ಚಿತ್ರರಂಗದ ಕಾರ್ಮಿಕರಿಗೆ ಉಚಿತ ಅಕ್ಕಿ ನೀಡಿ

By Kannadaprabha NewsFirst Published Jun 10, 2021, 8:45 AM IST
Highlights

* ಚಲನಚಿತ್ರ ಅಕಾಡೆಮಿ, ಕಲಾವಿದರ ಸಂಘದಿಂದ ಸಚಿವರಿಗೆ ಮನವಿ
* ತೀವ್ರ ರೀತಿಯಲ್ಲಿ ಪರಿಣಾಮ ಬೀರಿದ ಕೊರೋನಾ ಎರಡನೇ ಅಲೆ
* ಪ್ರತಿ ಕುಟುಂಬಕ್ಕೆ 25 ಕೆಜಿ ಚೀಲದಂತೆ 5000 ಸಾವಿರ ಅಕ್ಕಿ ಚೀಲ ವಿತರಣೆ ಮಾಡಲು ಮನವಿ

ಬೆಂಗಳೂರು(ಜೂ.10): ಕೊರೋನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಕನ್ನಡ ಚಿತ್ರರಂಗದ ಕಾರ್ಮಿರಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್‌ ಪುರಾಣಿಕ್‌, ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈವ್‌ ವೆಂಕಟೇಶ್‌, ನಿರ್ದೇಶಕಿ ರೂಪಾ ಅಯ್ಯರ್‌ ಅವರನ್ನು ಒಳಗೊಂಡ ತಂಡ ಮನವಿ ಮಾಡಿದೆ.

ಬುಧವಾರ ಬೆಂಗಳೂರಿನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ್‌ ಕತ್ತಿ ಹಾಗೂ ವಾರ್ತಾ ಮತ್ತು ಸಣ್ಣ ಕೈಗಾರಿಕೆ ಸಚಿವ ಸಿ.ಸಿ.ಪಾಟೀಲ್‌ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದರು.

ಚಿತ್ರೀಕರಣದ ಮುನ್ನ ಎಲ್ರೂ ಲಸಿಕೆ ಹಾಕಿಸಿಕೊಳ್ಳಿ: ಸಚಿವ ಸುಧಾಕರ್‌ ಮನವಿ

‘ಕೊರೋನಾ ಎರಡನೇ ಅಲೆ ತೀವ್ರ ರೀತಿಯಲ್ಲಿ ಪರಿಣಾಮ ಬೀರಿದೆ. ಎಲ್ಲಾ ಕ್ಷೇತ್ರಗಳಂತೆ ಚಿತ್ರರಂಗ ಕೂಡ ತನ್ನ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಇಲ್ಲಿನ ಸಾವಿರಾರು ಕಾರ್ಮಿರಿಗೆ ದುಡಿಮೆ ಇಲ್ಲ. ಇಂಥ ಕಾರ್ಮಿಕರ ಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಪ್ರತಿ ಕುಟುಂಬಕ್ಕೆ 25 ಕೆಜಿ ಚೀಲದಂತೆ 5000 ಸಾವಿರ ಚೀಲಗಳನ್ನು ವಿತರಣೆ ಮಾಡಬೇಕು’ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

‘ಚಿತ್ರೋದ್ಯಮದ ಎಷ್ಟೋ ಕಾರ್ಮಿಕರು, ತಂತ್ರಜ್ಞರು ಪಡಿತರ ಕಾರ್ಡುಗಳನ್ನೂ ಸಹ ಹೊಂದಿರುವುದಿಲ್ಲ. ಈ ಕುಟುಂಬಗಳಿಗೆ ಆಹಾರ ಒದಗಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೆ ಸರ್ಕಾರದಿಂದ ನೀಡಲಾಗುತ್ತಿರುವ ಆರ್ಥಿಕ ನೆರವಿನ ಸದುಪಯೋಗ ಪಡೆದುಕೊಳ್ಳಲು ಚಿತ್ರೋದ್ಯಮಕ್ಕೆ ಪ್ರತ್ಯೇಕವಾಗಿ ಎರಡು ಸೇವಾಸಿಂಧು ಕೌಂಟರ್‌ ಗಳನ್ನು ತೆರೆಯಬೇಕು’ ಎಂದು ನಿಯೋಗ ಮನವಿ ಮಾಡಿಕೊಂಡಿದೆ.
 

click me!