ಕಚ್ಚಾಟದ ನಂತರ ಮೊದಲ ಸಲ ಪ್ರಥಮ್ ಬಗ್ಗೆ ಮಾತಾಡಿರುವ ಭುವನ್: ಹೇಳಿದ್ದಿಷ್ಟು

By Suvarna Web DeskFirst Published Jul 27, 2017, 11:19 AM IST
Highlights

ಬಿಗ್‌ಬಾಸ್ ಖ್ಯಾತಿಯ ಪ್ರಥಮ್, ಭುವನ್‌ಗೆ ಕಚ್ಚಿದ್ದು ಸದ್ಯ ದೊಡ್ಡ ಸುದ್ದಿ. ಪ್ರಕರಣವೀಗ ಕೋರ್ಟ್‌ನಲ್ಲಿದೆ. ‘ಸಂಜು ಮತ್ತು ನಾನು’ ವೀಕೆಂಡ್ ಶೋ ಚಿತ್ರೀಕರಣದ ವೇಳೆ ನಡೆಯಿತೆನ್ನಲಾದ ಈ ಪ್ರಕರಣ ನಿಜವಾಗಿಯೂ ಏನು? ಇದೇ ಮೊದಲ ಸಲ ಈ ಬಗ್ಗೆ ಭುವನ್ ಇಲ್ಲಿ ಮಾತಾಡಿದ್ದಾರೆ.

ಆವತ್ತು ‘ಸಂಜು ಮತ್ತು ನಾನು’ ವೀಕೆಂಡ್ ಶೋ ಶೆಡ್ಯೂಲ್‌'ನ ಚಿತ್ರೀಕರಣದ ಕೊನೆ ದಿನ. ಸಂಜನಾ ಮತ್ತು ಪ್ರಥಮ್ ಮುಖಾಮುಖಿ ದೃಶ್ಯ. ಪ್ರಥಮ್ ಕೈ ಮೇಲೆ ಸಂಜನಾ ಕೈಯಿಟ್ಟು ಡೈಲಾಗ್ ಹೇಳಬೇಕಿತ್ತು. ಸಂಜನಾ ಹಿಂಜರಿಯುತ್ತಿದ್ದಳು. ಶಾಟ್ ರೆಡಿ ಅಂತ ನಿರ್ದೇಶಕರು ಹೇಳಿದಾಗೆಲ್ಲ ನರ್ವಸ್ ಆಗುತ್ತಿದ್ದಳು. ಐದಾರು ಟೇಕ್ ಆಯಿತು. ನಾನಾಗ ಅಲ್ಲಿಗೆ ಎಂಟ್ರಿ ಕೊಟ್ಟೆ. ಪ್ರಥಮ್ ನನ್ನನ್ನು ನೋಡಿದವನೇ, 'ಯಾರ್ಯಾರೋ ಕೈ ಹಿಡ್ಕೋಬಹುದು, ನಾನು ಹಿಡ್ಕೋಬಾರ್ದಾ’ ಅಂತ ಸ್ವಲ್ಪ ಕೆಟ್ಟದಾಗಿ ಸಂಜನಾಳನ್ನು ಅವಮಾನಿಸಿದ. ನಾನೇನು ಮಾತನಾಡಲಿಲ್ಲ. ಪ್ರಥಮ್ ಗೆ ಕಿವಿಯಲ್ಲಿ ಹೋಗಿ ಹೇಳಿದೆ, ಹೆಣ್ಮಕ್ಕಳ ಬಗ್ಗೆ ಹೀಗೆಲ್ಲ ಮಾತನಾಡೋದು ಸರಿಯಲ್ಲ ಅಂತ. ಕೊನೆಗೆ ಶಾಟ್ ಮುಗೀತು.

