
‘ಇಲ್ಲಿ ಲಾಜಿಕ್ ವರ್ಕೌಟ್ ಆಗಲ್ಲ, ಮ್ಯಾಜಿಕ್ ನಡೆಯಬೇಕು’. ಕುಖ್ಯಾತ ಕೇಸೊಂದನ್ನು ಬಗೆಹರಿಸಲು ತಿಣುಕಾಡುವಾಗ ಡಿಟೆಕ್ಟಿವ್ ತೀಕ್ಷ್ಣ ಹೇಳುವ ಡೈಲಾಗ್ ಇದು. ಲೈಫಲ್ಲೂ ಎಷ್ಟೋ ಸಲ ಹೀಗಾಗುತ್ತದೆ, ನಮ್ಮ ಯಾವ ಲೆಕ್ಕಾಚಾರಕ್ಕೂ ಸಿಗದ ಕೆಲವು ಸಂಗತಿಗಳು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಉತ್ತರ ಕಂಡುಕೊಳ್ಳುತ್ತವೆ. ಈ ಸಿನಿಮಾದಲ್ಲಿ ಅಂಥಾದ್ದೊಂದು ದೃಶ್ಯ ಬರುತ್ತದೆ. ಸನ್ನಿವೇಶಕ್ಕೆ ಸಂಬಂಧವೇ ಇಲ್ಲದಂಥಾ ಕಾಮಿಡಿ ಪಾತ್ರವೊಂದರ ಸಿಲ್ಲಿ ನಡೆ ಇಡೀ ಕಥೆಗೆ ತಿರುವು ತರುತ್ತದೆ.
ಇದನ್ನು ಬಹಳ ಸಹಜವಾಗಿ ಸಿನಿಮಾದಲ್ಲಿ ತರುವಲ್ಲಿ ನಿರ್ದೇಶಕ ತ್ರಿವಿಕ್ರಮ ರಘು ಯಶಸ್ವಿಯಾಗಿದ್ದಾರೆ. ಅಧಿಕಾರಶಾಹಿಯ ಅಟ್ಟಹಾಸದಲ್ಲಿ ಅರಣ್ಯ ಇಲಾಖೆಯ ಪ್ರಾಮಾಣಿಕ ಅಧಿಕಾರಿ ಪರಶುರಾಮ್ ಹತ್ಯೆಯಾಗುತ್ತದೆ. ನ್ಯಾಯ ಕೇಳಲು ಹೋದ ಆತನ ಪತ್ನಿ ಅವಮಾನ ತಾಳಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅವರ ಪುಟ್ಟ ಮಗಳು ಮಂದಾರ ಅನಾಥೆಯಾಗುತ್ತಾಳೆ. ಕೋರ್ಟ್ ಹೊರಗೆ ಟೈಪಿಂಗ್ ಕೆಲಸ ಮಾಡುವ ತಾತ ಇವಳಿಗೆ ಟೈಪಿಂಗ್ ಕಲಿಸಿ ಸ್ವಾವಲಂಬಿ ಬದುಕಿಗೆ ದಾರಿಯಾಗುತ್ತಾರೆ.
ಟೈಪಿಂಗ್ ಮಾಡುವಾಗಲೇ ಕಾನೂನಿನ ಮರ್ಮವನ್ನೆಲ್ಲ ಅರೆದು ಕುಡಿಯುವ ಮಂದಾರ ಮುಂದೆ ಡಿಟೆಕ್ಟಿವ್ ತೀಕ್ಷ್ಣ ಆಗಿ ಬದಲಾಗಿ ನೊಂದವರಿಗೆ ನಂದಾದೀಪವಾಗಿ, ದುಷ್ಟರಿಗೆ ದುರ್ಗಿಯಾಗಿ ಕಾಡುವ ಕಥೆಯೇ ಡಿಟೆಕ್ಟಿವ್ ತೀಕ್ಷ್ಣಾ ಸಿನಿಮಾ. ಚುರುಕು ಬುದ್ಧಿ, ಹರಿತ ಫೈಟೇ ಅವಳ ತಾಕತ್ತು. ಸ್ಪೈ ಕಥೆಗಳಿಗೆ ಸಹಜವಾಗಿ ಪ್ರೇಕ್ಷಕನಲ್ಲಿ ಕುತೂಹಲ ಹುಟ್ಟುಹಾಕುವ ಗುಣ ಇರುತ್ತದೆ. ಈ ಸಿನಿಮಾವೂ ಅದರಲ್ಲಿ ಹಿಂದೆ ಬಿದ್ದಿಲ್ಲ. ಚುರುಕಾದ ಸಂಭಾಷಣೆ, ಚಿತ್ರಕಥೆ ಪೂರಕವಾಗಿದೆ.
ಸಿನಿಮಾ : ಡಿಟೆಕ್ಟಿವ್ ತೀಕ್ಷ್ಣ
ನಿರ್ದೇಶನ: ತ್ರಿವಿಕ್ರಮ್ ರಘು
ತಾರಾಗಣ : ಪ್ರಿಯಾಂಕ ಉಪೇಂದ್ರ, ಅರುಣಾ ಬಾಲರಾಜ್, ಕೆ.ಎಸ್.ಶ್ರೀಧರ್, ವಿಜಯ್ಸೂರ್ಯ
ರೇಟಿಂಗ್ : 3
ಆದರೆ ಕೊನೆ ಮಾತ್ರ ಅಸಹಜವಾಗಿದೆ. ಎರಡನೇ ಭಾಗ ತರುವ ನೆವದಲ್ಲಿ ಕಥೆಯನ್ನು ಅರೆಬರೆಯಾಗಿ ಮುಕ್ತಾಯ ಮಾಡಲಾಗಿದೆ. ಹಾಡುಗಳು ಕಥೆಯ ಓಟಕ್ಕೆ ತಡೆಯಾಗುತ್ತವೆ. ಇಡೀ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಎನರ್ಜಿ ಗಮನಸೆಳೆಯುತ್ತದೆ. ಅರುಣಾ ಬಾಲರಾಜ್ ನಟನೆ ಮನತಟ್ಟುವ ಹಾಗಿದೆ. ವಿಜಯ್ ಸೂರ್ಯ ಮಿಂಚಿನಂತೆ ಬಂದುಹೋಗುತ್ತಾರೆ. ಸ್ಪೈ ಸಿನಿಮಾಸಕ್ತರಿಗೆ ಸರಳವಾಗಿ ಮನರಂಜನೆ ನೀಡುವ ಚಿತ್ರವಿದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.