ಬೆಂಗಳೂರು: ಕಾವೇರಿ ವಿವಾದ ಹಿನ್ನೆಲೆಯಲ್ಲಿ ಕರ್ನಾಟಕ-ತಮಿಳುನಾಡು ನಡುವೆ ವಾಹನ ಸಂಚಾರ ನಿರ್ಬಂಧ ಹೇರಿರುವುದರಿಂದ ಉಭಯ ರಾಜ್ಯಗಳ ನಡುವಿನ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ. ಇದರಿಂದ ಎರಡು ರಾಜ್ಯಗಳ ಸರ್ಕಾರ ಹಾಗೂ ಲಾರಿ ಮಾಲೀಕರಿಗೆ ನಿತ್ಯ ಸಾವಿರಾರು ಕೋಟಿ ರುಪಾಯಿಗೂ ಅಧಿಕ ನಷ್ಟವಾಗಿದೆ.
ಕರ್ನಾಟಕ-ತಮಿಳುನಾಡಿನಿಂದ ಸಾಕಷ್ಟುಸರಕು ಸಾಗಣೆ ವ್ಯವಹಾರ ನಡೆಯುತ್ತದೆ. ನಿತ್ಯ 16 ಸಾವಿರ ವಾಹನಗಳು ಸಂಚರಿಸುತ್ತವೆ. ಅತ್ತಿಬೆಲೆ, ಸತ್ಯಮಂಗಲಂ, ಪಲಮರ್ನೇ, ಗುಂಡ್ಲುಪೇಟೆ ಸೇರಿ 6 ಕಡೆಯ ಪ್ರವೇಶದ್ವಾರಗಳಲ್ಲಿ ನಿಷೇಧ ಹೇರಲಾಗಿದೆ.
ಉಭಯ ರಾಜ್ಯಗಳ ಪ್ರವೇಶ ನಿರಾಕರಣೆಯಿಂದ ನಿತ್ಯ ಲಾರಿ ಮಾಲೀಕರಿಗೆ 400 ಕೋಟಿ ಹಾಗೂ ಸರ್ಕಾರಕ್ಕೆ 500 ಕೋಟಿ ರು. ನಷ್ಟವಾಗುತ್ತಿದೆ. ಕಳೆದ ಐದಿನೈದು ದಿನಗಳಿಂದ ಸುಮಾರು 45 ರಿಂದ 50 ಸಾವಿರ ಕೋಟಿ ರು. ನಷ್ಟವಾಗಿದೆ. ಹೀಗಾಗಿ ಸರ್ಕಾರ ಮಧ್ಯಪ್ರವೇಶಿಸಿ ಎರಡು ರಾಜ್ಯಗಳ ವ್ಯಾಪಾರ ವ್ಯವಹಾರ ನಡೆಸಲು ಅನುಮತಿ ನೀಡಬೇಕು. ಲಾರಿಗಳ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಕರ್ನಾಟಕ ಲಾರಿ ಮಾಲೀಕರು ಹಾಗೂ ಏಜೆಂಟರ ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ಮನವಿ ಮಾಡಿದ್ದಾರೆ.
ತಮಿಳುನಾಡಿನಿಂದ ವಾಹನ ಬಿಡಿಭಾಗಗಳು, ಕೋಳಿಮೊಟ್ಟೆ, ಜೆಲ್ಲಿಕಲ್ಲು, ತರಕಾರಿ, ಹೂ ಕರ್ನಾಟಕಕ್ಕೆ ಬರುತ್ತವೆ. ಹಾಗೇಯೆ ರಾಜ್ಯದಿಂದ ತಮಿಳುನಾಡಿಗೆ ಈರುಳ್ಳಿ, ಸಣ್ಣಪುಟ್ಟಬಿಡಿಭಾಗಗಳು, ಬೇಳೆ ಕಾಳುಗಳು, ಈರುಳ್ಳಿಯನ್ನು ನೆರೆರಾಜ್ಯಕ್ಕೆ ಕೊಂಡೊಯ್ಯಲಾಗುತ್ತದೆ. ಕಲಬುರ್ಗಿ, ರಾಯಚೂರು, ಹಾವೇರಿ ಸೇರಿದಂತೆ ನಾನಾ ಜಿಲ್ಲೆಗಳಿಂದ ಬಂದಂತಹ ಲಾರಿಗಳು 15 ದಿನಗಳಿಂದ ಇಲ್ಲಿಯೇ ನಿಂತಿವೆ. ಪದಾರ್ಥಗಳು ಹಾಳಾಗುತ್ತಿವೆ. ಹೀಗೆ ನಿತ್ಯ 16 ಸಾವಿರ ಲಾರಿಗಳು ಸಂಚಾರ ಮಾಡುತ್ತೇವೆ. ಕಾವೇರಿ ವಿವಾದದಿಂದ ಇದೀಗ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.
