ಅವರಿಗೆ ಪರ್ಯಾಯವಾಗಿ ಬೆಳೆಯಲು ಸಾಧ್ಯವೇ ಇಲ್ಲ ಎನ್ನುವ ಮೂಲಕ ಯಡಿಯೂರಪ್ಪಗೆ ನಾನು ಪರ್ಯಾಯ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿಕ್ಲಿಕ್ಕಿಸಿ

ಮುಂಬರುವ ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಬೇಕೇ ಅಥವಾ ವಿಧಾನ ಪರಿಷತ್‌ ಸದಸ್ಯನನ್ನಾಗಿ ಆಯ್ಕೆ ಮಾಡಲಾಗುತ್ತದೆಯೊ ಎನ್ನುವ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಸಚಿವ ಸ್ಥಾನ ನನಗೆ ಬಯಸದೇ ಬಂದ ಭಾಗ್ಯ. ನಾನು ಶಾಸಕನಲ್ಲದಿದ್ದರೂ ಪಕ್ಷ ನನಗೆ ಸಚಿವ ಸ್ಥಾನ ನೀಡಿದೆ. ಅದೇ ಬಿಜೆಪಿಯ ವಿಭಿನ್ನ ಚಿಂತನೆ. ಜನ ಕೈ ಬಿಟ್ಟರೂ ಪಕ್ಷ ಕೈ ಬಿಡಲಿಲ್ಲ ಎಂದರು.

ಸಹಜವಾಗಿ ಎಲ್ಲರಿಗೂ ಮಂತ್ರಿಗಳಾಗಬೇಕು ಅನ್ನುವ ಆಸೆ ಇರುತ್ತದೆ. ರಾಜಕಾರಣಿಗಳು ಸನ್ಯಾಸಿಗಳಲ್ಲ. ಇನ್ನು ಸಚಿವ ಸ್ಥಾನಗಳು ಖಾಲಿ ಇದ್ದು, ಅಸಮಾಧಾನಗೊಂಡವರಿಗೆ ಇನ್ನು ಕೂಡ ಅವಕಾಶ ಇದೆ. ಅಸಮಾಧಾನಪಡಿಸುವ ಕೆಲಸ ಮಾಡುತ್ತದೆ. ಪಕ್ಷದ ವರಿಷ್ಠರು ಬಹಳ ಬುದ್ಧಿವಂತರಿದ್ದಾರೆ. ಮೂರು ಜನ ಉಪಮುಖ್ಯಮಂತ್ರಿಗಳು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶಕ್ತಿ ತುಂಬುತ್ತೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸಲು ಶ್ರಮಿಸುತ್ತೇವೆ ಎಂದರು.

click me!