ಮಧ್ಯಾಹ್ನ ಊಟದ ಸಮಯ. ಆಗ ಪ್ರಥಮ್ ನನ್ನನ್ನೇ ನೋಡುತ್ತಾ ಏನೇನೋ ಮಾತನಾಡುತ್ತಿದ್ದರು. ನಾನು ಕಿವಿಗೆ ಹಾಕಿಕೊಳ್ಳಲಿಲ್ಲ. ಬಿಗ್‌ಬಾಸ್‌ನಲ್ಲೂ ಹೀಗೆ ಮಾಡುತ್ತಿದ್ದ. ಈ ಶೋ ಶುರುವಾಗುವ ಮುನ್ನವೇ ನಾನು ಚಾನೆಲ್‌ನವರಿಗೆ ಹೇಳಿದ್ದೆ. ಕೆಲವು ಕಂಡಿಷನ್ ಜೊತೆ ಈ ಶೋನಲ್ಲಿ ಅಭಿನಯಿಸಲು ಒಪ್ಪಿದ್ದೆ. ಅದು ಪ್ರಥಮ್ ಗೂ ಗೊತ್ತಿತ್ತು. ಆದ್ರೂ ಸೆಟ್‌ನಲ್ಲಿ ಆತನ ಹುಚ್ಚಾಟ ಮೂಮೂಲಿ ಆಗಿತ್ತು. ರೇಗಿಸೋದು, ಅವಮಾನಿಸೋದು ಮಾಡುತ್ತಿದ್ದ. ಆದರೂ ತಾಳ್ಮೆಯಲ್ಲಿದ್ದೆ. ಅದಕ್ಕೆಲ್ಲಾ ರಿಯಾಕ್ಟ್ ಮಾಡುತ್ತಿದ್ದರೆ ‘ಸಂಜು ಮತ್ತು ನಾನು’ ಶೋ ಪ್ರಾರಂಭದಲ್ಲೇ ಗಲಾಟೆ ಆಗಬೇಕಿತ್ತು. ಅದಕ್ಕೇ ಈ ಥರ ಹುಚ್ಚಾಟ ಪ್ರದರ್ಶಿಸಿದಾಗೆಲ್ಲ ಚಾನೆಲ್ ಮುಖ್ಯಸ್ಥರ ಗಮನಕ್ಕೆ ತಂದಿದ್ದೆ. ಅವರು ಬುದ್ಧಿವಾದವನ್ನೂ ಹೇಳಿದ್ದರು. ಆದ್ರೂ ಅವನಿಗೆ ನನ್ನ ಕಂಡ್ರೆ ದ್ವೇಷ, ಅಸೂಯೆ.

