ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಟಿಕೆಟ್ ನೀಡಲು ಇಟಿಎಂ ಪೂರೈಸುತ್ತಿದ್ದ ಕಂಪನಿ ದಿವಾಳಿಯಾಗಿದ್ದು ಈ ನಿಟ್ಟಿನಲ್ಲಿ ಕಾಗದದ ಟಿಕೆಟ್ ನೀಡಲಾಗುತ್ತಿದೆ.
ಬೆಂಗಳೂರು : ಟ್ರೈಮ್ಯಾಕ್ಸ್ ಐಟಿ ಇನ್ಫಾಸ್ಟ್ರಕ್ಚರ್ ಅಂಡ್ ಸರ್ವಿಸ್ ಕಂಪನಿ ಆರ್ಥಿಕ ದಿವಾಳಿಯಾಗಿರುವುದರಿಂದ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ)ದ ‘ಚತುರ ಸಾರಿಗೆ ವ್ಯವಸ್ಥೆ(ಐಟಿಎಸ್)’ ಮೇಲೆ ಪರಿಣಾಮ ಬೀರಿದ್ದು, ಕೆಲ ಬಸ್ಗಳಲ್ಲಿ ಪ್ರಯಾಣಿಕರಿಗೆ ಇಟಿಎಂ ಟಿಕೆಟ್ ಬದಲು ಹಿಂದಿನ ಕಾಗದದ ಟಿಕೆಟ್ ನೀಡಲಾಗುತ್ತಿದೆ.
ಟ್ರೈಮ್ಯಾಕ್ಸ್ ಕಂಪನಿ 2016 ರಲ್ಲಿ ನಿಗಮದ ಐಟಿಎಸ್ ನಿರ್ವಹಣೆ ಗುತ್ತಿಗೆ ಪಡೆದಿತ್ತು. ಈ ಪ್ರಕಾರ ಬಸ್ಗಳಲ್ಲಿ ಅಳವಡಿಸುವ ಜಿಪಿಎಸ್ ಹಾಗೂ ಟಿಕೆಟ್ ನೀಡುವ ಇಟಿಎಂ ಮಿಷನ್ಗಳ ನಿರ್ವಹಣೆ ಮಾಡು ತ್ತಿತ್ತು. ಕಂಪನಿ 10 ಸಾವಿರ ಇಟಿಎಂ ಮಿಷನ್ಗಳನ್ನು ಬಿಎಂಟಿಸಿಗೆ ಪೂರೈಸಿದ್ದು, ನಿತ್ಯ 6 ಸಾವಿರದಿಂದ 6500 ಇಟಿಎಂ ಮಿಷನ್ಗಳನ್ನು ಬಳಕೆ ಮಾಡಲಾಗುತ್ತಿದೆ. 10 ಸಾವಿರ ಇಟಿಎಂ ಮಿಷನ್ಗಳ ಪೈಕಿ ಸುಮಾರು ೩ ಸಾವಿರ ಮಿಷನ್ಗಳು ರಿಪೇರಿಗೆ ಬಂದಿವೆ. ಇದರಿಂದ ಐಟಿಎಸ್ ಸೇವೆಯಲ್ಲಿ ಕೊಂಚ ಸಮಸ್ಯೆಯಾಗಿದೆ. ಕೆಲ ಮಾರ್ಗಗಳಲ್ಲಿ ಇಟಿಎಂ ಟಿಕೆಟ್ ಬದಲು ಹಿಂದಿನ ಕಾಗದದ ಟಿಕೆಟ್ ನೀಡಲಾಗುತ್ತಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಐಟಿಎಸ್ ನಿರ್ವಹಣೆ ಗುತ್ತಿಗೆ ಪಡೆದಿದ್ದ ಟ್ರೈಮ್ಯಾಕ್ಸ್ ಕಂಪನಿ ‘ವೆರಿಪೋನ್’ ಎಂಬ ಕಂಪನಿಗೆ ಇಟಿಎಂ ಮಿಷನ್ ನಿರ್ವಹಣೆಯ ಉಪಗುತ್ತಿಗೆ ನೀಡಿತ್ತು. ಈಗಾಗಲೇ ಆ ಕಂಪನಿಯೊಂದಿಗೆ ಸಂಪರ್ಕ ಸಾಧಿಸಿದ್ದು, ಸೇವೆ ಮುಂದುವರಿಸುವಂತೆ ಹೇಳಲಾ ಗಿದೆ. ಟ್ರೈಮ್ಯಾಕ್ಸ್ ಕಂಪನಿ ದಿವಾಳಿಯಾದ ಹಿನ್ನೆಲೆ ಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಕಂಪನಿಯ ವ್ಯವಹಾರ ನೋಡಿಕೊಳ್ಳಲು ಅಧಿಕಾರಿಯೊಬ್ಬರನ್ನು ನೇಮಿಸಿದ್ದು, ಬಿಎಂಟಿಸಿಯು ಆ ಅಧಿಕಾರಿಯೊಂದಿಗೆ ನಿರಂತರ ಪತ್ರ ವ್ಯವಹಾರ ನಡೆಸುತ್ತಿದೆ ಎಂದರು.
