
ವಿಜಯಪುರ: ಲಿಂಗಾಯತ ಧರ್ಮಕ್ಕಾಗಿ ಹೋರಾಟ ನಡೆಸುತ್ತಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
‘‘ಬಸವೇಶ್ವರರ ಉತ್ತರಾಧಿಕಾರಿ ನಾನೇ’’ ಎಂದು ಹೇಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ನಗರದಲ್ಲಿ ಮಂಗಳವಾರ ಬಸವೇಶ್ವರ ವೃತ್ತ ನವೀಕರಣ ಕಾರ್ಯಕ್ರಮದಲ್ಲಿ ಪೂಜೆ ನೆರವೇರಿಸುವಾಗ ಪೂಜಾರಿಯೊಬ್ಬರು ಮಂತ್ರಘೋಷ ಹೇಳಿ ಸಚಿವ ಎಂ.ಬಿ. ಪಾಟೀಲ್ ಅವರ ಹಸ್ತದಿಂದ ಗುದ್ದಲಿ ಪೂಜೆ ನೆರವೇರಿಸುತ್ತಿದ್ದರು.
ಆಗ ಸಚಿವ ಪಾಟೀಲ್ ಅವರು ‘ಬಸವೇಶ್ವರರ ಉತ್ತರಾಧಿಕಾರಿ ನಾನೇ’ ಎಂದು ಹೇಳಿದರು. ಅವರು ನಗುತ್ತಲೇ ನೀಡಿದ ಈ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಬಳಿಕ ಅಲ್ಲೇ ಇದ್ದ ವಿಧಾನ ಪರಿಷತ್ ಸದಸ್ಯ ಬಸವನಗೌಡ ಪಾಟೀಲ್, ‘‘ಎಂ.ಬಿ. ಪಾಟೀಲ್ ಅವರು 2ನೇ ಲಿಂಗಾಯತ ಧರ್ಮ ಸಂಸ್ಥಾಪಕ’’ ಎಂದು ಹೇಳುವ ಮೂಲಕ ಹಾಸ್ಯ ಮಾಡಿದರು.
ಸುಪ್ರೀಂಗೂ ಹೋಗಲು ಸಿದ್ಧ: ನಂತರ ವಿವಿಧ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿಯಾದರೂ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಪಡೆಯಲು ಸಿದ್ಧ ಎಂದು ತಿಳಿಸಿದರು.
ಪಂಚಾಚಾರ್ಯರ ಬಗ್ಗೆ ಅಪಾರ ಗೌರವವಿದೆ. ಅವರ ಬಗ್ಗೆ ನಾನೆಂದೂ ಅಗೌರವ ತೋರಿಲ್ಲ, ವಿರೋಧಿಸಿಲ್ಲ. ವೀರಶೈವರು ಸಹ ನಮ್ಮ ಒಂದು ಅಂಗ. ಸಿಖ್, ಜೈನ ಇತರೆ ಅಲ್ಪಸಂಖ್ಯಾತ ಸಮಾಜದವರಿಗೆ ದೊರಯುತ್ತಿರುವ ಸೌಲಭ್ಯಗಳು ಲಿಂಗಾಯತ ಸಮಾಜಕ್ಕೂ ದೊರಕಬೇಕೆಂಬ ಆಶಯದಿಂದ ‘ಪ್ರತ್ಯೇಕ ಲಿಂಗಾಯತ ಧರ್ಮ’ ಹೋರಾಟ ನಡೆಸಲಾಗುತ್ತಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.