ಜಮ್ಮು-ಶ್ರೀನಗರ ಹೆದ್ದಾರಿ ವಾರದಲ್ಲೆರಡು ದಿನ ಸಾರ್ವಜನರಿಗೆ ಬಂದ್| ಸರ್ಕಾರದ ಆದೇಶಕ್ಕೆ ಭಾರೀ ಜನಾಕ್ರೋಶ| ಮೇ ಅಂತ್ಯದ ತನಕ ವಾರದಲ್ಲೆರಡು ದಿನ ಬಂದ್
ಶ್ರೀನಗರ(ಏ.05] 40 ಯೋಧರ ಬಲಿ ಪಡೆದ ಪುಲ್ವಾಮಾ ದಾಳಿ ಮತ್ತು ಇತ್ತೀಚೆಗೆ ಜಮ್ಮು ಮತ್ತು ಶ್ರೀನಗರ ಹೆದ್ದಾರಿಯಲ್ಲಿ ಪುಲ್ವಾಮಾ ಮಾದರಿಯಲ್ಲೇ ನಡೆದ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಜಮ್ಮು ಮತ್ತು ಕಾಶ್ಮೀರ ಸರ್ಕಾರ, ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ವಾರದಲ್ಲಿ 2 ದಿನ ಸಾರ್ವಜನಿಕರ ಬಳಕೆಗೆ ನಿಷೇಧಿಸಿ ಆದೇಶ ಹೊರಡಿಸಿದೆ.
ಲೋಕಸಭಾ ಚುನಾವಣಾ ಪ್ರಕ್ರಿಯೆಗಳು ಮುಕ್ತಾಯವಾಗುವ ಮೇ 31ರವರೆಗೆ ಪ್ರತಿ ಭಾನುವಾರ ಮತ್ತು ಬುಧವಾರ ಬೆಳಗ್ಗೆ 4ರಿಂದ ಸಂಜೆ 5 ಗಂಟೆವರೆಗೆ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಒಂದೊಮ್ಮೆ ನಾಗರಿಕರಿಗೆ ತೀರಾ ಅನಿವಾರ್ಯವಾಗಿ ಪ್ರಯಾಣ ಬೆಳೆಸಬೇಕಾಗಿ ಬಂದಲ್ಲಿ ಪೊಲೀಸರು ನೆರವಿಗೆ ಬರಲಿದ್ದಾರೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಚುನಾವಣೆ ವೇಳೆ ಸೇನಾಪಡೆಗಳ ಸಂಚಾರ ಹೆಚ್ಚಿರುತ್ತದೆ. ಈ ವೇಳೆ ಆತ್ಮಾಹುತಿ ದಾಳಿಕೋರರು ಮತ್ತೆ ದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ ಸರ್ಕಾರ ಕ್ರಮಕ್ಕೆ ರಾಜಕೀಯ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಜನರ ಹಕ್ಕು ಕಿತ್ತುಕೊಳ್ಳುವ ಆದೇಶ: ಪಾರೂಕ್
ಕಾರ್ಗಿಲ್ ಯುದ್ಧವಾದ ಸಂದರ್ಭದಲ್ಲಿಯೂ ಜನರ ಪ್ರಯಾಣಕ್ಕೆ ಸಾಕಷ್ಟುಅನುಕೂಲಕರವಾದ ಜಮ್ಮು ಕಾಶ್ಮೀರ ಹೆದ್ದಾರಿ ಬಂದ್ ಮಾಡಲಾಗಿರಲಿಲ್ಲ. ಆದರೆ ಸರ್ಕಾರ ಈಗ ಬಂದ್ಗೆ ಆದೇಶ ನೀಡಿ, ಹೆದ್ದಾರಿ ಸುಗಮ ಸಂಚಾರಕ್ಕೇ ಬ್ರೇಕ್ ಹಾಕಲು ಮುಂದಾಗಿದೆ. ತನ್ಮೂಲಕ ಜನತೆಯ ಮೂಲಭೂತ ಹಕ್ಕನ್ನೇ ಕಿತ್ತುಕೊಳ್ಳಲು ಹೊರಟಿದೆ.
- ಫಾರೂಕ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ
ಭದ್ರತಾ ಪಡೆ ವಿಶೇಷ ರೈಲಲ್ಲಿ ಪ್ರಯಾಣಿಸಲಿ
ಜನಸ್ನೇಹಿ ಆದೇಶ ಇದಲ್ಲ. ಇದರಿಂದಾಗಿ ಅನಾರೋಗ್ಯದಲ್ಲಿರುವವರಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆಲ್ಲಾ ತೊಂದರೆಯಾಗಲಿದೆ. ಭದ್ರತಾ ಪಡೆಗಳ ಪ್ರಯಾಣಕ್ಕಾಗಿ ಈ ಕ್ರಮ ಸರಿಯಲ್ಲ. ಇದಕ್ಕೆ ವಿಶೇಷ ರೈಲು ಬಳಕೆ ಮಾಡಿಕೊಳ್ಳುವುದು ಉತ್ತಮ. ಈ ಕಾರಣಕ್ಕಾಗಿ ಸಾರ್ವಜನಿಕರಿಗೆ ತೊಂದರೆ ಏಕೆ?
- ಓಮರ್ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