ಕುಂದಗೋಳ, ಚಿಂಚೋಳಿ ಉಪಕದನ ಪ್ರಚಾರಕ್ಕೆ ಕೈ ಮುಖಂಡರ ನಿರಾಸಕ್ತಿ?

By Web DeskFirst Published May 8, 2019, 9:53 AM IST
Highlights

ಕುಂದಗೊಳ ಹಾಗೂ ಚಿಂಚೋಳಿ ಕ್ಷೇತ್ರಗಳಿಗೆ ಉಸ್ತುವಾರಿಗಳಾಗಿ ನೇಮಕಗೊಂಡಿರುವ ಕೆಲವರನ್ನು ಹೊರತುಪಡಿಸಿ ಇನ್ನುಳಿದ ಬಹುತೇಕ ಕಾಂಗ್ರೆಸ್ ನಾಯಕರು ಕ್ಷೇತ್ರಗಳತ್ತ ಸುಳಿಯದೆ ನಿರುತ್ಸಾಹ ಪ್ರದರ್ಶಿಸಿದ್ದು, ಇದು ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಧಾರವಾಡ (ಮೇ. 08): ಕುಂದಗೊಳ ಹಾಗೂ ಚಿಂಚೋಳಿ ಕ್ಷೇತ್ರಗಳಿಗೆ ಉಸ್ತುವಾರಿಗಳಾಗಿ ನೇಮಕಗೊಂಡಿರುವ ಕೆಲವರನ್ನು ಹೊರತುಪಡಿಸಿ ಇನ್ನುಳಿದ ಬಹುತೇಕ ಕಾಂಗ್ರೆಸ್ ನಾಯಕರು ಕ್ಷೇತ್ರಗಳತ್ತ ಸುಳಿಯದೆ ನಿರುತ್ಸಾಹ ಪ್ರದರ್ಶಿಸಿ ದ್ದು, ಇದು ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಶಿವಳ್ಳಿ ಅವರ ನಿಧನ ಹಾಗೂ ಡಾ| ಉಮೇಶ್ ಜಾಧವ್ ರಾಜೀನಾಮೆ ಯಿಂದ ತೆರವಾಗಿ ರುವ ಕುಂದಗೋಳ ಹಾಗೂ ಚಿಂಚೋಳಿ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ತೀವ್ರ ಕಸರತ್ತು ನಡೆಸಿದೆ. ಹಿರಿಯ ನಾಯಕರು, ಸಚಿವರು, ಮಾಜಿ ಸಚಿವರು, ಶಾಸಕರು ಸೇರಿದಂತೆ ತನ್ನ ಪ್ರಮುಖ ಮುಖಂಡರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಿತು.

ಎರಡೂ ಕ್ಷೇತ್ರಗಳಿಗೆ ತಲಾ ನಾಲ್ಕು ಮಂದಿ ಹಿರಿಯ ನಾಯಕರ ಉಸ್ತುವಾರಿ ಸೇರಿದಂತೆ ಕುಂದಗೋಳ ಕ್ಷೇತ್ರಕ್ಕೆ 89 ಮಂದಿ ಹಾಗೂ ಚಿಂಚೋಳಿ ಕ್ಷೇತ್ರಕ್ಕೆ 72 ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಆದರೆ ಕೆಪಿಸಿಸಿ ಮೂಲಗಳ ಪ್ರಕಾರ ಹಿರಿಯ ನಾಯಕರು, ಕೆಲ ಸಚಿವರನ್ನು ಹೊರತುಪಡಿಸಿ ಬಹುತೇಕರು ಕ್ಷೇತ್ರದತ್ತ ಸುಳಿದಿಲ್ಲ.

ಕೆಲವು ಸಚಿವರು ಅಪರೂಪದ ಅತಿಥಿಗಳಂತೆ ಬಂದು ಹೋಗುತ್ತಿದ್ದಾರೆ. ಇದರಿಂದ ಪಕ್ಷದ ಪ್ರಚಾರ ಹಾಗೂ ವ್ಯವಸ್ಥಿತ ಸಂಘಟನೆಗೆ ತೊಡಕುಂಟಾಗುತ್ತಿದೆ. ಈ ಬಗ್ಗೆ ಸ್ಥಳೀಯ ಕಾಂಗ್ರೆಸ್ ಚುನಾವಣಾ ವೀಕ್ಷಕರೂ ಸಹ ಕೆಪಿಸಿಸಿ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

ಕುಂದಗೋಳ ಕ್ಷೇತ್ರಕ್ಕೆ ಸಚಿವರಾದ ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್ ಮತ್ತಿತರರನ್ನು ಪ್ರಮುಖ ಉಸ್ತುವಾರಿಗಳನ್ನಾಗಿ ನೇಮಿಸ ಲಾಗಿದೆ. ಚಿಂಚೋಳಿಗೆ ಈಶ್ವರ ಖಂಡ್ರೆ, ಪರಮೇಶ್ವರ್, ಸಾಕೆ ಶೈಲಜನಾತ್ ಉಸ್ತುವಾರಿಗಳಾಗಿದ್ದಾರೆ. ಒಟ್ಟಾರೆ ಉಸ್ತುವಾರಿ ವಹಿಸಿಕೊಂಡಿರುವ ಪ್ರಮುಖ ನಾಯಕರು ಮಾತ್ರ ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ. ಉಳಿದಂತೆ ಬಹುತೇಕ ಸಹ ಉಸ್ತುವಾರಿ ಹಾಗೂ ಜಿಲ್ಲಾ ಪಂಚಾಯ್ತಿವಾರು ಉಸ್ತುವಾರಿ ನಿರಾಸಕ್ತಿ ಪ್ರದರ್ಶಿಸಿದ್ದಾರೆ.  

click me!