
ಬೆಂಗಳೂರು (ನ.25): ಈ ಬಾರಿ ನಿಮ್ಮ ನೆಚ್ಚಿನ ಸುವರ್ಣ ನ್ಯೂಸ್'ನ ಕವರ್ಸ್ಟೋರಿ ತಂಡ ಮತ್ತೊಂದು ಥ್ರಿಲ್ಲಿಂಗ್ ಕಾರ್ಯಾಚರಣೆ ಮಾಡಿದೆ. ಈ ರಹಸ್ಯ ಕಾರ್ಯಾಚರಣೆಯಲ್ಲಿ ಮದುವೆ ಮಾಫಿಯಾದ ಬಣ್ಣ ಬಯಲು ಮಾಡಿದ್ದಲ್ಲದೆ ಅದರ ಹೆಡೆಮುರಿ ಕಟ್ಟಿದೆ.
ಮದುವೆ ಆಸೆ ತೋರಿಸಿ ಅಮಾಯಕರ ಬದುಕನ್ನ ಬರ್ಬಾದ್ ಮಾಡುತ್ತಿದ್ದ ಖದೀಮರು ಕವರ್ಸ್ಡೋರಿ ತಂಡ ನಡೆಸಿದ ರಹಸ್ಯ ಕಾರ್ಯಾಚರಣೆಯ ಬಲೆಗೆ ಬಿದ್ದು ಈಗ ಹಾವೇರಿಯ ಹಾನಗಲ್ ಪೊಲೀಸರ ಅತಿಥಿಗಳಾಗಿದ್ದಾರೆ.
ಈ ಗ್ಯಾಂಗ್ ಪಕ್ಕಾ ಫಿಲ್ಮ್ ಸ್ಟೈಲಲ್ಲಿ ಕಾರ್ಯನಿರ್ವಹಿಸುತ್ತೆ. ಈ ಖದೀಮರು ಮದುವೆ ಬ್ಯುರೋ, ಮದುವೆ ಏಜೆಂಟರ ವೇಷ ಧರಿಸಿರ್ತಾರೆ. ಇವರ ಗ್ಯಾಂಗಲ್ಲಿ ತರಬೇತಿ ಪಡೆದ ಐವತ್ತು ಅರುವತ್ತು ಹೆಣ್ಣು ಮಕ್ಕಳು ಇರ್ತಾರೆ. ಮದುವೆಗೆ ಹೆಣ್ಣು ಬಯಸಿ ಬರುವವರಿಗೆ ಇದೇ ಹೆಣ್ಣು ಮಕ್ಕಳನ್ನ ತೋರಿಸಿ ಲಕ್ಷಾಂತರ ರೂಪಾಯಿ ಪಡೆದು ಹಾವೇರಿಯ ಅಕ್ಕಿ ಆಲೂರಿನ ವಿಶ್ವನಾಥ ಸಾಲಿಮಠ್ ಸ್ವಾಮಿ ಅನ್ನೋ ಮಫಿಯಾ ಕಿಂಗ್ಪಿನ್ ಮನೆಯಲ್ಲೇ ಮದುವೆ ಮಾಡಿಸುತ್ತಾರೆ. ಮದುವೆಯಾದ ಬಳಿಕ ಒಂದೆರೆಡು ದಿನ ಹುಡುಗನ ಮನೆಯಲ್ಲಿ ಹೆಣ್ಣುಮಕ್ಕಳು ಇರ್ತಾರೆ. ಆ ಬಳಿಕ ಹುಡುಗನ ಮನೆಯ ಚಿನ್ನಾಭರಣಗಳನ್ನೆಲ್ಲಾ ದೋಚಿ ವಾಪಾಸ್ ಬರ್ತಾರೆ, ಜೊತೆಗೆ ಡೈವೋರ್ಸ್ಗೆ ಬೇಡಿಕೆ ಇಡುತ್ತಾರೆ. ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸುತ್ತೇವೆ ಅಂತ ಬ್ಲಾಕ್'ಮೇಲ್ ಮಾಡಿ ಮತ್ತೆ ಲಕ್ಷಾಂತರ ರೂಪಾಯಿ ಬಾಚುತ್ತಾರೆ. ತಮಾಷೆ ಅಂದರೆ ಈ ಗ್ಯಾಂಗ್ನಲ್ಲಿ ಕಾರ್ಯನಿರ್ವಹಿಸೋ ಹೆಣ್ಣು ಮಕ್ಕಳಿಗೆ ಆಗಲೇ ಮದುವೆ ಆಗಿರುತ್ತೆ, ಮಕ್ಕಳಿರುತ್ತೆ, ಅಷ್ಟೇ ಅಲ್ಲ ಕೆಲವರು ವೇಶ್ಯಾವಾಟಿಕೆಯಲ್ಲೂ ತೊಡಗಿರುತ್ತಾರೆ. ಇಂಥಾ ಭಯಾನಕ ಗ್ಯಾಂಗನ್ನ ಕವರ್ಸ್ಟೋರಿ ತಂಡ ಹಾವೇರಿ ಎಸ್.ಪಿ ಪರಮೇಶ್ ಟಿ ಅವರ ಸಹಾಯದಿಂದ ಸಂತೋಷ್ ಪವಾರ್ ಅವರ ನೇತೃತ್ವದ ತಂಡದ ಜೊತೆ ಸೇರಿ ರೈಡ್ ಮಾಡಿತು. ಮಾಫಿಯಾ ಮಂದಿಯ ಹೆಡೆ ಮುರಿ ಕಟ್ಟಿತು.
ವರದಿ: ವಿಜಯಲಕ್ಷ್ಮೀ ಶಿಬರೂರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.