ಜಗದೀಶ್ ಶೆಟ್ಟರ್ ರಾಜಿನಾಮೆ ಕೊಡ್ತಾರಂತೆ! ಈಶ್ವರಪ್ಪರಿಗೆ 21 ಟಿಕೆಟ್ ಬೇಕಂತೆ!

By Suvarna Web DeskFirst Published Feb 27, 2018, 4:22 PM IST
Highlights

ಯಾವುದೇ ಕಾರಣಕ್ಕೂ ಕೂಡ ವಿಜಯಪುರದಲ್ಲಿ ಕೇಂದ್ರದ ಮಾಜಿ  ಸಚಿವ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಮರಳಿ ಬಿಜೆಪಿಗೆ  ಸೇರ್ಪಡೆ ಮಾಡಿಕೊಳ್ಳಬಾರದು ಎಂದು ನೇರವಾಗಿ ಹೋಗಿ ಯಡಿಯೂರಪ್ಪ ಹಾಗೂ ಮುರಳೀಧರ ರಾವ್‌ಗೆ ಹೇಳಿದ್ದಾರಂತೆ  ಜಗದೀಶ್ ಶೆಟ್ಟರ್.

ಬೆಂಗಳೂರು (ಫೆ. 27):  ಯಾವುದೇ ಕಾರಣಕ್ಕೂ ಕೂಡ ವಿಜಯಪುರದಲ್ಲಿ ಕೇಂದ್ರದ ಮಾಜಿ  ಸಚಿವ ಬಸನಗೌಡ ಪಾಟೀಲ್ ಯತ್ನಾಳ್‌ರನ್ನು ಮರಳಿ ಬಿಜೆಪಿಗೆ  ಸೇರ್ಪಡೆ ಮಾಡಿಕೊಳ್ಳಬಾರದು ಎಂದು ನೇರವಾಗಿ ಹೋಗಿ ಯಡಿಯೂರಪ್ಪ ಹಾಗೂ ಮುರಳೀಧರ ರಾವ್‌ಗೆ ಹೇಳಿದ್ದಾರಂತೆ  ಜಗದೀಶ್ ಶೆಟ್ಟರ್.

ಜಗದೀಶ್ ಶೆಟ್ಟರ್ ರಾಜಿನಾಮೆ ಕೊಡ್ತಾರಂತೆ!

ಉತ್ತರ ಕರ್ನಾಟಕದ ಆರ್‌ಎಸ್‌ಎಸ್  ನಾಯಕರು ಕೊಟ್ಟಿರುವ ಟಾನಿಕ್‌ನಿಂದ ಶೆಟ್ಟರ್‌ಗೆ ಸಾಕಷ್ಟು ಧೈರ್ಯ  ಬಂದಿರುವ ಹಾಗೆ ಕಾಣುತ್ತಿದೆ ಎಂದು ಬಿಜೆಪಿ ದಿಲ್ಲಿ ನಾಯಕರೇ ಮಾತನಾಡಿಕೊಳ್ಳುತ್ತಿದ್ದಾರೆ. ಉತ್ತರ ಕರ್ನಾಟಕದ ಸಂಘದ ಹಿರಿಯ ಪ್ರಚಾರಕರಾದ ಗೋಪಾಲ್ ಮತ್ತಿತರರು ಯಾವುದೇ  ಕಾರಣಕ್ಕೂ ಯತ್ನಾಳ್ ವಾಪಸ್ ಬರಬಾರದು ಎಂದು ದಿಲ್ಲಿ  ನಾಯಕರಿಗೂ ಹೇಳಿಕಳುಹಿಸುತ್ತಿದ್ದಾರೆ. ಸಂಘ ಮತ್ತು ಯತ್ನಾಳ್'ರ ಜಗಳ ತುಂಬಾ ಹಳೆಯದು ಬಿಡಿ. ‘ನಾನು ಬಂದರೆ
ಪಂಚಮಸಾಲಿ ಮತಗಳು ಸಾಲಿಡ್ ಆಗುತ್ತವೆ’ ಎಂದು ಯತ್ನಾಳ್  ದಿಲ್ಲಿ ನಾಯಕರ ತಲೆಗೆ ತುಂಬಿದ್ದಾರೆ. ಅಂದ ಹಾಗೆ ಹಿಂದೆ ಕಾಂಗ್ರೆಸ್ಸನ್ನು ಸೋಲಿಸಲು ಒಳಜಗಳವೇ ಸಾಕು ಎಂಬ ಮಾತು  ಬಹಳ ಚಾಲ್ತಿಯಲ್ಲಿತ್ತು. ಕರ್ನಾಟಕದ ಬಿಜೆಪಿ ನಾಯಕರು  ಇದನ್ನು ಬಹುಬೇಗ ಕಲಿತುಕೊಂಡಿದ್ದಾರಾ?