ಸಾಮಾನ್ಯ ದಿನಗಳಲ್ಲಿ ರಾಜ್ಯದಿಂದ ತಮಿಳುನಾಡಿನ ಹೊಸೂರಿಗೆ ನಿತ್ಯ ಕೆಎಸ್ಆರ್ಟಿಸಿಯ 60ಕ್ಕೂ ಹೆಚ್ಚು ಬಸ್ಗಳು ಸಂಚರಿಸುತ್ತಿದ್ದವು. ಕೃಷ್ಣಗಿರಿ, ಧರ್ಮಪುರಿಯಿಂದ ಟಿಎನ್ಎಸ್ಟಿಸಿಯ 90 ಬಸ್'ಗಳು ಕರ್ನಾಟಕದ ಅತ್ತಿಬೆಲೆಗೆ ಬರುತ್ತವೆ. ಈಗ ಆ ಬಸ್ಗಳ ಸಂಚಾರಕ್ಕೆ ನಿಷೇಧಿಸಲಾಗಿದೆ. ಇದರಿಂದ ಎರಡು ರಾಜ್ಯಗಳ ಸಾರಿಗೆ ನಿಗಮಗಳ ಆದಾಯದಲ್ಲಿ ಶೇ.25ರಷ್ಟು ಕಡಿಮೆಯಾಗಿದೆ.
ಅಪರಾಧ ಸಂಖ್ಯೆ ಕಡಿಮೆ:
ಕಾವೇರಿ ವಿವಾದ ಹಿನ್ನೆಲೆಯಲ್ಲಿ ನಗರದಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಲ್ಲೆಂದರೆಲ್ಲಿ ಪೊಲೀಸ್ ಸಿಬ್ಬಂದಿ ಭದ್ರತೆ ನಿಯೋಜನೆಗೊಂಡಿರುವುದರಿಂದ ಕಳ್ಳರು, ದರೋಡೆಕೋರರು ಯಾವುದೇ ಕೃತ್ಯದಲ್ಲಿ ಭಾಗಿಯಾಗುತ್ತಿಲ್ಲ. ಜತೆಗೆ ಕೇಂದ್ರ ಅರೆ ಸೇನಾ ಸಿಬ್ಬಂದಿ ಸಶಸ್ತ್ರದೊಂದಿಗೆ ಗಸ್ತು ತಿರುಗುತ್ತಿರುವುದರಿಂದ ಎಲ್ಲಾ ರೀತಿಯ ಅಪರಾಧ ಕೃತ್ಯಗಳಲ್ಲಿ ಗಣನೀಯ ಪ್ರಮಾಣ ಕಡಿಮೆಯಾಗಿದೆ. ಇನ್ನೂ ನೆರೆ ರಾಜ್ಯಗಳಿಂದ ಸಾಮಾನ್ಯವಾಗಿ ಕೆಲ ದರೋಡೆ, ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗುವ ತಂಡಗಳು ನಗರ ಪ್ರವೇಶಿಸಲು ಹಿಂಜರಿಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾರೆ.
ಲಾರಿ ಸಂಚಾರ ನಿಷೇಧ ಸರಿಯಲ್ಲ:
ಕಾವೇರಿ ವಿಚಾರದಲ್ಲಿ ನಾವು ಕರ್ನಾಟಕದ ಪರವಾಗಿದ್ದೇವೆ. ಆದರೆ, ಲಾರಿಗಳ ಸಂಚಾರ ನಿಷೇಧಿಸಿರುವುದು ಸರಿಯಲ್ಲ. ಇದರಿಂದ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಸಾಕಷ್ಟುವ್ಯತ್ಯಾಸವಾಗಿದ್ದು, ರೈತರು, ಲಾರಿ ಮಾಲೀಕರಿಗೆ ನಷ್ಟವಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಲಾರಿಗಳ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಕರ್ನಾಟಕ ಲಾರಿ ಮಾಲೀಕರು ಹಾಗೂ ಏಜೆಂಟರ ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ಹೇಳುತ್ತಾರೆ.
(ಕನ್ನಡಪ್ರಭ ವಾರ್ತೆ)