ಬೆಂಗಳೂರು(ಸೆ.26): ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ರಾಜಕಾಲುವೆ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟ ದರ್ಶನ ಹಾಗೂ ಸಚಿವ ಶಾಮನೂರು ಶಿವಶಂಕರಪ್ಪನವರಿಗೆ ಇಂದು ನೋಟಿಸ್ ಜಾರಿಯಾಗುವ ಸಾಧ್ಯತೆ ಇದೆ.
ರಾಜಕಾಲುವೆ ಒತ್ತುವರಿ ಮಾಡಿಕೊಂಡು ಲೇಔಟ್ ನಿರ್ಮಿಸಲಾಗಿದೆ ಎಂದು ಐಡಿಯಲ್ ಹೋಮ್ಸ್ ವಿರುದ್ಧ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಐಡಿಯಲ್ ಹೋಮ್ಸ್ನಿಂದ ಮನೆ ಖರೀದಿಸಿದ್ದ ದರ್ಶನ ಕೂಡ ಸಂಕಷ್ಟಕ್ಕೀಡಾಗಿದ್ದಾರೆ. ಇನ್ನು ಐಡಿಯಲ್ಸ್ ಹೋಂ ಭೂ ಒತ್ತುವರಿ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ವೆ ನಡೆಸಿ ಬಿಬಿಎಂಪಿಗೆ ವರದಿ ಸಲ್ಲಿಸಿದ್ದರು.
ಇನ್ನು ಬಿಬಿಎಂಪಿ ಈ ಒತ್ತುವರಿ ಪರಿಶೀಲನೆ ವರದಿಯನ್ನು ಜಿಲ್ಲಾಧಿಕಾರಿ ವಿ. ಶಂಕರ್ಗೆ ನೀಡಿದೆ. ತೆರವು ಕಾರ್ಯಾಚರಣೆ ಹೊಣೆ ಹೊತ್ತಿರುವ ಜಿಲ್ಲಾಧಿಕಾರಿ ವಿ. ಶಂಕರ್, ಈಗಾಗಲೇ ದಾಖಲೆಗಳ ಪರಿಶೀಲನೆ ನಡೆಸಿದ್ದು, ಒತ್ತುವರಿಯಾಗಿರುವ ಕಟ್ಟಡಗಳನ್ನು ಯಾವುದೇ ಮುಲಾಜಿಲ್ಲದೇ ತೆರವು ಮಾಡುವುದಾಗಿ ಹೇಳಿದ್ದಾರೆ. ಹೀಗಾಗಿ ಸಪ್ಟೆಂಬರ್ 26ರಂದು ಅಂದ್ರೆ ಇವತ್ತು ಒತ್ತುವರಿದಾರರಿಗೆ ನೋಟಿಸ್ ಜಾರಿಯಾಗಲಿದೆ. ಒತ್ತುವರಿ ಈಗಾಗಲೇ ಸಾಬೀತಾಗಿರುವುದರಿಂದ ನೋಟಿಸ್ ಬಳಿಕ ತೆರವು ಕಾರ್ಯಾಚರಣೆ ಆರಂಭವಾಗಲಿದೆ.