ಇಟಿಎಂ ರಿಪೇರಿಗೆ ಕಂಪನಿ ಒಪ್ಪಿದೆ: ಇಟಿಎಂ ಮಿಷನ್ ನಿರ್ವಹಣೆಗೆ ಉಪಗುತ್ತಿಗೆ ಪಡೆದಿದ್ದ ವೆರಿಫೋನ್ ಕಂಪನಿಯೊಂದಿಗೆ ಸಂಪರ್ಕ ಸಾಧಿಸಿದ್ದು, ರಿಪೇರಿಯಾದ ಇಟಿಎಂ ಮಿಷನ್ಗಳನ್ನು ಸರಿಪಡಿಸಲು ಒಪ್ಪಿಸಲಾಗಿದೆ. ಅದಕ್ಕಾಗಿ ಸ್ಪಲ್ಪ ಹಣವನ್ನು ನೀಡಲಾಗಿದೆ. ಹಾಗಾಗಿ ಶೀಘ್ರದಲ್ಲೇ ಇಟಿಎಂ ಸಮಸ್ಯೆ ಪರಿಹಾರವಾಗಲಿದೆ. ಅಲ್ಲದೆ, ಟ್ರೈಮ್ಯಾಕ್ಸ್ ಕಂಪನಿಯೊಂದಿಗಿನ ಒಪ್ಪಂದ ರದ್ದುಪಡಿಸಲು ನಿರ್ಧರಿಸಿದ್ದು, ಶೀಘ್ರದಲ್ಲೇ ಐಟಿಎಸ್ ನಿರ್ವಹಣೆಗೆ ಟೆಂಡರ್ ಆಹ್ವಾನಿಸುವುದಾಗಿ ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.
ನಿಗಮಕ್ಕೆ ನಷ್ಟವಿಲ್ಲ: ಟ್ರೈಮ್ಯಾಕ್ಸ್ ಕಂಪನಿ ದಿವಾಳಿ ಯಾಗಿರುವುದರಿಂದ ನಿಗಮಕ್ಕೆ ಯಾವುದೇ ನಷ್ಟವಿಲ್ಲ. ಇಟಿಎಂ ಮಿಷನ್ ಸೇರಿದಂತೆ ಐಟಿಎಸ್ ಸೇವೆಗೆ ಅಗ ತ್ಯವಿದ್ದ ಉಪಕರಣಗಳನ್ನು ಆ ಕಂಪನಿಯೇ ಪೂರೈಕೆ ಮಾಡಿತ್ತು. ಹಾಗಾಗಿ ಪ್ರತಿ ತಿಂಗಳು ಕಂಪನಿಗೆ ಸುಮಾರು 1 ಕೋಟಿ ರು. ಪಾವತಿಸಲಾಗುತ್ತಿತ್ತು. ಆರು ತಿಂಗಳ ಹಿಂದೆಯೇ ಕೆಲ ಸಂಸ್ಥೆಗಳು ಈ ಕಂಪನಿಯ ಬಗ್ಗೆ ಎಚ್ಚರಿಕೆ ನೀಡಿದ್ದರಿಂದ ಕಳೆದ 4- 5 ತಿಂಗಳಿಂದ ಹಣ ಬಿಡುಗಡೆ ಮಾಡಿರಲಿಲ್ಲ. ಹಾಗಾಗಿ ನಿಗಮಕ್ಕೆ ಯಾವುದೇ ನಷ್ಟವಾಗುವುದಿಲ್ಲ ಎಂದು ಹೇಳಿದರು.