
ನೀಟ್ (NEET) ಹಗರಣದ ಹೈ-ಡ್ರಾಮಾಕ್ಕೆ ಬಿಗ್ ಟ್ವಿಸ್ಟ್: ಕೇಂದ್ರ ಸಚಿವನ ವಿಕೆಟ್ ಪತನ! ನಟ ಪ್ರಕಾಶ್ ರಾಜ್ ಸಂಭ್ರಮದ 'ಅಟ್ಟಹಾಸ'
ಬೆಂಗಳೂರು: ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ್ದ 'ನೀಟ್-ಯುಜಿ' (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಈಗ ಸಿನಿಮೀಯ ತಿರುವು ಪಡೆದುಕೊಂಡಿದೆ. ಇಷ್ಟು ದಿನ ಪ್ರತಿಭಟನೆ, ಆಕ್ರೋಶ, ಮತ್ತು ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿದ್ದ ಈ ಹಗರಣದಲ್ಲಿ ಕೊನೆಗೂ ಒಂದು ದೊಡ್ಡ 'ವಿಕೆಟ್' ಪತನವಾಗಿದೆ. ಹೋರಾಟಗಾರರ ಮತ್ತು ವಿದ್ಯಾರ್ಥಿಗಳ ತೀವ್ರ ಒತ್ತಡಕ್ಕೆ ಮಣಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಬಹುಭಾಷಾ ನಟ ಹಾಗೂ ರಾಜಕಾರಣಿ ಪ್ರಕಾಶ್ ರಾಜ್ (Prakash Raj) ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮದ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಇದೀಗ ಸಂಚಲನ ಸೃಷ್ಟಿಸಿದೆ.
ಸಿನಿಮಾದಲ್ಲಿ ಅನ್ಯಾಯದ ವಿರುದ್ಧ ಸಿಡಿದೆದ್ದು ಹೋರಾಡುವ ಪಾತ್ರಗಳಲ್ಲಿ ಮಿಂಚುವ ಪ್ರಕಾಶ್ ರಾಜ್, ನಿಜ ಜೀವನದಲ್ಲೂ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಸದಾ ಧ್ವನಿ ಎತ್ತುತ್ತಲೇ ಇರುತ್ತಾರೆ. ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ನಲ್ಲಿ 'ಕಾಕ್ರೋಚ್ ಜನತಾ ಪಕ್ಷ' (CJP) ಹಮ್ಮಿಕೊಂಡಿದ್ದ 'ಚಲೋ ಸಂಸದ್' ಮೆರವಣಿಗೆಯಲ್ಲಿ ಅವರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಈಗ ಶಿಕ್ಷಣ ಸಚಿವರ ರಾಜೀನಾಮೆ ಹೊರಬೀಳುತ್ತಿದ್ದಂತೆಯೇ, ಇದನ್ನು ಜನಶಕ್ತಿಗೆ ಸಿಕ್ಕ ಜಯ ಎಂದು ಅವರು ಬಣ್ಣಿಸಿದ್ದಾರೆ.
ಪ್ರಕಾಶ್ ರಾಜ್ ವೈರಲ್ ಪೋಸ್ಟ್ನಲ್ಲಿ ಏನಿದೆ?
ಪ್ರತಿಭಟನಾ ಸ್ಥಳದಲ್ಲಿ ಮೈಕ್ ಹಿಡಿದು ಹೈ-ವೋಲ್ಟೇಜ್ ಘೋಷಣೆಗಳನ್ನು ಕೂಗುತ್ತಿರುವ ತಮ್ಮದೇ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಪ್ರಕಾಶ್ ರಾಜ್, "ನನ್ನ ಪ್ರೀತಿಯ ಜಿರಳೆಗಳಿಗೆ (Cockroaches) ಅಭಿನಂದನೆಗಳು.. ಪ್ರೀತಿಯ ಸೋನಮ್ ವಾಂಗ್ಚುಕ್ ಸರ್ ಮತ್ತು ಯುವಕರ ಪರವಾಗಿ ನಿಂತ ಪ್ರತಿಯೊಬ್ಬರಿಗೂ ಶಹಬ್ಬಾಸ್! ಜನಶಕ್ತಿಯ ಮುಂದೆ ಎಂತಹ ಮೊಂಡು ಸರ್ಕಾರವನ್ನಾದರೂ ಮಂಡಿಯೂರಿಸಬಹುದು ಎಂಬುದನ್ನು ನೀವು ಇವತ್ತು ಸಾಬೀತುಪಡಿಸಿದ್ದೀರಿ" ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಈಗ ಇಂಟರ್ನೆಟ್ನಲ್ಲಿ ಕಿಚ್ಚು ಹಚ್ಚಿದ್ದು, ಪರ-ವಿರೋಧದ ಚರ್ಚೆಗಳು ಶುರುವಾಗಿವೆ.
