
ಬೆಂಗಳೂರು: ಶೋಷಿತ ಹಾಗೂ ಹಿಂದುಳಿದ ಶರಣ ಸಮುದಾಯಗಳ ಹಿತದೃಷ್ಟಿಯಿಂದ ಪ್ರತ್ಯೇಕ ವೀರಶೈವ-ಲಿಂಗಾಯತ ಧರ್ಮದ ಬದಲು ಬಸವ ಧರ್ಮವೆಂದು ಘೋಷಣೆಯಾಗಬೇಕು ಎಂದು ಬಸವ ಧರ್ಮದ ಪ್ರತಿಪಾದಕ ಸಂಘಟನೆ ವೇದಿಕೆ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಸಂಚಾಲಕ ಶಂಕರ ಮುನವಳ್ಳಿ, ಲಿಂಗಾಯತ ಜಾತಿಯಲ್ಲಿ ಬರುವ ಪಂಚಮಸಾಲಿ, ಬಣಜಿಗ, ಸಾಧರು, ಗಾಣಿಗ, ಲಿಂಗಾಯತ ಇಂತಹ ಅನೇಕ ಪ್ರಬಲ ಸಮುದಾಯದ ನಾಯಕರು ಸ್ವಹಿತಕ್ಕಾಗಿ ಪ್ರತ್ಯೇಕ ಧರ್ಮದ ಕಿಚ್ಚನ್ನು ಹಚ್ಚಿದ್ದಾರೆ. ಬಸವಣ್ಣನರ ಆಶಯದಂತೆ ಎಲ್ಲರನ್ನೂ ಒಳಗೊಳ್ಳುವ ಬಸವ ಧರ್ಮ ಘೋಷಣೆಯಾಗಬೇಕು. ಎಲ್ಲರಿಗೂ ಸಮಾನತೆ ದೊರೆಯಬೇಕು ಎಂದು ಒತ್ತಾಯಿಸಿದರು.
ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆಯಾದರೆ ಹಿಂದುಳಿದ ಜಾತಿಗಳಾದ ಅಂಬಿಗರು, ಮಡಿವಾಳ, ಹೂಗಾರ, ನೇಕಾರ, ಬಣಗಾರ, ಮೇದಾರ, ಹಡಪದ, ಮಾಳಿ, ಉಪ್ಪಾರ, ಬಡಿಗೇರ, ಕಂಬಾರ, ಕುಂಬಾರ, ಗೌಳಿ ಹಾಗೂ ಶೋಷಿತ ಸಮುದಾಯಗಳಾದ ಡೋಹರ, ಸಮಗಾರ, ಮಾದಿಗ, ಛಲವಾದಿ, ಚಮ್ಮಾರ, ಮಚಗಾರ, ಮೋಚಿ ಇನ್ನೂ ಹಲವು ಸಮುದಾಯಗಳು ಧರ್ಮದಿಂದ ದೂರ ಉಳಿಯುತ್ತವೆ. ದೂರ ಉಳಿವುದಕ್ಕೆ ವೀರಶೈವ ಮತ್ತು ಲಿಂಗಾಯತ ಮಹಾಸಭಾ ಅವಕಾಶ ನೀಡಬಾರದು ಎಂದರು. ಮಾರ್ಕಂಡೇಯ ದೊಡ್ಮನಿ, ಕಲ್ಲಪ್ಪ ರಾಮಚನ್ನವರ್, ಸದಾನಂದ ಕುಲಕರ್ಣಿ, ಕುಮಾರ್ ಪಾಟೀಲ್ ಇದ್ದರು.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.