ಈಶ್ವರಪ್ಪಗೆ 21 ಟಿಕೆಟ್ ಬೇಕಂತೆ
ಶಿವಮೊಗ್ಗದಲ್ಲಿ ರುದ್ರೇಗೌಡರನ್ನು ಕೊನೆಯ ಗಳಿಗೆಯಲ್ಲಿ ಬದಿಗೆ  ಸರಿಸಿ ಈಶ್ವರಪ್ಪ ಅವರಿಗೆ ಟಿಕೆಟ್ ಕೊಡುವ ಸಂಭವ ಹೆಚ್ಚು ಎಂಬುದು ದಿಲ್ಲಿಯ ಪಿಸುಮಾತು. ಹೈಕಮಾಂಡ್ ನಾಯಕರು  ಹೇಳುವ ಪ್ರಕಾರ ಅಮಿತ್ ಶಾ ಅವರಿಗೂ ಈಶ್ವರಪ್ಪಗೇ ಟಿಕೆಟ್  ಸಿಗಬೇಕು ಎಂದು ಮನವರಿಕೆಯಾಗಿದೆಯಂತೆ. ಈ ನಡುವೆ, ವಿರೂಪಾಕ್ಷಪ್ಪ ಅವರನ್ನು ದೆಹಲಿಗೆ ಕಳುಹಿಸಿರುವ ಈಶ್ವರಪ್ಪ, 21  ಹಿಂದುಳಿದ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್  ಮುಂದಿಟ್ಟಿದ್ದು, ಜಿಲ್ಲೆಗೆ ಕನಿಷ್ಠ ಒಬ್ಬ ಹಿಂದುಳಿದ ವರ್ಗದ
ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂದು ಹೊಸ ಬೇಡಿಕೆ  ಇಡತೊಡಗಿದ್ದಾರೆ. ಇದನ್ನು ಸುತರಾಂ ತಳ್ಳಿಹಾಕಿರುವ ಅಮಿತ್  ಶಾ, ‘ಯಾರು ಗೆಲ್ಲಬಲ್ಲರೋ ಅವರಿಗೇ ಟಿಕೆಟ್. ಈಶ್ವರಪ್ಪ  ಒಬ್ಬರಿಗೆ ಕೊಡಬಹುದು. ಆದರೆ ಉಳಿದ ಬೇಡಿಕೆಗಳನ್ನು
ಹಚ್ಚಿಕೊಳ್ಳಲೇಬೇಡಿ’ ಎಂದು ಉಸ್ತುವಾರಿಗಳಿಗೆ ಸೂಚನೆ  ಕೊಟ್ಟಿದ್ದಾರೆ. ಅಂದ ಹಾಗೆ ಈಶ್ವರಪ್ಪ ಕಳುಹಿಸಿರುವ 21 ಅಭ್ಯರ್ಥಿಗಳಲ್ಲಿ 12  ಕುರುಬ ಸಮಾಜದ ಅಭ್ಯರ್ಥಿಗಳ  ಹೆಸರುಗಳಿವೆಯಂತೆ.  

-ಪ್ರಶಾಂತ್ ನಾತು

ರಾಜಕೀಯದ ಬಗ್ಗೆ ಹೆಚ್ಚಿನ ಮಾಹಿತಿಗೆ ಇಂಡಿಯಾ ಗೇಟ್ ಕ್ಲಿಕ್  ಮಾಡಿ 

click me!