* ಮದುವೆಯಾದ ಬೆನ್ನಲ್ಲೇ ಹೊಸ ವಿವಾದ
* ತಿರುಮಲ ದೇಗುಲ ಆವರಣದಲ್ಲಿ ನಯನತಾರಾ ಚಪ್ಪಲಿ ಧರಿಸಿ ಓಡಾಟ
* ನಿಯಮ ಉಲ್ಲಂಘಿಸಿದ್ದಕ್ಕೆ ನಟಿಗೆ ಟಿಟಿಡಿ ನೊಟೀಸ್
ತಿರುಮಲ(ಜೂ.12): ನವ ದಂಪತಿಯಾದ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಅವರು ವಿವಾಹ ಸಮಾರಂಭದ ನಂತರ ದೇವರ ಆಶೀರ್ವಾದ ಪಡೆಯಲು ತಿರುಪತಿಗೆ ತೆರಳಿ, ದೇಗುಲದ ನಿಯಮವೊಂದನ್ನು ಉಲ್ಲಂಘಿಸಿದ್ದು ಹೊಸ ವಿವಾದಕ್ಕೆ ಹುಟ್ಟುಹಾಕಿದೆ.
ತಿರುಮಲ ತಿರುಪತಿ ದೇವಾಲಯದ ಆವರಣದ ‘ಮಾಡಾ ಬೀದಿ’ಯಲ್ಲಿ ಚಪ್ಪಲಿ ಧರಿಸುವುದು ನಿಷಿದ್ಧವಾದರೂ, ನಯನತಾರಾ ಚಪ್ಪಲಿ ಧರಿಸಿ ಓಡಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಹಿನ್ನೆಲೆಯಲ್ಲಿ ಟಿಟಿಡಿ ಬೋರ್ಡಿನ ಅಧಿಕಾರಿ, ‘ನಯನತಾರಾ ದೇವಾಲಯದ ಆವರಣದಲ್ಲಿ ಚಪ್ಪಲಿ ಧರಿಸಿ ಓಡಾಡಿದ್ದಾರೆ. ಅಲ್ಲದೇ ದೇವಾಲಯದ ಆವರಣದಲ್ಲಿಯೇ ಫೋಟೋಶೂಟ್ ನಡೆಸಿದ್ದಾರೆ. ಚಪ್ಪಲಿ ಧರಿಸುವುದು, ಫೋಟೊ ತೆಗೆಯುವುದು ಎರಡನ್ನೂ ದೇವಾಲಯದ ಆವರಣದಲ್ಲಿ ನಿಷೇಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಯನತಾರಾ ಅವರು ಕ್ಷಮಾಪಣಾ ವಿಡಿಯೋ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ವಿಘ್ನೇಶ್ ಈಗಾಗಲೇ ಕ್ಷಮಾಪಣೆ ಕೋರಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ’ ಎಂದಿದ್ದಾರೆ.
‘ಆದರೂ, ನಿಯಮ ಉಲ್ಲಂಘಿಸಿದ ನಟಿಗೆ ಕಾನೂನಾತ್ಮಕವಾಗಿ ನೊಟೀಸ್ ಕೂಡಾ ಕಳುಹಿಸಲಾಗುವುದು’ ಎಂದು ತಿಳಿಸಿದ್ದಾರೆ.