ಬಿಜೆಪಿ ಬೆಂಬಲಿಸಲು ಮುಂದಾದ ಶಿಯಾ ಮುಸ್ಲಿಮರು
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ
ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಬಯಕೆ
ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಲು ಸಿದ್ಧ
ಲಕ್ನೋ(ಜೂ.25): 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯನ್ನು ಬೆಂಬಲಿಸಲು ಶಿಯಾ ಮುಸ್ಲಿಮರು ನಿರ್ಧರಿಸಿದ್ದಾರೆ. ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗಬೇಕು ಎಂಬುದು ಶಿಯಾ ಮುಸ್ಲಿಮರ ಬಯಕೆಯಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಉತ್ತರ ಪ್ರದೇಶದ ಬಿಜೆಪಿ ಬೆಂಬಲಿತ ಪರಿಷತ್ ಸದಸ್ಯ, ರಾಷ್ಟ್ರೀಯ ಶಿಯಾ ಸಮಾಜ(ಆರ್ ಎಸ್ ಎಸ್ ) ಮುಖ್ಯಸ್ಥ ಬುಕ್ಕಲ್ ನವಾಜ್, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವದರ ಜೊತೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವದರ ಪರವಾಗಿ ನಾವು ನಿಲ್ಲಲಿದ್ದೇವೆ ಎಂದು ಹೇಳಿದ್ದಾರೆ.
ನಮ್ಮ ಸಮುದಾಯ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಸ್ಥಾನವನ್ನು ಅಲಂಕರಿಸುವುದನ್ನು ಬಯಸುತ್ತದೆ. ಬಿಜೆಪಿಯನ್ನು ಹೊರತುಪಡಿಸಿದರೆ ಮತ್ಯಾವ ರಾಜಕೀಯ ಪಕ್ಷವೂ ಶಿಯಾ ಮುಸ್ಲಿಮರ ಬಗ್ಗೆ ಕಾಳಜಿ ಹೊಂದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದೆಹಲಿಯಲ್ಲಿ ಶಿಯಾ ಸಮುದಾಯ ಏರ್ಪಡಿಸುವ ಮೆರವಣಿಗೆ ಮೇಲೆ 20 ವರ್ಷಗಳಿಂದ ಇದ್ದ ನಿರ್ಬಂಧವನ್ನು ತೆಗೆದುಹಾಕಿದ್ದರು ಎಂದು ನವಾಜ್ ನೆನಪಿಸಿಕೊಂಡರು.
ಬಿಜೆಪಿ ಶಿಯಾ ಸಮುದಾಯದ ಮುಖಂಡರಾದ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ರಾಜ್ಯ ಸಚಿವ ಮೊಹ್ಸಿನ್ ರಾಜಾ, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸೈಯದ್ ಹಸನ್ ರಿಜ್ವಿ, ಉತ್ತರ ಪ್ರದೇಶದ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಹೈದರ್ ಅಬ್ಬಾಸ್ ಅವರಿಗೆ ಗೌರವಯುತ ಸ್ಥಾನಗಳನ್ನು ನೀಡಿದೆ ಎಂದು ನವಾಜ್ ಹೇಳಿದ್ದಾರೆ.