
ಬೆಂಗಳೂರು(ಮೇ.11): ನಿನ್ನೆಯಷ್ಟೆ ಎಸಿಬಿ ಅಧಿಕಾರಿಗಳು ರಾಮನಗರ ತಹಶೀಲ್ದಾರ್ ರಘುಮೂರ್ತಿ ಮನೆ ಮೇಲೆ ದಾಳಿ ನಡೆಸಿ ಬಂಡವಾಳ ಬಯಲು ಮಾಡಿದ್ದರು. ಇದೀಗ ಈತನ ಮತ್ತಷ್ಟು ಈತನ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಮಾಡಿದ್ದಾನೆ. ನಕಲಿ ದಾಖಲೆ ಮತ್ತು ಖಾತೆಗಳಿಗೆ ಹೊಸ ನಂಬರ್ಗಳನ್ನು ಸೃಷ್ಟಿಸಿ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿ ಕೊಟ್ಟಿರುವ ಪ್ರಕರಣ ಕೂಡ ಬಹಿರಂಗವಾಗಿದೆ.
ಏನಿದು ಈ ವಂಚನೆ ಪ್ರಕರಣ?
ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಬಿ.ಎಂ.ಕಾವಲ್ ಗ್ರಾಮದ ಸರ್ವೆ ನಂಬರ್ 3ರಲ್ಲಿ 19 ಎಕರೆ 15 ಗುಂಟೆ ಸರ್ಕಾರಿ ಬಿ ಖರಾಬು ಜಮೀನಿದೆ. ಇದರಲ್ಲಿ ರಘುಮೂರ್ತಿ 17 ಎಕರೆ ಜಾಗಕ್ಕೆ ಅಕ್ರಮವಾಗಿ ಪಹಣಿ ಸೃಷ್ಟಿಸಿದ್ದು, ಸರ್ಕಾರಕ್ಕೆ ಬರೋಬ್ಬರಿ 17 ಕೋಟಿ 43 ಲಕ್ಷ ರೂಪಾಯಿ ನಷ್ಟ ಉಂಟು ಮಾಡಿದ್ದಾರೆಂದು ಭೂ ದಾಖಲೆಗಳ ಜಂಟಿ ನಿರ್ದೇಶಕ ಜಯಪ್ರಕಾಶ್ ವರದಿ ಕೊಟ್ಟಿದ್ದಾರೆ. ಬಿ.ಎಂ. ಕಾವಲ್ ಪಕ್ಕದ ಜಮೀನು ಮಂಜೂರು ಮಾಡ್ಬೇಕು ಅಂತ 7 ಮಂದಿ ಖಾಸಗಿ ವ್ಯಕ್ತಿಗಳು ತಾಲ್ಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪೋಡಿ ಮಾಡಿ ಮಂಜೂರು ಮಾಡಬೇಕಿತ್ತು. ಆದರೆ, ತಹಶೀಲ್ದಾರ್ ರಘುಮೂರ್ತಿ ಅರ್ಜಿದಾರರೊಂದಿಗೆ ಶಾಮೀಲಾಗಿ ಸಲೀಸಾಗಿ ನಕ್ಷೆ ಬದಲಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಖಾತೆ ಮಾಡಿಕೊಟ್ಟಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿ ಆಧಾರದ ಮೇಲೆ ರಘುಮೂರ್ತಿಯನ್ನು ಅಮಾನತು ಮಾಡಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ. ಶಂಕರ್ ಸೂಚಿಸಿದ್ದಾರೆ. ಆದ್ರೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಅಮಾನತು ಮಾಡದೇ, ರಾಮನಗರಕ್ಕೆ ವರ್ಗಾವಣೆ ಮಾಡಿ ಕೈತೊಳೆದುಕೊಂಡಿದ್ದಾರೆ. ರಘುಮೂರ್ತಿ ಸೇರಿದಂತೆ ಇನ್ನಿತರೆ ಅಧಿಕಾರಿಗಳ ವಿರುದ್ಧ ಸಿಐಡಿ ತನಿಖೆ ನಡೆಸಬೇಕೆಂದು ವರದಿ ನೀಡಿದ್ರೂ, ಸರ್ಕಾರ ಮಾತ್ರ ಕ್ರಮಕೈಗೊಂಡಿಲ್ಲ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.