ಇತ್ತ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಧರ್ಮೇಂದ್ರ ಪ್ರಧಾನ್ ಅವರು 'X' (ಟ್ವಿಟರ್) ನಲ್ಲಿ ಸುದೀರ್ಘ ಪತ್ರವೊಂದನ್ನು ಹಂಚಿಕೊಂಡಿದ್ದಾರೆ. "ಕಳೆದ ನಾಲ್ಕು ದಶಕಗಳಿಂದ ನಾನು ವಿದ್ಯಾರ್ಥಿಗಳ ಏಳಿಗೆ ಮತ್ತು ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ಶ್ರಮಿಸಿದ್ದೇನೆ. ಪರೀಕ್ಷಾ ಮಾಫಿಯಾದಿಂದಾಗಿ ದೇಶದ ಯಾವೊಬ್ಬ ಅರ್ಹ ವಿದ್ಯಾರ್ಥಿಗೂ ಅನ್ಯಾಯವಾಗಬಾರದು ಎಂಬುದು ನನ್ನ ಧ್ಯೇಯವಾಗಿತ್ತು. ಆದರೆ ಪ್ರಸಕ್ತ ವಿದ್ಯಮಾನಗಳ ಜವಾಬ್ದಾರಿಯನ್ನು ಹೊತ್ತು ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ" ಎಂದು ಭಾವುಕರಾಗಿ ಬರೆದಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿಯವರ ಬೆಂಬಲಕ್ಕೆ ಅವರು ಧನ್ಯವಾದ ಸಲ್ಲಿಸಿದ್ದಾರೆ.
ಜಂತರ್ ಮಂತರ್ನಲ್ಲಿ ಗೆಲುವಿನ ನರ್ತನ:
ಸಚಿವರ ರಾಜೀನಾಮೆ ಸುದ್ದಿ ತಿಳಿಯುತ್ತಿದ್ದಂತೆಯೇ ಜಂತರ್ ಮಂತರ್ನಲ್ಲಿ ನೆರೆದಿದ್ದ ನೂರಾರು ವಿದ್ಯಾರ್ಥಿಗಳು ಮತ್ತು ಹೋರಾಟಗಾರರು ಕುಣಿದು ಕುಪ್ಪಳಿಸಿದ್ದಾರೆ. ಸಿಹಿ ಹಂಚಿ ಸಂಭ್ರಮಿಸಿದ್ದಾರೆ. "ಇದು ಕೇವಲ ಒಬ್ಬ ಸಚಿವರ ರಾಜೀನಾಮೆಯಲ್ಲ, ಬದಲಾಗಿ ನಮ್ಮ ಹಕ್ಕಿಗಾಗಿ ನಾವು ನಡೆಸಿದ ಹೋರಾಟಕ್ಕೆ ಸಂದ ಜಯ" ಎಂದು ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ. ಒಟ್ಟಿನಲ್ಲಿ, ನೀಟ್ ಹಗರಣದ ಈ ಹೈ-ವೋಲ್ಟೇಜ್ ಡ್ರಾಮಾ ಈಗ ಸಚಿವರ ರಾಜೀನಾಮೆ ಮೂಲಕ ಒಂದು ಹಂತಕ್ಕೆ ಬಂದು ತಲುಪಿದ್ದು, ಮುಂದಿನ ಬೆಳವಣಿಗೆಗಳು ಯಾವ ಕಡೆ ಸಾಗುತ್ತವೆ ಎಂಬುದು ಕುತೂಹಲಕಾರಿಯಾಗಿದೆ. ಪ್ರಕಾಶ್ ರಾಜ್ ಅವರ ಈ 'ವಿಕ್ಟರಿ ಪೋಸ್ಟ್' ಸದ್ಯ ಸಿನಿವಲಯ ಮತ್ತು ರಾಜಕೀಯ ವಲಯ ಎರಡರಲ್ಲೂ ಸಖತ್ ಸದ್ದು ಮಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.