ಆವತ್ತು ಮಧ್ಯಾಹ್ನದ ಊಟವಾದ ಮೇಲೆ ರಿಹರ್ಸಲ್. ಸಂಜೆ ನಾಲ್ಕರ ಸಮಯ. ನಾನು, ಸಂಜನಾ ಡೈಲಾಗ್ ಬಾಯಿಪಾಠ ಮಾಡುತ್ತಿದ್ದೆವು. ಕಿಟಕಿಯಾಚೆ ನಮ್ಮನ್ನೇ ನೋಡುತ್ತಿದ್ದ ಪ್ರಥಮ್ ಒಳಗೆ ಬಂದ. ನಿರ್ದೇಶಕರ ಮುಂದೆಯೇ ಸಂಜನಾ ಕುರಿತು ಅವಾಚ್ಯ ಶಬ್ದ ಬಳಸಿ ಮಾತಾಡಿದ. ನಾನು ವಾರ್ನ್ ಮಾಡಿದೆ. ಆದ್ರೂ ಮತ್ತದೇ ಕೆಟ್ಟ ಪದಪ್ರಯೋಗ ಮುಂದುವರಿಸಿದ. ಸಿಟ್ಟು ಬಂತು. ನೂಕಿದೆ. ಬಿದ್ದ. ತಕ್ಷಣ ನಾನೇ ಹೋಗಿ ಎತ್ತಲು ನೋಡಿದೆ. ಎದ್ದೇಳುವ ಬದಲು ನನ್ನನೇ ಕೆಡವಿದ. ತಕ್ಷಣ ತೊಡೆಗೆ ಬಾಯಿ ಹಾಕಿ ಕಚ್ಚಿದ. ಪ್ಯಾಂಟ್ ಹರಿದು ಹೋಯಿತು. ರಕ್ತ ಕಂಡು ಎಲ್ಲರೂ ಗಾಬರಿಯಾದ್ರು. ಕೋಪ ತಡೆಯೋಕ್ಕಾಗಲಿಲ್ಲ. ಸಿಟ್ಟು ಬಂತು. ಆದ್ರೂ ನಾನೇನೂ ಮಾಡಲಿಲ್ಲ. ಸಂಜೆ ಮನೆಗೆ ಬಂದು ಫೇಸ್‌ಬುಕ್ ಅಕೌಂಟ್‌ನಲ್ಲಿ ಸ್ಟೇಟಸ್ ಹಾಕಿದೆ. ಮರುದಿನ ದೂರು ಕೊಟ್ಟೆ. ಕೆಲವು ಕಡೆ ಇದೆಲ್ಲ ಸಂಜನಾ ಸಲುವಾಗಿಯೇ ನಡೆದಿದ್ದು ಅಂತಲೂ ವರದಿ ಆಗಿದೆ. ಈ ಬಗ್ಗೆ ನನ್ನದೊಂದು ಮಾತು. ಸಂಜನಾ ಮತ್ತು ನನ್ನ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ. ಇಬ್ಬರು ಫ್ರೆಂಡ್ಸ್ ಮಾತ್ರ. ಅದರಾಚೆ ಎಲ್ಲ ಗಾಸಿಪ್. ಬಿಗ್‌ಬಾಸ್ ನಲ್ಲಿದ್ದಾಗಲೇ ನಾನು ಹಾಗೇ ಹೇಳಿದ್ದೆ. ಈಗಲೂ ಅದೇ ಮಾತು. ಪ್ರಥಮ್ ಏನು ತಿಳಿದುಕೊಂಡಿದ್ದಾನೋ ಗೊತ್ತಿಲ್ಲ. ಸಂಜನಾ ಕಂಡ್ರೆ ಗುರ್ ಅಂತಾನೆ. ನನ್ನನ್ನು ಅವಮಾನಿಸುತ್ತಾನೆ. ಅಷ್ಟೇ ಅಲ್ಲ, ನನ್ನನ್ನು ಮುಗಿಸುತ್ತೇನೆ ಅಂತ ಹೇಳಿಕೊಂಡು ತಿರುಗಾಡುತ್ತಿದ್ದಾನೆ.

ಅವನು ಏನಾದ್ರೂ ಮಾಡಿಕೊಳ್ಳಲಿ, ಬಿಗ್‌ಬಾಸ್ ಮನೆಯಲ್ಲಿ ನಾನು ಹೇಗಿದ್ದೆ ಅನ್ನೋದನ್ನು ಕನ್ನಡದ ಜನತೆ ನೋಡಿದ್ದಾರೆ. ಅವರ ಆಶೀರ್ವಾದ ಇದೆ. ಅವರ ಬೆಂಬಲದಿಂದ ನನ್ನ ಕರಿಯರ್ ರೂಪಿಸಿಕೊಳ್ಳುವುದರ ಕಡೆ ನನ್ನ ಗಮನವಿದೆ. ಅದನ್ನು ಮುಂದುವರೆಸುತ್ತೇನೆ. ಸದ್ಯಕ್ಕೆ ಕಚ್ಚಿಸಿಕೊಂಡಿದ್ದರ ಗಾಯ ಮಾಯಬೇಕಿದೆ. ಆಗಸ್ಟ್ ಕೊನೆಯಲ್ಲಿ ‘ರಾಂಧವ’ ಚಿತ್ರ ಶುರುವಾಗಲಿದೆ.

-ದೇಶಾದ್ರಿ ಹೊಸ್ಮನೆ, ಕನ್ನಡಪ್ರಭ

 

click me!